ಸಿದ್ದಾಪುರ, ಡಿ ೭: ವಿಧಾನ ಪರಿಷತ್ ಚುನಾವಣೆಯ ಮತದಾನದ ಬಗ್ಗೆ ಅರಿವು ಮೂಡಿಸುವ ಸಭೆಯಲ್ಲಿ ಗ್ರಾ.ಪಂ. ಅಧ್ಯಕ್ಷರು ಸೇರಿದಂತೆ ೧೬ ಮಂದಿ ಸದಸ್ಯರು ಗೈರಾಗಿರುವ ಪ್ರಸಂಗ ನಡೆದಿದೆ. ಜಿಲ್ಲೆಯಲ್ಲೇ ಅತ್ಯಧಿಕ ಸದಸ್ಯರನ್ನು ಒಳಗೊಂಡಿರುವ ಸಿದ್ದಾಪುರ ಗ್ರಾ.ಪಂ ಸದಸ್ಯರಿಗೆ ಜಿಲ್ಲಾಧಿಕಾರಿಗಳ ಸೂಚನೆಯಂತೆ ಇಂದು ಎಂಎಲ್‌ಸಿ ಮತದಾನದ ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ೨೫ ಮಂದಿ ಸದಸ್ಯರ ಪೈಕಿ ಕೇವಲ ೯ ಮಂದಿ ಸದಸ್ಯರು ಮಾತ್ರ ಹಾಜರಿದ್ದರು. ಮತದಾನ ಪ್ರಕ್ರಿಯೆ ಬಗ್ಗೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಎಂ.ಎಸ್. ಮೇದಪ್ಪ ಮತ್ತು ಕಾರ್ಯದರ್ಶಿ ವಿ.ಟಿ. ಮೋಹನ್ ಮಾಹಿತಿ ನೀಡಿದರು.

ಅಧ್ಯಕ್ಷರ ವಿರುದ್ಧ ಸದಸ್ಯರ ಅಸಮಾಧಾನ: ಕಳೆದ ಮೂರು ದಿನಗಳಿಂದ ಅಧ್ಯಕ್ಷ , ಉಪಾಧ್ಯಕ್ಷ ಸೇರಿದಂತೆ ಹಲವು ಸದಸ್ಯರುಗಳು ಕಾಣುತ್ತಿಲ್ಲ. ಬಡ ಜನರು ವಿವಿಧ ಕೆಲಸ ಕಾರ್ಯಗಳಿಗೆ ಗ್ರಾ.ಪಂ.ಗೆ ಬಂದು ವಾಪಾಸ್ಸು ಹೋಗುವ ಪರಿಸ್ಥಿತಿ ಸೃಷ್ಟಿಯಾಗಿದೆ. ರಾಜಕೀಯ ರಹಿತವಾಗಿ ಗ್ರಾ.ಪಂ ಚುನಾವಣೆ ನಡೆದಿದ್ದು, ಇದೀಗ ವಿಧಾನ ಪರಿಷತ್ ಚುನಾವಣೆಯಿಂದಾಗಿ ಅಧ್ಯಕ್ಷರು ಹಾಗೂ ಸದಸ್ಯರು ಸಂಪರ್ಕಕ್ಕೆ ಸಿಗುತ್ತಿಲ್ಲ. ಅಧ್ಯಕ್ಷರನ್ನು ಪತ್ತೆ ಹಚ್ಚುವಂತೆ ಒತ್ತಾಯಿಸಿ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡುವುದಾಗಿ ಗ್ರಾ.ಪಂ. ಸದಸ್ಯ ಪಳನಿಸ್ವಾಮಿ ತಿಳಿಸಿದರು.

ಈ ಸಂದರ್ಭ ಸದಸ್ಯರಾದ ಪ್ರಮೀಳಾ, ಎಂ.ಎಸ್ ಶಾಹಿನುಲ್ಲಾ, ಎ.ಎಸ್ ಹಸ್ಸನ್, ಶೀಲಾ, ಸೆಮೀರಾ, ಪ್ರೇಮಾ ಮತ್ತು ಶುಕೂರ್ ಇದ್ದರು.