ಮಡಿಕೇರಿ, ಅ. ೨೧: ಪ್ರಜ್ಞಾವಂತ ನಾಗರಿಕ ವೇದಿಕೆ ವತಿಯಿಂದ ತಾ. ೨೨ ರಂದು (ಇಂದು) ಕುಶಾಲನಗರದ ಟಾಪ್ ಇನ್ ಟೌಮ್ ಹೊಟೇಲ್ ಸಭಾಂಗಣದಲ್ಲಿ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಸನ್ಮಾನ ಸಮಾರಂಭ ನಡೆಯಲಿದೆ.

ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಡಾ. ಸದಾಶಿವಯ್ಯ, ಎಸ್. ಪಲ್ಲೇದ್, ಜಿಲ್ಲಾ ಪ್ರಶಸ್ತಿ ಪುರಸ್ಕೃತ ಉ.ರಾ. ನಾಗೇಶ್ ಅವರನ್ನು ಸನ್ಮಾನಿಸಲಾಗುವುದು.

ಪ್ರಜ್ಞಾವಂತ ನಾಗರಿಕ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ‘ಶಕ್ತಿ’ ಸಂಪಾದಕ ಜಿ. ಚಿದ್ವಿಲಾಸ್ ಉದ್ಘಾಟಿಸಲಿದ್ದು, ಹಿರಿಯ ನಾಗರಿಕರಾದ ವಿ.ಎನ್. ಪ್ರಭಾಕರ್, ಎಂ.ಎಚ್. ನಜೀರ್ ಅಹ್ಮದ್ ಉಪಸ್ಥಿತಿ ಇರಲಿದೆ. ಪ್ರಾಧ್ಯಾಪಕ ಸಿ. ಪುಟ್ಟರಾಜು ಅಭಿನಂದನಾ ಭಾಷಣ ಮಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಪ.ಪಂ. ಅಧ್ಯಕ್ಷ ಜೈವರ್ಧನ್, ಜಿ.ಪಂ. ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ, ಕುಶಾಲನಗರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಆರ್. ಶರವಣಕುಮಾರ್, ತಾಲೂಕು ರೆಡ್ ಕ್ರಾಸ್ ಅಧ್ಯಕ್ಷ ಎಸ್.ಕೆ. ಸತೀಶ್ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.