ಸೋಮವಾರಪೇಟೆ,ಸೆ.೯: ‘ಭೀಕರ ಬರಗಾಲ ಸಂದರ್ಭ ಸಾಕ್ಷಾತ್ ಜಲದೇವತೆಯಾಗಿ ಬೃಹತ್ ಕೆರೆಗೆ ಹಾರವಾದರು’ ಎಂಬ ದೈವಿಕ ಇತಿಹಾಸ ಹೊಂದಿರುವ ತಾಲೂಕಿನ ದೊಡ್ಡಮಳ್ತೆ ಗ್ರಾಮದ ಹೊನ್ನಮ್ಮನ ಕೆರೆಗೆ ಗೌರಿ ಹಬ್ಬದ ದಿನವಾದ ಇಂದು ನೂರಾರು ಮಂದಿ ಭಕ್ತಾದಿಗಳು, ನವ ವಿವಾಹಿತ ದಂಪತಿಗಳು ಬಾಗಿನ ಅರ್ಪಿಸಿದರು.
ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಇತಿಹಾಸ ಪ್ರಸಿದ್ಧ, ಎಂದೂ ಬತ್ತದ ಹೊನ್ನಮ್ಮನ ಕೆರೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮ ದೇವಾಲಯ ಸಮಿತಿ ಪದಾಧಿಕಾರಿಗಳ ಉಸ್ತುವಾರಿಯಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು.
ವರ್ಷಂಪ್ರತಿ ಗೌರಿ ಹಬ್ಬದ ದಿನದಂದು ನೂರಾರು ನವ ದಂಪತಿಗಳು ಹಾಗೂ ಭಕ್ತಾದಿಗಳು ಆಗಮಿಸಿ ಹೊನ್ನಮ್ಮನ ಕೆರೆಗೆ ಬಾಗಿನ ಅರ್ಪಿಸಿ ಸರ್ವಮಂಗಳಕ್ಕಾಗಿ ಪ್ರಾರ್ಥಿಸುವದು ಹಿಂದಿನಿAದಲೂ ನಡೆದುಕೊಂಡು ಬಂದ ಪದ್ದತಿ. ಸಮಿತಿಯ ವತಿಯಿಂದಲೂ ಜಾತ್ರೋತ್ಸವ ಆಯೋಜಿಸಿ, ಸಹಸ್ರಾರು ಭಕ್ತಾದಿಗಳಿಗೆ ಅನ್ನದಾನ ಏರ್ಪಡಿಸುವ ಮೂಲಕ ಸಂಭ್ರಮದಿAದ ಸ್ವರ್ಣಗೌರಿ ಹಬ್ಬ ಆಯೋಜಿಸಲಾಗುತ್ತಿತ್ತು.
ಆದರೆ ಈ ಬಾರಿ ಕೊರೊನಾ ಹಿನ್ನೆಲೆ ಜಾತ್ರೋತ್ಸವ ರದ್ದುಗೊಳಿಸಿದ್ದು, ಬಾಗಿನ ಅರ್ಪಿಸುವವರು ಹಾಗೂ ಭಕ್ತಾದಿಗಳಿಗೆ ಮಾತ್ರ ದೇವಾಲಯ ಪ್ರವೇಶ ಕಲ್ಪಿಸಲಾಗಿತ್ತು. ದೇವಾಲಯದ ಪ್ರವೇಶ ದ್ವಾರದಲ್ಲಿ ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆಯರು ಥರ್ಮಲ್ ಸ್ಕಾö್ಯನಿಂಗ್ ಮಾಡುತ್ತಿದ್ದರು.
ಸ್ವರ್ಣಗೌರಿ ಹಬ್ಬದ ದಿನವಾದ ಇಂದು ಬೆಳಿಗ್ಗೆ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಕ್ಷೇತ್ರದಲ್ಲಿರುವ ಶ್ರೀ ಹೊನ್ನಮ್ಮ ತಾಯಿ, ಬಸವೇಶ್ವರ ಗುಡಿಯಿರುವ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಬಾಗಿನ(ಮೊರದಲ್ಲಿ ಅರಸಿಣ, ಕುಂಕುಮ, ಬಿಚ್ಚೋಲೆ, ರವಿಕೆ ಕಣ, ಕನ್ನಡಿ, ಬಳೆ, ಹೂವು, ಫಲತಾಂಬೂಲ)ವನ್ನು ದೇವಾಲಯದ ಪಕ್ಕದಲ್ಲಿರುವ ಬಂಗಾರದ ಕಲ್ಲಿನ ಕಟ್ಟೆಯ ಮೇಲಿಟ್ಟು ಪೂಜೆ ಸಲ್ಲಿಸಿ, ಗ್ರಾಮದ ಪಟೇಲರ ಮನೆಯವರು ಹಾಗೂ ಬಸವೇಶ್ವರ-ಸ್ವರ್ಣಗೌರಿ ಹೊನ್ನಮ್ಮ ಸಮಿತಿಯ ಪದಾಧಿಕಾರಿಗಳು ಕೆರೆಗೆ ಅರ್ಪಿಸಿದರು.
