ಮಡಿಕೇರಿ, ಜ. ೨೪: ರಾಜ್ಯ ಸರಕಾರ ವಿವಿಧ ಜಿಲ್ಲೆಗಳಿಗೆ ಈ ಹಿಂದೆ ನಿಯೋಜಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವರುಗಳನ್ನು ದಿಢೀರನೆ ಬದಲಾವಣೆ ಮಾಡಿದೆ. ಈ ಬಗ್ಗೆ ಇಂದು ರಾಜ್ಯ ಸರಕಾರ ಅಧಿಕೃತ ಪ್ರಕಟಣೆ ಹೊರಡಿಸಿದೆ.

ಕೊಡಗು ಜಿಲ್ಲಾ ಉಸ್ತುವಾರಿ ಹಾಗೂ ಕೋವಿಡ್ ಉಸ್ತುವಾರಿ ಸಚಿವರಾಗಿ ರಾಜ್ಯದ ಶಿಕ್ಷಣ ಸಚಿವರಾಗಿರುವ ತುಮಕೂರುವಿನ ಬಿ.ಸಿ. ನಾಗೇಶ್ ಅವರನ್ನು ನೇಮಕ ಮಾಡಿದೆ. ಈ ಹಿಂದೆ ತಾ. ೧೦.೯.೨೦೨೧ ರಲ್ಲಿ ಕೊಡಗು ಉಸ್ತುವಾರಿಯಾಗಿ ಸಮಾಜ ಕಲ್ಯಾಣ ಸಚಿವರಾಗಿರುವ ದಕ್ಷಿಣ ಕನ್ನಡದ ಕೋಟ ಶ್ರೀನಿವಾಸ್ ಪೂಜಾರಿ ಅವರನ್ನು ನೇಮಕ ಮಾಡಲಾಗಿದ್ದು, ಈ ತನಕ ಶ್ರೀನಿವಾಸ್ ಪೂಜಾರಿ ಅವರು ಕರ್ತವ್ಯ ನಿಭಾಯಿಸಿದ್ದಾರೆ. ಇದೀಗ ಅವರನ್ನು ಉತ್ತರ ಕನ್ನಡ ಜಿಲ್ಲೆಗೆ ನಿಯೋಜಿಸಲಾಗಿದೆ.

ಸರಕಾರ ಹಾಗೂ ಮುಖ್ಯಮಂತ್ರಿಗಳು ದಿಢೀರನೆ ಕೈಗೊಂಡಿರುವ ಈ ಹೊಸ ತೀರ್ಮಾನ ಸಾರ್ವಜನಿಕ ವಲಯದಲ್ಲಿ ಅಚ್ಚರಿ ಮೂಡಿಸಿದೆ. ಸದ್ಯದಲ್ಲೇ ಸಚಿವ ಸಂಪುಟ ಪುನರ್ ರಚನೆಯಾಗುವ ಕುರಿತಾಗಿ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.