ಮಡಿಕೇರಿ, ಡಿ. ೫: ಬೆಳೆ ವಿಮೆ ಯೋಜನೆಯ ಜಿಲ್ಲಾಮಟ್ಟದ ಕುಂದುಕೊರತೆ ನಿವಾರಣಾ ಸಮಿತಿ ಸಭೆ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾಹಿತಿ ಪಡೆದು ಮಾತನಾಡಿದ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರು, ಕೃಷಿ ಇಲಾಖೆ ಮೂಲಕ ನೀಡುವ ಬೆಳೆ ವಿಮೆ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ನಿರ್ದೇಶನ ನೀಡಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಶಬಾನಾ ಎಂ. ಶೇಖ್ ಅವರು ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯು ೨೦೧೬-೧೭ನೇ ಸಾಲಿನಿಂದ ಜಾರಿಯಲ್ಲಿದೆ. ಅತಿವೃಷ್ಟಿ, ಅನಾವೃಷ್ಟಿ, ಅಕಾಲಿಕ ಮಳೆ ಮತ್ತಿತರ ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಬೆಳೆ ನಷ್ಟ ಉಂಟಾದಾಗ ರೈತರಿಗೆ ನೆರವು ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಎಂದು ತಿಳಿಸಿದರು.
ರೈತರ ವಿಮಾ ಕಂತನ್ನು ಆಹಾರ ಮತ್ತು ಎಣ್ಣೆ ಕಾಳು ಬೆಳೆಗಳಿಗೆ ಮುಂಗಾರು ಹಂಗಾಮಿಗೆ ಶೇ. ೨ ರಷ್ಟು ಪರಿಗಣಿಸಲಾಗಿದೆ. ಮುಖ್ಯ ಬೆಳೆಗಳಿಗೆ ಯೋಜನೆಯನ್ನು ಗ್ರಾಮ ಪಂಚಾಯಿತಿ ಮಟ್ಟಕ್ಕೆ ಅಳವಡಿಸಲಾಗುವುದು. ಈ ಯೋಜನೆಯು ಸಾಲ ಪಡೆದ ಹಾಗೂ ಸಾಲ ಪಡೆಯದ ರೈತರಿಗೆ ಐಚ್ಛಿಕವಾಗಿದ್ದು, ವಿಮಾ ಮೊತ್ತವು ಒಂದೇ ಆಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ವಿವರಿಸಿದರು.
ಬಿತ್ತನೆ ಅಥವಾ ನಾಟಿ ಕಾಲಕ್ಕೆ ಆಗುವ ನಷ್ಟ, ಬೆಳೆವಣಿಗೆ ಹಂತದಲ್ಲಿ ಆಗುವ ನಷ್ಟ ಹಾಗೂ ಕಟಾವಿನ ನಂತರದ ನಷ್ಟವನ್ನು ಸಹ ಪರಿಗಣಿಸಲಾಗುವುದು ಎಂದರು.
ಕೊಡಗು ಜಿಲ್ಲೆಯಲ್ಲಿ ೨೦೨೦-೨೧ನೇ ಸಾಲಿನಲ್ಲಿ ಒಟ್ಟು ೬೨೨ ರೈತರು ಈ ಯೋಜನೆಯಡಿ ನೋಂದಣಿಯಾಗಿದ್ದು, ಒಟ್ಟು ೧೪೨ ರೈತರಿಗೆ ಈ ಯೋಜನೆಯಡಿ ಒಟ್ಟು ರೂ. ೧೨,೩೯,೮೯೭ ಪರಿಹಾರ ಮೊತ್ತ ವಿತರಿಸಲಾಗಿದೆ ಎಂದರು.
೨೦೨೧-೨೨ನೇ ಸಾಲಿನ ಜುಲೈ ಮಾಹೆಯಲ್ಲಿ ಉಂಟಾದ ಬೆಳೆ ನಷ್ಟದಲ್ಲಿ ಪೊನ್ನಂಪೇಟೆ ಹೋಬಳಿಯ ರೈತ ರವಿಶಂಕರ್ ಪಿ.ಬಿ. ಎಂಬವರ ಒಟ್ಟು ೧೦.೪೧ ಎಕರೆಯೆಷ್ಟು ಬೆಳೆ ನಷ್ಟವಾಗಿದ್ದು, ರೈತರು ಪಾವತಿಸಿದಂತಹ ೪೪೪೫.೩೨ ವಿಮಾ ಕಂತಿಗೆ ಒಟ್ಟು ೯೨,೦೫೬ ರೂ.ಗಳ ಪರಿಹಾರ ಮೊತ್ತವು ಇತ್ಯರ್ಥವಾಗಿದೆ ಎಂದು ಶಬನಾ ಎಂ. ಶೇಕ್ ಮಾಹಿತಿ ನೀಡಿದರು.