ಇದಾದ ನಂತರ ಸಾರ್ವಜನಿಕ ಭಕ್ತಾದಿಗಳಿಗೆ ಬಾಗಿನ ಅರ್ಪಿಸಲು ಅವಕಾಶ ಕಲ್ಪಿಸಲಾಯಿತು. ಕೊಡಗು ಮಾತ್ರವಲ್ಲದೇ ಸುತ್ತಮುತ್ತಲ ಜಿಲ್ಲೆಗಳಿಂದಲೂ ಭಕ್ತಾದಿಗಳು ಆಗಮಿಸಿದ್ದರು. ನವ ವಿವಾಹಿತ ದಂಪತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಹೊನ್ನಮ್ಮ ದೇವಿಗೆ ಪೂಜೆ ಸಲ್ಲಿಸಿ ಕೆರೆಗೆ ಬಾಗಿನ ಅರ್ಪಿಸಿದರು.
ಈ ಸಂದರ್ಭ ಶ್ರೀ ಸಿದ್ದೇಶ್ವರ, ಬಸವೇಶ್ವರ-ಸ್ವರ್ಣಗೌರಿ ಹೊನ್ನಮ್ಮ ದೇವಾಲಯ ಸಮಿತಿಯ ಅಧ್ಯಕ್ಷ ಡಿ.ಬಿ. ವೀರೇಶ್, ಉಪಾಧ್ಯಕ್ಷ ಡಿ.ಎಂ. ಪ್ರಸನ್ನ, ಕಾರ್ಯದರ್ಶಿ ಎಂ.ಜಿ. ಕಿರಣ್ಕುಮಾರ್ ಪದಾಧಿಕಾರಿಗಳಾದ ಡಿ.ಬಿ.ಯೋಗೇಶ್, ಎಂ.ಬಿ.ವಸAತ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ದೇವಾಲಯದ ಅರ್ಚಕ ಈರಯ್ಯ ಹಿರೇಮಠ್ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ನಡೆದವು.
ಈ ಹಿಂದೆ ತೀವ್ರ ಬರಗಾಲ ಎದುರಾದ ಸಂದರ್ಭ ಊರಿನ ಪ್ರಮುಖರು ಗ್ರಾಮದ ೧೬ ಎಕರೆ ಪ್ರದೇಶದಲ್ಲಿ ದೊಡ್ಡಕೆರೆಯೊಂದನ್ನು ನಿರ್ಮಿಸಲು ಮುಂದಾದರು. ನೂರಾರು ಮಂದಿ ಕೆರೆ ನಿರ್ಮಿಸುವ ಕಾರ್ಯದಲ್ಲಿ ಮಗ್ನರಾದರು. ಆದರೆ ಎಷ್ಟೇ ಆಳ ತೆಗೆದರೂ ಕೆರೆಯಲ್ಲಿ ಒಂದು ಹನಿ ನೀರೂ ಬರಲಿಲ್ಲ. ಅಂತಹ ಸನ್ನಿವೇಶದಲ್ಲಿ ಹೊನ್ನಿನ ಗುಣ ಹೊಂದಿದ್ದ ಹೊನ್ನಮ್ಮ ತಾನೇ ಕೆರೆಗೆ ಹಾರವಾದಳು. ಅಂದು ತುಂಬಿದ ಕೆರೆ ಇಂದಿಗೂ ಬತ್ತಿಲ್ಲ ಎಂಬ ಪ್ರತೀತಿ ಈ ಕ್ಷೇತ್ರವ್ಯಾಪ್ತಿಯಲ್ಲಿದ್ದು, ಬಸವೇಶ್ವರ ದೇವಾಲಯದ ಪಕ್ಕದಲ್ಲಿಯೇ ಹೊನ್ನಮ್ಮ ತಾಯಿಗೆ ದೇವಾಲಯ ನಿರ್ಮಿಸಲಾಗಿದೆ. ಪ್ರತಿ ಗೌರಿ ಹಬ್ಬದ ದಿನದಂದು ವಿಶೇಷ ಪೂಜೆ ಸಲ್ಲಿಸಿ, ಕೆರೆಗೆ ಬಾಗಿನ ಅರ್ಪಿಸುವ ಕಾರ್ಯ ಅನೂಚಾನವಾಗಿ ನಡೆದುಕೊಂಡು ಬಂದಿದೆ.
ಅಂದು ತುಂಬಿದ ಕೆರೆ ಇಂದಿನ ವರೆಗೂ ಬತ್ತದೇ ಇರುವದು ದೈವೇಚ್ಛೆ ಎಂಬ ನಂಬಿಕೆ ಎಲ್ಲರಲ್ಲಿದ್ದು, ಹೊನ್ನಮ್ಮನ ಕೆರೆಯನ್ನು ಇಂದಿಗೂ ವಿಶೇಷ ಭಕ್ತಿಭಾವದಿಂದ ಪೂಜಿಸಲಾ ಗುತ್ತದೆ. ಇದರೊಂದಿಗೆ ಈ ವ್ಯಾಪ್ತಿಯ ನೂರಾರು ಎಕರೆ ಪ್ರದೇಶದ ಕೃಷಿ ಕಾರ್ಯಕ್ಕೂ ಹೊನ್ನಮ್ಮನ ಕೆರೆ ಮೂಲಾಧಾರವಾಗಿದ್ದು, ಕೃಷಿಕ ವರ್ಗದ ಜೀವನಾಧಾರವಾಗಿದೆ.
- ವಿಜಯ್ ಹಾನಗಲ್