ಸೋಮವಾರಪೇಟೆ, ಡಿ. ೨೯: ಸಹಕಾರ ಸಂಘಗಳ ಚುನಾವಣೆಗಳು ಸಕಾಲಿಕ ಮತ್ತು ಪಾರದರ್ಶಕವಾಗಿ ನಡೆಯಬೇಕೆಂಬ ಉದ್ದೇಶದಿಂದ ಕಾನೂನು ಕಾಯ್ದೆಗಳು ರಚಿತವಾಗಿದ್ದು, ಅದರಲ್ಲಿರುವ ಅಂಶಗಳನ್ನು ಪ್ರತಿಯೊಬ್ಬ ಸಹಕಾರಿ ತಿಳಿಯುವುದು ಅಗತ್ಯ ಎಂದು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎ.ಕೆ. ಮನುಮುತ್ತಪ್ಪ ಹೇಳಿದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಸಹಕಾರ ಇಲಾಖೆಯ ಸಂಯುಕ್ತಾಶ್ರಯದಲ್ಲಿ, ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸಹಕಾರ ಚುನಾವಣೆ ಕುರಿತು ಮಡಿಕೇರಿಯ ಯೂನಿಯನ್ ಸಭಾಂಗಣದಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಸಹಕಾರ ತತ್ವಗಳಲ್ಲಿ ಪ್ರಜಾಸತ್ತಾತ್ಮಕ ಸದಸ್ಯ ನಿಯಂತ್ರಣ ಎಂಬುದು ಸದಸ್ಯರು ಸದಸ್ಯರಿಗಾಗಿ ಇರುವುದೆಂಬುದನ್ನು ನಿರೂಪಿಸುತ್ತದೆ. ಸಹಕಾರ ಸಂಘಗಳಲ್ಲಿ ಅಂತಿಮ ಅಧಿಕಾರ ವಾರ್ಷಿಕ ಮಹಾಸಭೆಯಲ್ಲಿ ನೆಲೆಸಿರುತ್ತದೆ. ಸಹಕಾರ ಸಂಘಗಳ ನೀತಿಗಳನ್ನು ರೂಪಿಸುವಲ್ಲಿ ಮತ್ತು ನಿರ್ಣಯ ಮಾಡುವ ಪ್ರಕ್ರಿಯೆಗಳಲ್ಲಿ ಸದಸ್ಯರು ಸಕ್ರಿಯವಾಗಿ ಭಾಗವಹಿಸುವುದರಿಂದ ಸಂಘದ ಉದ್ದೇಶಗಳು ಸಫಲವಾಗುತ್ತವೆ ಎಂದು ಮನು ಮುತ್ತಪ್ಪ ಅಭಿಪ್ರಾಯಿಸಿದರು.

ಸಹಕಾರ ಸಂಘದ ಚುನಾವಣೆಗಳು ನಿಯಮಾನುಸಾರ ನಡೆದಲ್ಲಿ ಮಾತ್ರ ಸಿಂಧುವಾಗುತ್ತದೆ. ಪ್ರತಿಯೊಂದು ಸಂಘವು ನಿರ್ದಿ್ಸÀ್ಟ ಉದ್ದೇಶಗಳಿಗಾಗಿ ರಚನೆಯಾಗಿದ್ದು, ವ್ಯವಸ್ಥಾಪನೆಗಳಲ್ಲಿಯೂ ಸದಸ್ಯರು ಭಾಗವಹಿಸಬೇಕು. ಸಂಘದ ಮುಖ್ಯ ಕಾರ್ಯನಿರ್ವಾಹಕರು ಕಾಯ್ದೆ ಮತ್ತು ನಿಯಮಗಳಲ್ಲಿ ಆಗುವ ಬದಲಾವಣೆಗಳ ಕುರಿತು ಆಡಳಿತ ಮಂಡಳಿಯವರಿಗೆ ಮಾಹಿತಿಯನ್ನು ತಲುಪಿಸಿದಲ್ಲಿ ಪ್ರಕ್ರಿಯೆಗಳು ಸಮರ್ಪಕವಾಗಿ ನಡೆಯಲು ಸಾಧ್ಯವಾಗುತ್ತದೆ ಎಂದರು.

ಸಹಕಾರ ಸಂಘಗಳ ಉಪ ನಿಬಂಧಕ ಸಲೀಂ ಅವರು ಸಹಕಾರ ಚುನಾವಣಾ ಪ್ರಕ್ರಿಯೆ ನಡೆಸುವ ಕುರಿತು ಉಪನ್ಯಾಸ ನೀಡಿದರು. ಯೂನಿಯನ್ ನಿರ್ದೇಶಕರಾದ ರವಿ ಬಸಪ್ಪ , ಕನ್ನಂಡ ಸಂಪತ್, ಕೆ.ಎಂ. ತಮ್ಮಯ್ಯ, ಸಹಕಾರ ಅಭಿವೃದ್ಧಿ ಅಧಿಕಾರಿ ಎಂ. ಈ. ಮೋಹನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವ್ಯವಸ್ಥಾಪಕಿ ಆರ್. ಮಂಜುಳಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು.