ಕಣಿವೆ, ಅ. ೨: ವಿಶ್ವವಿಖ್ಯಾತ ಮೈಸೂರು ದಸರಾ ಆಚರಣೆಯ ಅತ್ಯಾಕರ್ಷಕ ಜಂಬೂ ಸವಾರಿಯ ತಾಲೀಮಿಗೆಂದು ದುಬಾರೆಯಿಂದ ತೆರಳಿರುವ ಸಾಕಾನೆಗಳ ಮಾವುತರು ಹಾಗೂ ಕಾವಾಡಿಗಳು ಮೈಸೂರು ಮಹಾರಾಜ ಯದುವೀರ್ ಅವರನ್ನು ಹತ್ತಿರದಿಂದ ನೋಡಿದ್ದಾರೆ. ಅಷ್ಟೇ ಅಲ್ಲ, ಯುವರಾಜ ಯದುವೀರರು ಬುಧವಾರ ಸಂಜೆ ಯುವರಾಣಿ ಹಾಗೂ ಪುಟ್ಟ ಮಗುವಿನೊಂದಿಗೆ ಅರಮನೆ ಆವರಣದಲ್ಲಿ ವಾಯುವಿಹಾರದಲ್ಲಿದ್ದ ಸಂದರ್ಭ ಈ ಮಾವುತರು ಹಾಗೂ ಕಾವಾಡಿಗಳ ಬಳಿ ಬಂದು ಅವರ ಯೋಗಕ್ಷೇಮ ವಿಚಾರಿಸಿದ್ದಾರೆ. ಸಾಕಾನೆಗಳನ್ನು ಉಪಚರಿಸುವ, ನಿರ್ವಹಿಸುವ ಹಾಗೂ ಇವರದ್ದೇ ಆದ ಪರಿಭಾಷೆಯಲ್ಲಿ ದೈತ್ಯ ಪ್ರಾಣಿಗಳನ್ನು ಇವರು ಹೇಳಿದಂತೆ ಅವುಗಳು ಕೇಳುವ ರೀತಿ ನೀತಿಗಳನ್ನು ಕಂಡು ಒಂದು ಕ್ಷಣ ಮಹಾರಾಜ ದಂಪತಿ ನಿಬ್ಬೆರಗಾದರು. ಸಂಕೋಚ ಹಾಗೂ ಮುಜುಗರದೊಂದಿಗೆ ದೂರವೇ ನಿಂತು ಮಹಾರಾಜರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಮಾವುತರು ಹಾಗೂ ಕಾವಾಡಿಗಳನ್ನು ಸನಿಹಕ್ಕೆ ಕರೆದ ಮಹಾರಾಜರು ಅವರೊಂದಿಗೆ ಫೋಟೋ ತೆಗೆಸಿಕೊಂಡರು. ಒಂದು ರೀತಿಯಲ್ಲಿ ಮಹಾರಾಜರ ಸಂದರ್ಶನ ಹಾಗೂ ಆತ್ಮೀಯ ಒಡನಾಟ ಮಾವುತರಿಗೆ ಅತೀವ ಸಂತಸ ಉಂಟುಮಾಡಿತು.

ಸಾಕಾನೆಗಳ ಸಾಂಗತ್ಯದೊAದಿಗೆ ಸದಾ ಕಾಲ ಅರಣ್ಯಗಳಲ್ಲಿ ಜೀವನ ನಡೆಸುವ ಸಾಕಾನೆಗಳ ಮಾವುತರು ಹಾಗೂ ಕಾವಾಡಿಗಳು ಇವರ ಕುಟುಂಬಗಳ ಸದಸ್ಯರಿಗೆ ಪ್ರತೀ ವರ್ಷದ ಮೈಸೂರು ದಸರಾ ಸಂದರ್ಭದ ಒಂದು ರೀತಿ ಸುಗ್ಗಿ ಸಂಭ್ರಮ. ಇದೀಗ ಯುವರಾಜ ರೊಂದಿಗೆ ಮಾತುಕತೆ ನಡೆಸಿರುವುದು ಮತ್ತಷ್ಟು ಸಂತೋಷಕ್ಕೆ ಕಾರಣವಾಗಿದೆ.

ಇದೀಗ ಅರಮನೆ ಆವರಣದ ತಾಲೀಮಿನಲ್ಲಿ ಭಾಗಿಯಾಗಲು ದುಬಾರೆ ಸಾಕಾನೆ ಶಿಬಿರದಿಂದ ಧನಂಜಯ, ಕಾವೇರಿ ಹಾಗೂ ವಿಕ್ರಮ ಆನೆಗಳು ತೆರಳಿವೆ. ಇವುಗಳೊಂದಿಗೆ ಮತ್ತಿಗೋಡು ಶಿಬಿರದಿಂದ ಅಭಿಮನ್ಯು ಸೇರಿದಂತೆ ಐದು ಸಾಕಾನೆಗಳು ತೆರಳಿದ್ದು ಎಲ್ಲವೂ ಅರಮನೆ ಆವರಣದಲ್ಲಿ ಸರ್ಕಾರದ ಆತಿಥ್ಯದಲ್ಲಿ ದಿನಗಳೆಯುತ್ತಾ ಕಳೆಗಟ್ಟುತ್ತಿವೆ.

"ಶಕ್ತಿ"ಯೊಂದಿಗೆ ಮಾತನಾಡಿದ ಕಾವೇರಿ ಆನೆಯ ಮಾವುತ ಜೆ.ಕೆ.ಡೋಬಿ, ನಮ್ಮನ್ನು ಕಂಡು ಮಹಾರಾಜರು ಮಾತನಾಡಿಸಿ ಉಪಚರಿಸಿದ ರೀತಿ ನಮಗೆ ಹೆಮ್ಮೆಯಾಯಿತು. ಅರಮನೆಯ ಆವರಣದಲ್ಲಿ ನಿಮಗೆ ಯಾವ ರೀತಿಯಲ್ಲಾದರೂ ಅನಾನುಕೂಲ ಇದೆಯೇ ? ನಿಮ್ಮ ಕುಟುಂಬ ಸದಸ್ಯರೆಲ್ಲಾ ಚೆನ್ನಾಗಿದ್ದೀರಾ ?

ಆನೆಗಳಿಗೆ ಶಿಬಿರಗಳಲ್ಲಿ ತಿನ್ನಲು ಏನೆಲ್ಲಾ ಕೊಡುವಿರಿ ? ಹೇಗೆಲ್ಲಾ ಲಾಲನೆ - ಪಾಲನೆ ಮಾಡುವಿರಿ ? ಎಂಬ ಹತ್ತು ಹಲವು ಪ್ರಶ್ನೆಗಳನ್ನು ಕೇಳಿದ ಮಹಾರಾಜರಿಗೆ ನಾವು ಇದ್ದುದನ್ನೇ ಹೇಳಿದೆವು.

ಅರಮನೆಯ ಆವರಣದ ಯಾವುದೋ ಒಂದು ಮೂಲೆಯಲ್ಲಿ ಟೆಂಟ್‌ನಲ್ಲಿದ್ದ ನಮ್ಮನ್ನು ಅರಮನೆಯ ಮಹಾರಾಜರು ಕಂಡು ಮಾತನಾಡಿಸಿ ನಮ್ಮಗಳ ಹಾಗೂ ಆನೆಗಳ ಯೋಗಕ್ಷೇಮ ಕೇಳಿದ್ದು ನಮಗೆ ತುಂಬಾ ಸಂತೋಷ ಉಂಟು ಮಾಡಿದೆ ಎಂದು ಡೋಬಿ ಹೇಳಿದರು.

- ಕೆ.ಎಸ್. ಮೂರ್ತಿ.