ಮಡಿಕೇರಿ, ಜ. ೧೨: ನಗರಸಭೆ ವ್ಯಾಪ್ತಿಯ ಸಾರ್ವಜನಿಕರು ಎಲ್ಲೆಂದರಲ್ಲಿ ತ್ಯಾಜ್ಯ ಬಿಸಾಡುತ್ತಿದ್ದಾರೆ. ಇದರ ನಿಗಾವಹಿಸಲು ಅಲ್ಲಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದನ್ನು ಮೀರಿ ಸಾರ್ವಜನಿಕರು ಅಲ್ಲಲ್ಲಿ ತ್ಯಾಜ್ಯ ಬಿಸಾಡುವುದು ಸಾಮಾನ್ಯವಾಗಿದೆ.

ಈ ಹಿನ್ನೆಲೆಯಲ್ಲಿ ನಗರಸಭೆ ವತಿಯಿಂದ ಬರುವ ವಾಹನಕ್ಕೆ ತ್ಯಾಜ್ಯವನ್ನು ವಿಲೇ ಮಾಡದೆ ಅಲ್ಲಲ್ಲಿ ರಸ್ತೆ ಬದಿಗಳಲ್ಲಿ ತ್ಯಾಜ್ಯ ವಿಲೇ ಮಾಡುವುದು ತಪ್ಪು ಎಂದು ನಾಗರಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ನಗರಸಭೆಯ ಸಿಬ್ಬಂದಿಗಳು ವಿನೂತನವಾದ ಕ್ರಮಕೈಗೊಂಡಿದ್ದಾರೆ.

ಮುಂಜಾನೆ ಬೀದಿ ಬದಿಯಲ್ಲಿ ಸಂಗ್ರಹವಾಗಿದ್ದ ತ್ಯಾಜ್ಯವನ್ನು ನಗರಸಭೆ ಸಿಬ್ಬಂದಿಗಳು ಸ್ವಚ್ಛಗೊಳಿಸಿ ಅದೇ ಸ್ಥಳವನ್ನು ರಂಗೋಲಿ ಬಿಡಿಸಿ ಹಾಗೂ ಗಿಡಗಳನ್ನು ಇರಿಸುವ ಮೂಲಕ ಆ ಸ್ಥಳವನ್ನು ಶೃಂಗರಿಸಿರುತ್ತಾರೆ. ಈ ರೀತಿ ಶೃಂಗಾರಗೊAಡ ಸ್ಥಳದಲ್ಲಿ ಸಾರ್ವಜನಿಕರು ತ್ಯಾಜ್ಯವನ್ನು ಬಿಸಾಡುವುದಿಲ್ಲ ಹಾಗೂ ಅವರಿಗೆ ಇದರ ಮಹತ್ವದ ಅರಿವು ಮೂಡಿಸುವ ಉದ್ದೇಶದಿಂದ ಈ ಕ್ರಮ ವಹಿಸಿರುತ್ತಾರೆ.

ಸಾರ್ವಜನಿಕರು ನಗರ ಸಭೆಯೊಂದಿಗೆ ಕೈ ಜೋಡಿಸಿ, ನಗರವನ್ನು ಸ್ವಚ್ಛವಾಗಿರಿಸಿ ಎಂದು ನಗರಸಭೆ ಪೌರಾಯುಕ್ತ ಎಸ್.ವಿ. ರಾಮದಾಸ್ ಕೋರಿದ್ದಾರೆ.