ಮಡಿಕೇರಿ, ಜ. ೨೮: ಕೆ.ನಿಡುಗಣೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ೮ ಎಕರೆ ಜಾಗದಲ್ಲಿ ರೂ. ೩೬ ಲಕ್ಷ ವೆಚ್ಚದ ಸರಕಾರಿ ಜಿಲ್ಲಾ ಗೋಶಾಲೆ ನಿರ್ಮಾಣಕ್ಕೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಭೂಮಿಪೂಜೆ ನೆರವೇರಿಸುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು.

ನಂತರ ಮಾತನಾಡಿದ ಶಾಸಕ ಅಪ್ಪಚ್ಚು ರಂಜನ್, ರಾಜ್ಯ ಸರಕಾರದ ವತಿಯಿಂದ ರೂಪಿಸಿರುವ ಜಿಲ್ಲೆಗೊಂದು ಗೋಶಾಲೆ ಯೋಜನೆ ವತಿಯಿಂದ ಈ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಸರಕಾರ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡುವ ಮೂಲಕ ಗೋ ಸಂತತಿಯ ಉಳಿವಿಗೆ ಮುಂದಾಗಿದೆ. ಇದರೊಂದಿಗೆ ಗೋಶಾಲೆ ನಿರ್ಮಾಣದ ಮೂಲಕ ಗೋವಿಗೆ ಆಶ್ರಯ ನೀಡಲಾಗುವ ಯೋಜನೆ ಸರಕಾರ ಕೈಗೊಂಡಿರುವುದು ಶ್ಲಾಘನೀಯ. ಸದ್ಯಕ್ಕೆ ರೂ. ೩೬ ಲಕ್ಷ ಅನುದಾನ ನೀಡಲಾಗಿದ್ದು, ಹೆಚ್ಚುವರಿ ರೂ. ೧೫ ಕೋಟಿ ನೀಡಬೇಕೆಂಬ ಚಿಂತನೆ ಇದೆ. ಭಾರತದಲ್ಲಿ ಗೋವನ್ನು ತಾಯಿಯಂತೆ ಕಾಣುತ್ತೇವೆ ಎಂದರು. ಆದ್ದರಿಂದ ಗೋವಿನ ಪಾಲನೆ ಸರಕಾದ ಮೂಲಕವೇ ಆಗಲಿದೆ.

ಗೋಮಾಳದ ೨೧ ಎಕರೆ ಜಾಗವನ್ನು

(ಮೊದಲ ಪುಟದಿಂದ) ಗೋಶಾಲೆಗೆ ಮೀಸಲಿಡಬೇಕೆಂಬ ಜನರ ಮನವಿ ಸಂಬAಧ ಮಾತನಾಡಿದ ಶಾಸಕರು, ಗೋಮಾಳ ಜಾಗವನ್ನು ಅದೇ ಉದ್ದೇಶಕ್ಕೆ ಬಳಸಿಕೊಳ್ಳಲಾಗುವುದು. ಗೋವಿನ ಸಂಖ್ಯೆ ಹೆಚ್ಚಾದಂತೆ ಗೋಶಾಲೆ ವಿಸ್ತರಣೆಗೆ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ರಾಜ್ಯ ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ, ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ, ಪಶುಪಾಲನ ಇಲಾಖೆಯ ಉಪನಿರ್ದೇಶಕ ಡಾ. ಪಿ. ಸುರೇಶ್ ಭಟ್, ಕೆ.ನಿಡುಗಣೆ ಗ್ರಾ.ಪಂ. ಅಧ್ಯಕ್ಷ ಕೊಕ್ಕಲೇರ ಅಯ್ಯಪ್ಪ, ಸದಸ್ಯರುಗಳಾದ ರೀಟಾ ಮುತ್ತಣ್ಣ, ಡೀನ್ ಬೋಪಣ್ಣ, ಜಾನ್‌ಸನ್, ಬಿ.ಎಂ. ಸತೀಶ್, ಪಿ.ಸಿ. ರಘು, ಪ್ರಾಣಿ ದಯಾಸಂಘದ ಡಾ. ಅಯ್ಯಪ್ಪ, ಹಿರಿಯರಾದ ಎಂ.ಬಿ. ದೇವಯ್ಯ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಇಲಾಖೆ ಉಪನಿರ್ದೇಶಕ ಡಾ. ಸುರೇಶ್ ಭಟ್ ಅವರು ಯೋಜನೆ ಬಗ್ಗೆ ವಿವರಣೆ ನೀಡಿ ಮುಂದೆ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿ, ಸಾರ್ವಜನಿಕರನ್ನು ಒಳಗೊಂಡ ಪ್ರಾಣಿದಯಾ ಸಂಘದ ಮೂಲಕ ಗೋಶಾಲೆ ನಿರ್ವಹಣೆ ನಡೆಸಲಾಗುವುದು ಎಂದರು.

ಇದಕ್ಕೂ ಮುನ್ನ ಗ್ರಾಮದ ಹಿರಿಯ ನಿವಾಸಿ ಎಂ.ಬಿ. ದೇವಯ್ಯ ಅವರು ಜಿಲ್ಲಾಧಿಕಾರಿಗಳಲ್ಲಿ ಗೋಶಾಲೆಗೆ ಮೀಸಲಿಟ್ಟಿರುವ ೨೧ ಎಕರೆ ಜಾಗದಲ್ಲಿ ಕೇವಲ ೮ ಎಕರೆ ಮಾತ್ರ ನೀಡಲಾಗಿದ್ದು, ಉಳಿದ ಜಾಗವನ್ನು ಬೇರೆ ಯಾವುದೇ ಯೋಜನೆಗೆ ಮೀಸಲಿಡದಂತೆ ಮನವಿ ಮಾಡಿದರು.