ಸೋಮವಾರಪೇಟೆ, ಡಿ. ೨೭: ಆ್ಯಂಬ್ಯುಲೆನ್ಸ್ ಚಾಲಕನ ಬೇಜವಾಬ್ದಾರಿಗೆ ಜೀವವೊಂದು ಬಲಿಯಾಗಿದೆ. ಮದ್ಯ ಸೇವಿಸಿದ ಮತ್ತಿನಲ್ಲಿ ಆ್ಯಂಬ್ಯುಲೆನ್ಸ್ ಚಲಾಯಿಸಿದ್ದು ಅಲ್ಲದೇ ಮಾರ್ಗ ಮಧ್ಯೆಯೇ ಆ್ಯಂಬ್ಯುಲೆನ್ಸ್ ನಿಲ್ಲಿಸಿ ನಿರ್ಲಕ್ಷö್ಯ ಮೆರೆದ ಪರಿಣಾಮ ರೋಗಿ ಮೃತಪಟ್ಟ ಹಿನ್ನೆಲೆಯಲ್ಲಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

೩೦ ವರ್ಷದ ತೀರ್ಥಾನಂದ ಮೃತ ವ್ಯಕ್ತಿ. ಹಾಸನ ಸಿದ್ದಾಪುರ ಗ್ರಾಮದ ನಿವಾಸಿ ತೀರ್ಥಾನಂದ ಅವರಿಗೆ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿತ್ತು. ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಆ್ಯಂಬ್ಯುಲೆನ್ಸ್ ಮೂಲಕ ತೀರ್ಥಾನಂದರನ್ನು ಬೆಂಗಳೂರಿಗೆ ಕರೆದೊಯ್ಯುತ್ತಿದ್ದಾಗ ಆ್ಯಂಬ್ಯುಲೆನ್ಸ್ ಚಾಲಕ ಅಲ್ಲಲ್ಲಿ ವಾಹನ ನಿಲ್ಲಿಸುತ್ತಿದ್ದ. ಅಲ್ಲದೇ ಹುಣಸೂರು ಬಳಿ ಆ್ಯಂಬ್ಯುಲೆನ್ಸ್ ನಿಲ್ಲಿಸಿದ ಚಾಲಕ ಮುಂದೆ ಹೋಗಲು ತನ್ನಿಂದ ಸಾಧ್ಯವೇ ಇಲ್ಲ ಎಂದಿದ್ದ. ಅಮಲಿನಲ್ಲಿ ರಂಪಾಟ ನಡೆಸಿದ್ದ. ರೋಗಿಗೆ ಪರ್ಯಾಯ ವ್ಯವಸ್ಥೆ ಮಾಡಿ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ತೀರ್ಥಾನಂದ ಸಾವನ್ನಪ್ಪಿದ್ದಾರೆ.

ಆ್ಯಂಬ್ಯುಲೆನ್ಸ್ ಚಾಲಕನ ನಿರ್ಲಕ್ಷö್ಯ ಹಿನ್ನೆಲೆಯಲ್ಲಿ ಇದೀಗ ಹುಣಸೂರು ಪೊಲೀಸರು ಆ್ಯಂಬ್ಯುಲೆನ್ಸ್ ಹಾಗೂ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.