ವಿಮಾ ಕಂತಿನ ವಿವರ(ಎಕರೆಗೆ); ಭತ್ತ ಬೆಳೆಗೆ ವಿಮಾ ಮೊತ್ತ ರೂ. ೩೪,೮೦೪, ಪ್ರೀಮಿಯಂ ಮೊತ್ತ ರೂ. ೧೦,೦೯೩, ರೈತರ ಪಾಲು ರೂ. ೬೯೬, ಕೇಂದ್ರದ ಪಾಲು ರೂ. ೪,೬೯೮, ರಾಜ್ಯದ ಪಾಲು ರೂ. ೪,೬೯೮.
ಭತ್ತ(ಮಳೆಯಾಶ್ರಿತ) ವಿಮಾ ಮೊತ್ತ ರೂ. ೨೨೨೫೮, ಪ್ರೀಮಿಯಂ ಮೊತ್ತ ರೂ. ೬,೪೯೫, ರೈತರ ಪಾಲು ರೂ. ೪೪೫, ಕೇಂದ್ರ ಸರ್ಕಾರದ ಪಾಲು ರೂ. ೩,೦೨೫ ಮತ್ತು ರಾಜ್ಯ ಸರ್ಕಾರದ ಪಾಲು ರೂ. ೩,೦೨೫ ಆಗಿದೆ.
ಹಾಗೆಯೇ ಮುಸುಕಿನ ಜೋಳ (ಮಳೆಯಾಶ್ರಿತ) ವಿಮಾ ಮೊತ್ತ ರೂ. ೨೦,೨೩೫, ಪ್ರೀಮಿಯಂ ಮೊತ್ತ ರೂ. ೬,೦೦೩.೭೨, ರೈತರ ಪಾಲು ರೂ. ೪೦೫, ಕೇಂದ್ರ ಸರ್ಕಾರದ ಪಾಲು ರೂ. ೨,೮೦೦ ಹಾಗೂ ರಾಜ್ಯ ಸರ್ಕಾರದ ಪಾಲು ರೂ. ೨,೮೦೦ ಆಗಿದೆ.
ಅತಿವೃಷ್ಟಿ, ಅನಾವೃಷ್ಟಿ, ಅಕಾಲಿಕ ಮಳೆ ಮುಂತಾದ ಪ್ರಾಕೃತಿಕ ವಿಕೋಪದಿಂದ ಬೆಳೆ ನಷ್ಟ ಉಂಟಾದಲ್ಲಿ ರೈತರಿಗೆ ನೆರವು ನೀಡಲಾಗುತ್ತದೆ ಎಂದು ಶಬಾನಾ ಎಂ. ಶೇಖ್ ತಿಳಿಸಿದರು.
ಬೆಳೆ ವಿಮೆ ಜಿಲ್ಲಾ ಸಂಯೋಜಕ ಬೊಳ್ಳಜ್ಜಿರ ಅಯ್ಯಪ್ಪ, ಚಂದ್ರಶೇಖರ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಆರ್.ಕೆ. ಬಾಲಚಂದ್ರ, ತಹಶೀಲ್ದಾರ್ ಮಹೇಶ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಪ್ರಮೋದ್, ಸಹಕಾರ ಇಲಾಖೆಯ ಸಹಾಯಕ ನಿಬಂಧಕ ರವಿಕುಮಾರ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಗೌರಿ, ಕೃಷಿ ಅಧಿಕಾರಿ ನಾರಾಯಣ ರೆಡ್ಡಿ, ಕೃಷಿ ವಿಜ್ಞಾನ ಕೇಂದ್ರದ ಹವಾಮಾನ ತಜ್ಞ ಹರೀಶ್, ಇತರರು ಇದ್ದರು.