ಮಡಿಕೇರಿ, ಜ. ೧೯: ಕರ್ನಾಟಕ ಸರ್ಕಾರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜನಾರೋಗ್ಯ ಕೇಂದ್ರ, ಎಪಿಡೀಮಿಯಾಲಾಜಿ ವಿಭಾಗ, ನಿಮ್ಹಾನ್ಸ್, ಬೆಂಗಳೂರು ಇವರ ಸಹಯೋಗದಲ್ಲಿ ಅನುಷ್ಠಾನಗೊಂಡಿರುವ ಹಾಗೂ ರಾಜ್ಯ ಸರ್ಕಾರದ ಅನುದಾನಿತ ಯೋಜನೆಯಾದ ಯುವ ಜನರ ಮಾನಸಿಕ ಆರೋಗ್ಯಕ್ಕೆ ಪೂರಕ ಸೇವೆಗಳ ಸಮಗ್ರ ಅಭಿವೃದ್ಧಿ ಮತ್ತು ಅನುಷ್ಠಾನ ಯೋಜನೆಯಡಿಯಲ್ಲಿ ಯುವ ಪರಿವರ್ತಕರಾಗಿ ಕಾರ್ಯನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

೨೧ ರಿಂದ ೩೫ ವರ್ಷದೊಳಗಿನ ಪದವಿ ಹಾಗೂ ಮೇಲ್ಪಟ್ಟು ವಿದ್ಯಾಭ್ಯಾಸ ಮಾಡಿರುವ ಕನ್ನಡವನ್ನು ಸ್ಪಷ್ಟವಾಗಿ ಮಾತನಾಡುವ ಸಮುದಾಯದಲ್ಲಿ ಕೆಲಸ ಮಾಡಲು ಆಸಕ್ತಿ ಇರುವ, ಹುಮ್ಮಸ್ಸು, ಉತ್ತಮ ವ್ಯಕ್ತಿತ್ವ ಸಂವಹನ ಕೌಶಲ್ಯದ ಜೊತೆಗೆ ಸಂವಾದ ಕೌಶಲ್ಯವನ್ನು ಹೊಂದಿರುವ ಸಮುದಾಯದಲ್ಲಿ ಯುವ ಜನರಿಗೆ ತರಬೇತಿ ಕಾರ್ಯಕ್ರಮಗಳನ್ನು ನಡೆಸಲು ಆಸಕ್ತಿ ಹೊಂದಿರಬೇಕು. ಕೊಡಗು ಜಿಲ್ಲೆಯಲ್ಲಿ ಪ್ರಯಾಣಿಸುವಂತಹ ಸೇವಾ ಮನೋಭಾವ ಹೊಂದಿರುವ, ಅರ್ಹತಾ ಮಾನದಂಡಗಳನ್ನು ಹೊಂದಿರುವ ಅಭ್ಯರ್ಥಿಗಳು ತಮ್ಮ ಸ್ವ ವಿವರಗಳು ಮತ್ತು ಅಂಕಪಟ್ಟಿಗಳನ್ನು ತಾ. ೨೧ ರೊಳಗೆ ಯುವ ಸ್ಪಂದನ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜನರಲ್ ತಿಮ್ಮಯ್ಯ ಕ್ರೀಡಾಂಗಣ, ಮಡಿಕೇರಿ ಇಲ್ಲಿಗೆ ಸಲ್ಲಿಸಲು ಕೋರಿದೆ.

ಹೆಚ್ಚಿನ ಮಾಹಿತಿಗೆ ಕ್ಷೇತ್ರ ಸಂಪರ್ಕ ಅಧಿಕಾರಿ ಚೇತನ್ ಮೊ. ೯೭೩೧೯೪೭೮೨೮ ಮತ್ತು ಯುವ ಸಮಾಲೋಚಕರು ಹರ್ಷಿತಾ ಎಂ. ಮೊ. ೭೭೬೦೯೧೧೨೫೦ ನ್ನು ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.