ಮಡಿಕೇರಿ, ಫೆ. 11: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಸಾಂಕ್ರಾಮಿಕ ರೋಗಗಳ ಘಟಕ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ವತಿಯಿಂದ ವಿಶ್ವ ಕ್ಯಾನ್ಸರ್ ಜಾಗೃತಿ ದಿನ ಹಾಗೂ ಸಪ್ತಾಹ ಕಾರ್ಯಕ್ರಮದ ಪ್ರಯುಕ್ತ ಜಿ.ಪಂ. ಸಿಇಒ ಭಂವರ್ ಸಿಂಗ್ ಮೀನಾ ಅವರ ಅಧ್ಯಕ್ಷತೆಯಲ್ಲಿ ಉಚಿತ ತಪಾಸಣೆ ಮತ್ತು ಅರಿವು ಕಾರ್ಯಕ್ರಮ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಉದ್ಘಾಟಿಸಿ ಮಾತನಾಡಿ, ಜೀವನಶೈಲಿ, ಕೃತಕ ಬಣ್ಣ, ಕರಿದ ಪದಾರ್ಥಗಳ ಸೇವನೆ, ಪ್ಯಾಕೇಜ್ ಐಟಂಗಳ ಸೇವನೆ, ತೆಳು ಪ್ಲಾಸ್ಟಿಕ್ ಸಾಮಗ್ರಿಗಳಲ್ಲಿ ಬಿಸಿ ಪದಾರ್ಥಗಳ ಸೇವನೆ ಹಾಗೂ ತಂಬಾಕು ಸೇವನೆ ಮಾಡುವುದರಿಂದ ಕ್ಯಾನ್ಸರ್ ಬರುವ ಸಾಧ್ಯತೆ ಇದೆ. ಇದಕ್ಕಾಗಿ ಉತ್ತಮವಾದ ಹಣ್ಣು, ತರಕಾರಿ, ಪೌಷ್ಠಿಕ ಆಹಾರ ಉಪಯೋಗಿಸಬೇಕು. ಸಾಧ್ಯವಾದಷ್ಟು ಮನೆಯಲ್ಲಿಯೇ ತಯಾರಿಸಿದ ಆಹಾರ ಸೇವಿಸಬೇಕು. ಇದರಿಂದ ಕ್ಯಾನ್ಸರ್ ಬರದಂತೆ ಎಚ್ಚರವಹಿಸಬಹುದು. ಕ್ಯಾನ್ಸರ್ ಕಾಯಿಲೆಗೆ ಯಾರೂ ಭಯಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.

ಜಿ.ಪಂ. ಸಿಇಒ ಭನ್ವರ್ ಸಿಂಗ್ ಮೀನಾ ಮಾತನಾಡಿ, ಕ್ಯಾನ್ಸರ್ ರೋಗದ ಬಗ್ಗೆ ಎಲ್ಲರಿಗೂ ಅರಿವು ಇರಬೇಕು. ಉತ್ತಮ ಜೀವನಶೈಲಿಯನ್ನು ಮೈಗೂಡಿಸಿಕೊಳ್ಳಬೇಕು. ಉತ್ತಮ ಆಹಾರ, ಹಣ್ಣು ತರಕಾರಿ ಸೇವನೆ ಮಾಡಬೇಕು. ತಂಬಾಕು ಸೇವನೆ ಮಾಡಬಾರದು. ಪ್ರಾರಂಭದಲ್ಲಿಯೇ ರೋಗಲಕ್ಷಣಗಳ ಬಗ್ಗೆ ಪರೀಕ್ಷಿಸಿಕೊಂಡು ಕ್ಯಾನ್ಸರ್‍ನಿಂದ ಆಗುವ ತೊಂದರೆ ಹಾಗೂ ಸಾವುಗಳನ್ನು ತಡೆಗಟ್ಟಲು ಪ್ರಯತ್ನಿಸಬೇಕು ಎಂದರಲ್ಲದೆ ಸರ್ಕಾರದ ಎಬಿಎಆರ್‍ಕೆ ಹಾಗೂ ಇತರ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಕಾರ್ಯಪ್ಪ ಮಾತನಾಡಿ, ಎಲ್ಲಾ ವಿಭಾಗಗಳಲ್ಲಿ ಕ್ಯಾನ್ಸರ್ ರೋಗದ ಬಗ್ಗೆ ಪತ್ತೆ ಹಚ್ಚಿದಲ್ಲಿ ಅಥವಾ ರೋಗ ಲಕ್ಷಣಗಳು ಕಂಡುಬಂದಲ್ಲಿ ಅವರಿಗೆ ಮಾರ್ಗದರ್ಶನ ನೀಡಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಗೆ ರೆಫರ್ ಮಾಡಲಾಗುತ್ತದೆ. ಅಲ್ಲದೇ ಅವರಿಗೆ ಸರ್ಕಾರ ಹಾಗೂ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ತಿಳಿಸಿಕೊಡಲಾಗುತ್ತದೆ ಹಾಗೂ ರೋಗಿಗಳಿಗೆ ಪೌಷ್ಟಿಕ ಆಹಾರ ಸೇವನೆ, ಉತ್ತಮ ಜೀವನಶೈಲಿ ಬಗ್ಗೆ ಸಲಹೆ ಮಾರ್ಗದರ್ಶನ ನೀಡಲಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ವೆಂಕಟೇಶ್ ಮಾತನಾಡಿ, ಅಪಘಾತಗಳಿಂದಾಗುವ ಸಾವಿನ ನಂತರ ಕ್ಯಾನ್ಸರ್‍ನಿಂದಾಗುವ ಸಾವುಗಳೇ ಹೆಚ್ಚು ಎಂದು ಹೇಳಿದರಲ್ಲದೆ ಕ್ಯಾನ್ಸರ್‍ಗಳ ವಿಧಗಳ ಬಗ್ಗೆ ತಿಳಿಸಿದರು. ಗುಟ್ಕಾ, ಪಾನ್, ಜರ್ದಾ ಸೇವನೆಯಿಂದ ಬಾಯಿಯ ಕ್ಯಾನ್ಸರ್ ಬರುತ್ತದೆ ಎಂದು ನುಡಿದರು.

ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ಎನ್. ಆನಂದ್ ಮಾತನಾಡಿ, ಕ್ಯಾನ್ಸರ್ ರೋಗ ತಗಲುವ ಸೂಚಕ ಲಕ್ಷಣಗಳಾದ ಗಾಯ ತುಂಬಾ ದಿನದಿಂದ ವಾಸಿಯಾಗದೇ ಇರುವುದು, ಮಚ್ಚೆಗಳಲ್ಲಿ ಬದಲಾವಣೆ ಆಗುವುದು, ಅಸಹಜ ರಕ್ತಸ್ರಾವ, ಬಹಳ ದಿನಗಳಿಂದ ಕೆಮ್ಮು, ಬಹಳ ದಿನಗಳಿಂದ ದ್ವನಿ ಬದಲಾವಣೆ, ಮೂತ್ರಮಲ ವಿಸರ್ಜನಾ ಕ್ರಮಗಳಲ್ಲಿ ಏರುಪೇರು, ಆಹಾರ ನುಂಗುವಾಗ ತೊಂದರೆ, ನೋವಿಲ್ಲದ ಗಡ್ಡೆ-ಊತ, ಈ ಲಕ್ಷಣಗಳು ಇದ್ದಲ್ಲಿ ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಬಂದು ಪರೀಕ್ಷಿಸಿಕೊಳ್ಳಲು ಸಲಹೆ ನೀಡಿದರು.

ವಿಶ್ವ ಕ್ಯಾನ್ಸರ್ ದಿನ ಹಾಗೂ ಸಪ್ತಾಹವನ್ನು ಫೆಬ್ರವರಿ 4 ರಿಂದ ಫೆಬ್ರವರಿ 10 ರವರೆಗೆ ಜಿಲ್ಲೆಯಲ್ಲಿ ಆಚರಿಸುತ್ತಿದ್ದು, ಇದರ ಬಗ್ಗೆ ಅಸಾಂಕ್ರಾಮಿಕ ಕ್ಲಿನಿಕ್‍ಗಳನ್ನು ಆಯೋಜಿಸಿ ಕ್ಯಾನ್ಸರ್ ರೋಗ ಪತ್ತೆಗೆ ಕ್ರಮಕೈಗೊಂಡಿರುವುದಾಗಿ ತಿಳಿಸಿದರು. ಅಲ್ಲದೇ ಭಿತ್ತಿಪತ್ರ ಹಾಗೂ ಕರಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಕೊಡಗು ವೈದ್ಯಕೀಯ ಸಂಸ್ಥೆಯ ಪ್ರಾಂಶುಪಾಲ ಡಾ. ವಿಶಾಲ್, ಡಾ. ಮಹದೇವ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಟಿ.ಎನ್. ಪಾಲಾಕ್ಷ, ಡಾ. ಶಾಂಭವಿ, ಲಕ್ಷ್ಮಿದೇವಿ, ಪ್ರಿಯಾ, ರಮೇಶ್ ಹಾಗೂ ಜಿಲ್ಲಾ ಆಸ್ಪತ್ರೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಹಾಜರಿದ್ದರು. ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ಆನಂದ್ ಎನ್, ಸ್ವಾಗತಿಸಿ, ವಂದಿಸಿದರು.