ವೀರಾಜಪೇಟೆ, ನ. ೧೦: ಕರ್ನಾಟಕದಿಂದ ಕೇರಳ ರಾಜ್ಯಕ್ಕೆ ವಾಹನಗಳು ಮುಕ್ತವಾಗಿ ಸಂಚರಿಸುತ್ತಿವೆ. ಕೇರಳ ರಾಜ್ಯದಿಂದ ಬರುವ ವಾಹನಗಳಿಗೆ ರಾಜ್ಯ ಪ್ರವೇಶಕ್ಕೆ ಮಾಕುಟ್ಟ ಗಡಿಯಲ್ಲಿ ನಿಬಂಧನೆಗಳಿವೆ; ಅದನ್ನು ಸರಿ ಪಡಿಸಿಕೊಡುವಂತೆ ಕೇರಳದ ಕಣ್ಣೂರು ಬಿಜೆಪಿ ಅಧ್ಯಕ್ಷ ಹರಿದಾಸ್ ಅವರ ನೇತೃತ್ವದ ತಂಡ ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಕೇರಳ ರಾಜ್ಯಕ್ಕೆ ಸರ್ಕಾರಿ ಹಾಗೂ ಇತರ ವಾಹನಗಳು ಬಾರದೆ ಸುಮಾರು ೪ ತಿಂಗಳುಗಳಾಗಿವೆ. ಎರಡನೇ ಲಾಕ್ಡೌನ್ ಆದ ಬಳಿಕ ೭೨ ಗಂಟೆ ಒಳಗಿನ ಆರ್ಟಿಪಿಸಿಆರ್ ವರದಿಯನ್ನು ಹೊಂದಿರುವವರಿಗೆ ಮಾತ್ರ ಆದ್ಯತೆ ನೀಡಲಾಗುತ್ತಿದೆ. ಎರಡು ಲಸಿಕೆ ಹೊಂದಿರುವವರಿಗೂ ಅವಕಾಶ ನೀಡುತ್ತಿಲ್ಲ. ರಾಜ್ಯ ಸರ್ಕಾರದೊಂದಿಗೆ ಚರ್ಚಿಸಿ ಮುಕ್ತ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಮನವಿಯಲ್ಲಿ ತಿಳಿಸಲಾಗಿದೆ.
ಮನವಿ ಪರಿಶೀಲಿಸಿದ ಶಾಸಕ ಬೋಪಯ್ಯ ಮಾತನಾಡಿ ಕೇರಳದಲ್ಲಿ ನಮ್ಮ ರಾಜ್ಯಕ್ಕಿಂತ ಕೊರೊನಾ ಪ್ರಕರಣದ ಶೇಕಡವಾರು ಹೆಚ್ಚಿದ್ದು, ಸದ್ಯಕ್ಕೆ ನಿಯಮ ಸಡಿಲಿಕೆ ಸಾಧ್ಯವಿಲ್ಲ. ಈ ಕುರಿತು ಕೇರಳ ರಾಜ್ಯದವರು ನ್ಯಾಯಾಲಯಕ್ಕೂ ಹೋಗಿದ್ದು, ನ್ಯಾಯಾಲಯ ಕೂಡ ಅದನ್ನು ಮಾನ್ಯ ಮಾಡಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಕೇರಳದಿಂದ ರಾಜ್ಯಕ್ಕೆ ಪ್ರವೇಶ ಮಾಡಲು ನಿಬಂಧನೆಗಳನ್ನು ಸರಕಾರ ವಿಧಿಸಿದ ನಿಯಮಗಳನ್ನು ಪಾಲಿಸಬೇಕು. ನಿಮ್ಮ ಕೋರಿಕೆಯಂತೆ ಎರಡು ಲಸಿಕೆ ಪಡೆದಿದ್ದರೂ ಅದನ್ನು ಮಾನ್ಯ ಮಾಡಲು ಸಾಧ್ಯವಿಲ್ಲ. ಆರ್ಟಿಪಿಸಿಆರ್ ವರದಿಯನ್ನು ತರಲೇಬೇಕು. ಸರಕಾರದ ನಿಬಂಧನೆಗಳಿಗೆ ತಾನು ಯಾವುದೇ ಭರವಸೆ ನೀಡಲು ಸಾಧ್ಯವಿಲ್ಲ. ನಿಯಮ ಸಡಿಲಿಕೆ ನೀಡುವ ಬಗ್ಗೆ ಸರಕಾರದ ಮಟ್ಟದಲ್ಲಿ ವ್ಯವಹರಿಸುವುದು ಸೂಕ್ತ ಎಂದು ಹೇಳಿದರು.