ಮಡಿಕೇರಿ, ಫೆ. 12: ಮಡಿಕೇರಿ ಅನುದಾನಿತ ಶಾಲಾ ಕಾಲೇಜುಗಳ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘದ ಕೊಡಗು ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಡಳಿತದ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
2006ರ ಏಪ್ರಿಲ್ 1ಕ್ಕೂ ಮೊದಲು ನೇಮಕವಾಗಿ ನಂತರ ಅನುದಾನಕ್ಕೊಳಪಟ್ಟ ನೌಕರರ ಅನುದಾನ ರಹಿತ ಅವಧಿಯ ಸೇವೆಯನ್ನು ಕಾಲ್ಪನಿಕವಾಗಿ ಪರಿಗಣಿಸಿ ‘ಹಳೆಯ ನಿಶ್ಚಿತ ಪಿಂಚಣಿ ಸೌಲಭ್ಯ’ ಒದಗಿಸಬೇಕು. 2006ರ ಏಪ್ರಿಲ್ 1ರ ನಂತರ ನೇಮಕವಾದ ನೌಕರರಿಗೆ ನೂತನ ಪಿಂಚಣಿ ಯೋಜನೆಯನ್ನು ಸರ್ಕಾರಿ ನೌಕರರಿಗೆ ನೀಡುತ್ತಿರುವಂತೆ ಯಥಾವತ್ತಾಗಿ ನೀಡಬೇಕು ಎಂದು ಆಗ್ರಹಿಸಿದರು.
ಅನುದಾನಿತ ಶಾಲಾ ಕಾಲೇಜು ನೌಕರರಿಗೂ ಆರೋಗ್ಯ ಸಿರಿ (ಜ್ಯೋತಿ ಸಂಜೀವಿನಿ) ಯೋಜನೆಯನ್ನು ಜಾರಿಗೆ ತರುವುದು. ಖಾಲಿ ಹುದ್ದೆಗಳನ್ನು ತುಂಬಿಕೊಳ್ಳಲು ವಿಧಿಸಿರುವ ನಿಯಮಗಳನ್ನು ಸಡಿಲಗೊಳಿಸಿ ಹುದ್ದೆಗಳನ್ನು ತುಂಬಲು ಅವಕಾಶ ಕಲ್ಪಿಸುವುದು. ಅನುದಾನಿತ ಶಾಲಾ ಮಕ್ಕಳಿಗೂ ಸರ್ಕಾರಿ ಶಾಲಾ ಮಕ್ಕಳಿಗೆ ನೀಡುತ್ತಿರುವ ಎಲ್ಲಾ ಸೌಲಭ್ಯಗಳನ್ನು ಯಥಾವತ್ತಾಗಿ ನೀಡುವುದು. ಮಾನ್ಯತೆ ನವೀಕರಣವನ್ನು ಸರಳೀಕರಿಸಬೇಕು ಎಂದು ಒತ್ತಾಯಿಸಿದರು.
2000 ಇಸವಿಯ ಹಿಂದೆ ನೇಮಕಾತಿ ಹೊಂದಿ ಅನುಮೋದನೆಯಾಗದೆ ಉಳಿದಿರುವ ಕೆಲವೇ ಡಿ ಗ್ರೂಪ್ ನೌಕರರನ್ನು ಖಾಯಂಗೊಳಿಸಬೇಕು. ಈ ಎಲ್ಲ್ಲಾ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಅಗತ್ಯ ಕ್ರಮ ವಹಿಸಬೇಕು. ತಾ. 26ರೊಳಗೆ ಬೇಡಿಕೆಗಳ ಬಗ್ಗೆ ಸ್ಪಂದಿಸದೇ ಇದ್ದಲ್ಲಿ ತಾ. 28ರಿಂದ ಅನಿರ್ದಿಷ್ಟಾವಧಿ ಶಾಲಾ ಕಾಲೇಜುಗಳನ್ನು ಬಂದ್ ಮಾಡಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.
ಕನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘದ ಕೊಡಗು ಘಟಕದ ಜಿಲ್ಲಾಧ್ಯಕ್ಷ ಪ್ರಭುಕುಮಾರ್, ಕಾರ್ಯದರ್ಶಿ ರವಿಪೂಜಾರ್, ವೀರಾಜಪೇಟೆ ತಾಲೂಕು ಅಧÀ್ಯಕ್ಷ ರೋಹಿತ್, ಕಾರ್ಯದರ್ಶಿ ಗಿಡ್ಡಯ್ಯ, ಸುಬ್ರಮಣಿ, ಮಡಿಕೇರಿ ತಾಲೂಕಿನ ನಿರ್ದೇಶಕರುಗಳಾದ ಶಿವಪ್ರಸಾದ್, ಅಶೋಕ್, ಮಂಜು ಮನವಿ ಸಲ್ಲಿಕೆ ವೇಳೆ ಹಾಜರಿದ್ದರು.