ಶನಿವಾರಸಂತೆ, ಸೆ. ೫: ಸಮೀಪದ ಮುಳ್ಳೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಭಾನುವಾರ ಶಿಕ್ಷಕರ ದಿನಾಚರಣೆ ಪ್ರಯುಕ್ತ ಶುಭಾಶಯ ಪತ್ರಗಳನ್ನು ಬರೆದು ತಮ್ಮ ಪ್ರೀತಿಯ ಶಿಕ್ಷಕರಿಗೆ ಕಳುಹಿಸಿ ಗುರುಭಕ್ತಿ ಮೆರೆದರು.

ಕೋವಿಡ್ ಸಾಂಕ್ರಾಮಿಕ ಪಿಡುಗಿನಿಂದಾಗಿ ಶಾಲೆಗಳು ಇನ್ನೂ ಆರಂಭವಾಗಿಲ್ಲ. ಅಲ್ಲಲ್ಲಿ ಆನ್‌ಲೈನ್ ತರಗತಿಗಳು ನಡೆಯುತ್ತಿವೆ. ಈ ನಡುವೆ ಶಿಕ್ಷಕರ ಮುಖಾಮುಖಿ ಭೇಟಿಯ ಅವಕಾಶದಿಂದ ವಂಚಿತರಾಗಿರುವ ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಗೆ ಸೃಜನಾತ್ಮಕವಾಗಿ ಪತ್ರ ಬರೆದು ಶಿಕ್ಷಕರ ಭೋದನಾ ಶೈಲಿ ಅವರು ತೋರುವ ಅಕ್ಕರೆ ಪ್ರೀತಿಯನ್ನು ಸ್ಮರಿಸಿಕೊಂಡರು. ಮುಖಾಮುಖಿ ಶಾಲೆಗಳು ನಡೆಯದೇ ನಮಗೆ ತುಂಬಾ ಬೇಸರವಾಗಿದೆ. ಯಾವಾಗ ಆರಂಭವಾಗುತ್ತದೆಯೋ ಎಂದು ಕಾಯುತ್ತಿದ್ದೇವೆ ಎಂದು ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದರು.