ಗೋಣಿಕೊಪ್ಪಲು, ಜ. ೨೮: ನಗರದಲ್ಲಿ ಪ್ರಗತಿ ಆಟೋ ಚಾಲಕ ಹಾಗೂ ಮಾಲೀಕರ ಸಂಘ ಅಸ್ತಿತ್ವಕ್ಕೆ ಬಂದಿದೆ. ನೂತನ ಸಂಘದ ಅಧ್ಯಕ್ಷರಾಗಿ ಮಲ್ಲಂಡ ಪ್ರಕಾಶ್ ಆಯ್ಕೆಗೊಂಡಿದ್ದಾರೆ.
ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಂಘದ ನೂತನ ಆಟೋ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಹೈಕೋರ್ಟ್ ಹಿರಿಯ ವಕೀಲ ಅಜ್ಜಿಕುಟ್ಟಿರ ಪೊನ್ನಣ್ಣ, ಸಂಘಟನೆ ಆರಂಭಿಸುವುದು ಕಷ್ಟದ ಕೆಲಸವಲ್ಲ ಅದನ್ನು ಮುನ್ನೆಡೆಸುವುದು ಅಷ್ಟು ಸುಲಭದ ಮಾತಲ್ಲ. ಸಂಘಟನೆಗಳು ಸಾಧ್ಯವಾದಷ್ಟು ರಾಜಕೀಯದಿಂದ ದೂರವಿರಬೇಕು, ಸಂಘವು ಬೈಲಾದ ನಿಯಮದಂತೆ ನಡೆಯಬೇಕು. ಆಗಾದಲ್ಲಿ ಸಂಘವು ಸಾರ್ಥಕತೆ ಸಾಧಿಸಲಿದೆ ಎಂದ ಅವರು, ತಮ್ಮ ಸ್ವಾರ್ಥಕೋಸ್ಕರ ಸಂಘಟನೆಯನ್ನು ಬಳಕೆ ಮಾಡಿಕೊಳ್ಳದಿರಿ, ಸಂಘದ ಸದಸ್ಯರ ಹಿತ ಕಾಪಾಡುವುದಲ್ಲದೇ, ಸಮಾಜದಲ್ಲಿ ಕಷ್ಟಕ್ಕೆ ಸಿಲುಕಿದವರ ಸಹಾಯಕ್ಕೆ ನಿಲ್ಲುವ ಕೆಲಸವಾಗಬೇಕು ಎಂದು ಕಿವಿಮಾತು ಹೇಳಿದರು.
ಸಂಘದ ನೂತನ ಅಧ್ಯಕ್ಷ ಮಲ್ಲಂಡ ಪ್ರಕಾಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ನಗರದಲ್ಲಿ ಆಟೋ ಚಾಲಕರು ಏಕಮುಖ ಸಂಚಾರ ವ್ಯವಸ್ಥೆಯಡಿಯಲ್ಲಿ ಕಷ್ಟ ಎದುರಿಸುತ್ತಿದ್ದಾರೆ. ಇದರಿಂದ ಸಾಮಾನ್ಯ ಜನರು ಆಟೋದಲ್ಲಿ ಸಂಚಾರ ಮಾಡುವಾಗ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಾರೆ, ಇವುಗಳ ವಿಚಾರದಲ್ಲಿ ಜಿಲ್ಲಾಡಳಿತ ಗಮನ ಸೆಳೆಯಲಾಗುವುದು, ಚಾಲಕರು ಸಂಕಷ್ಟಕ್ಕೆ ಸಿಲುಕಿದಾಗ ಅವರ ಕಷ್ಟಕ್ಕೆ ಪ್ರತಿ ಚಾಲಕರು ಕೂಡಲೇ ಸ್ಪಂದಿಸುವ ಕೆಲಸ ಮಾಡಬೇಕು, ಸಮಾಜದ ಜನರ ಕಷ್ಟದಲ್ಲೂ ಭಾಗಿಗಳಾಗಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಬಿಜೆಪಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಗುಮ್ಮಟೀರ ಕಿಲನ್ ಗಣಪತಿ, ಸಮಾಜದಲ್ಲಿ ಸಂಘಟನೆಗಳು ಹೆಚ್ಚಾಗಬೇಕು, ಇದರಿಂದಾಗಿ ಸಾಮಾನ್ಯ ಜನರು ಕಷ್ಟಕ್ಕೆ ಸಿಲುಕಿದ ವೇಳೆ ಸ್ಪಂದಿಸುವ ಕೆಲಸವಾಗುತ್ತದೆ, ಮಾನವೀಯ ಮೌಲ್ಯಗಳಿಗೆ ಬೆಲೆ ಸಿಗುವಂತಹ ಕೆಲಸವಾಗಲಿ ಎಂದರು.
ಗೋಣಿಕೊಪ್ಪಲುವಿನ ಹಿರಿಯ ವರ್ತಕ ಅಜಿತ್ ಅಯ್ಯಪ್ಪ, ಗ್ರಾ. ಪಂ. ಸದಸ್ಯ ಕುಲ್ಲಚಂಡ ಪ್ರಮೋದ್ ಗಣಪತಿ, ಮಾತನಾಡಿದರು.
ಪೊನ್ನಂಪೇಟೆಯ ಝೋನಲ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮತ್ರಂಡ ದಿಲ್ಲು ಸೇರಿದಂತೆ ಸೇರಿದಂತೆ ಇನ್ನಿತರ ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಈ ಸಂದರ್ಭ ಸಂಘದ ನೂತನ ಲೋಗೋವನ್ನು ಅತಿಥಿಗಳು ಅನಾವರಣಗೊಳಿಸಿದರು. ಪ್ರ. ಕಾರ್ಯದರ್ಶಿ ಡಾಡು ಜೋಸೆಫ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ವಂದಿಸಿದರು.
ಕಾರ್ಯಕ್ರಮದಲ್ಲಿ ಆಟೋ ಚಾಲಕ ಸಂಘದ ನೂರಾರು ಚಾಲಕರು ಹಾಗೂ ಮಾಲೀಕರು ಭಾಗವಹಿಸಿದ್ದರು.