ವ್ಯಕ್ತಿಯ ಬಂಧನ

ಸಿದ್ದಾಪುರ, ಸೆ. ೮: ಮಹಿಳೆಯೊಂದಿಗೆ ಸಂಪರ್ಕ ಹೊಂದಿದ್ದ ಯುವಕನೋರ್ವ ಆಕೆ ದೂರವಾದ ಬಳಿಕ ಆಕೆಯ ಅಶ್ಲೀಲ ಚಿತ್ರಗಳನ್ನು ಫೇಸ್‌ಬುಕ್ - ವ್ಯಾಟ್ಸಾಪ್‌ನಲ್ಲಿ ಹಾಕಿ ಬೆದರಿಕೆ ಹಾಗೂ ನಿಂದಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪೊನ್ನAಪೇಟೆಯ ಕೃಷ್ಣ ಕಾಲೋನಿ ನಿವಾಸಿ, ಈ ಹಿಂದೆ ವಿದ್ಯುತ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಸುರೇಶ್ ಎಂಬಾತನ ಪತ್ನಿ ಕೆಲ ವರ್ಷದ ಹಿಂದೆ ಆತನನ್ನು ತೊರೆದಿದ್ದು, ಇದೇ ಸಂದರ್ಭದಲ್ಲಿ ಮಾದಾಪುರದ ಪತಿಯನ್ನು ಕಳೆದುಕೊಂಡಿದ್ದ ಮಹಿಳೆಯೊಂದಿಗೆ ಸಂಪರ್ಕ ಬೆಳೆಸಿದ್ದ. ವರ್ಷ ಕಳೆಯುತ್ತಲೇ ಈತನ ಹಿಂಸೆ ತಾಳಲಾಗದೆ ಈತನನ್ನೇ ನಂಬಿದ್ದ ಮಹಿಳೆ ಆತನಿಂದ ದೂರವಾಗಿದ್ದಳು. ನಂತರವೂ ಕಿರುಕುಳ ಮುಂದುವರಿಸಿದ ಸುರೇಶ್ ಮಹಿಳೆಯ ಅಶ್ಲೀಲ ಚಿತ್ರಗಳನ್ನು ಫೇಸ್‌ಬುಕ್, ವ್ಯಾಟ್ಸಾಪ್‌ಗಳಲ್ಲಿ ಹಾಕುತ್ತಿದ್ದ. ಇದರಿಂದಾಗಿ ಮಾನಸಿಕವಾಗಿ ನೊಂದಿದ್ದ ಮಹಿಳೆ ಹಾಗೂ ಮಕ್ಕಳು ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದರು.

ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ ಅವರ ಮಾರ್ಗದರ್ಶನದಂತೆ ಇಂದು ಮಡಿಕೇರಿ ಡಿವೈಎಸ್‌ಪಿ ಗಜೇಂದ್ರ ಪ್ರಸಾದ್ ಅವರು ಸಿದ್ದಾಪುರಕ್ಕೆ ಆಗಮಿಸಿ, ಸಿದ್ದಾಪುರ ಪೊಲೀಸರ ಸಹಕಾರದೊಂದಿಗೆ ಆರೋಪಿ ಸುರೇಶ್‌ನನ್ನು ಬಂಧಿಸಿ, ಆತನ ವಿರುದ್ಧ ಮಾನಸಿಕ ಕಿರುಕುಳ, ಜಾತಿ ನಿಂದನೆ ಸೇರಿದಂತೆ ಬೆದರಿಕೆ ಪ್ರಕರಣಗಳಡಿ ಮೊಕದ್ದಮೆ ದಾಖಲಿಸಿ, ನ್ಯಾಯಾಂಗ ವಶಕ್ಕೊಪ್ಪಿಸಲಾಗಿದೆ.