ಮಡಿಕೇರಿ, ನ. ೩: ಸೋಮವಾರಪೇಟೆ ತಾಲೂಕಿನ ಮಾದಾಪುರ ಗ್ರಾ.ಪಂ ವ್ಯಾಪ್ತಿಯ ಕೂಲಿ ಕಾರ್ಮಿಕರಿಗೆ ಜಂಬೂರು ಬಾಣೆಯಲ್ಲಿ ಮನೆಗಳನ್ನು ನಿರ್ಮಿಸಿಕೊಡಬೇಕೆಂದು ಯುನೈಟೆಡ್ ಪ್ಲಾಂಟೇಷನ್ ವಕರ‍್ಸ್ ಯೂನಿಯನ್‌ನ ಸೂರಿಗಾಗಿ ಸಮಿತಿ ಒತ್ತಾಯಿಸಿದೆ.

ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಅವರಿಗೆ ಮನವಿ ಪತ್ರ ಸಲ್ಲಿಸಿದ ಸಮಿತಿಯ ಜಿಲ್ಲಾಧ್ಯಕ್ಷ ಹೆಚ್.ಎಂ. ಸೋಮಪ್ಪ ಮಾದಾಪುರ ಪಂಚಾಯ್ತಿ ವ್ಯಾಪ್ತಿಯಲ್ಲಿ ಒಂದು ಸಾವಿರಕ್ಕೂ ಅಧಿಕ ಕಾರ್ಮಿಕರು ನಿವೇಶನ ಮತ್ತು ವಾಸಕ್ಕೆ ಮನೆ ಇಲ್ಲದೆ ಅತಂತ್ರ ಸ್ಥಿತಿಯಲ್ಲಿದ್ದಾರೆ. ಕಾಫಿ ತೋಟದಲ್ಲಿ ದುಡಿಯುತ್ತಿರುವ ಕಾರ್ಮಿಕರು ಕಳೆದ ಅನೇಕ ವರ್ಷಗಳಿಂದ ಲೈನ್ ಮನೆಗಳಲ್ಲಿ ಮತ್ತು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಸ್ವಂತ ಸೂರಿಲ್ಲದೆ ಪರದಾಡುತ್ತಿರುವ ಇವರು ಸರಕಾರಿ ಸೌಲಭ್ಯಗಳಿಂದಲೂ ವಂಚಿತರಾಗುತ್ತಿದ್ದಾರೆ. ಹಲವು ಬಾರಿ ಪಂಚಾಯಿತಿ ಮತ್ತು ಸಂಬAಧಪಟ್ಟ ಇಲಾಖೆಗಳಿಗೆ ಮನವಿ ಸಲ್ಲಿಸಿ ವಸತಿ ಸೌಲಭ್ಯಕ್ಕಾಗಿ ಬೇಡಿಕೆ ಇಟ್ಟಿದ್ದರೂ ಇಲ್ಲಿಯವರೆಗೆ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಅವರು ಆರೋಪಿಸಿದರು.

ಪಂಚಾಯ್ತಿಗೆ ಸೇರಿದ ಜಂಬೂರು ಬಾಣೆಯಲ್ಲಿ ಅತಿವೃಷ್ಟಿ ಹಾನಿ ಸಂತ್ರಸ್ತರಿಗಾಗಿ ಮನೆಗಳನ್ನು ನಿರ್ಮಿಸಿಕೊಡಲಾಗಿದೆ. ಇಲ್ಲಿ ಮತ್ತಷ್ಟು ಸರಕಾರಿ ಜಾಗ ಖಾಲಿ ಇರುವುದರಿಂದ ಇದೇ ಮಾದರಿಯಲ್ಲಿ ಸ್ಥಳೀಯ ಕಾರ್ಮಿಕರಿಗೂ ವಸತಿ ಸೌಲಭ್ಯವನ್ನು ಸರಕಾರ ಕಲ್ಪಿಸಿಕೊಡಬೇಕು ಎಂದು ಹೆಚ್.ಎಂ. ಸೋಮಪ್ಪ ಒತ್ತಾಯಿಸಿದರು. ಮನವಿಪತ್ರ ಸಲ್ಲಿಸುವ ಸಂದರ್ಭ ಸಮಿತಿಯ ಸೋಮವಾರಪೇಟೆ ತಾಲೂPÄ ಅಧ್ಯಕ್ಷ ಬಿ.ಅಣ್ಣಪ್ಪ, ಉಪಾಧ್ಯಕ್ಷೆ ಸರೋಜ ಹಾಗೂ ಕಾರ್ಯದರ್ಶಿ ಶಭಾನ ಹಾಜರಿದ್ದರು.