ಸೋಮವಾರಪೇಟೆ,ಜು.೧೧: ಆರೋಗ್ಯ ಇಲಾಖೆಯ ಮೂಲಕ ಸೋಮವಾರಪೇಟೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ೧ ಕೋಟಿ ವೆಚ್ಚದ ಆಕ್ಸಿಜನ್ ಉತ್ಪಾದನಾ ಘಟಕ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ೧ ನಿಮಿಷಕ್ಕೆ ೩೯೦ ಲೀಟರ್ ಆಮ್ಲಜನಕ ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ಘಟಕದಿಂದ ಕೊರೊನಾ ೩ನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸುವ ಆತ್ಮವಿಶ್ವಾಸ ವೈದ್ಯಕೀಯ ವಲಯದಲ್ಲಿ ಮೂಡಿದೆ.
ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಅಪ್ಪಚ್ಚುರಂಜನ್ ಅವರ ಪ್ರಯತ್ನದ ಫಲವಾಗಿ ರೂ.೯೫ ಲಕ್ಷಗಳನ್ನು ಈಗಾಗಲೇ ಸರ್ಕಾರ ಮಂಜೂರು ಮಾಡಿದ್ದು, ಆಕ್ಸಿಜನ್ ಘಟಕದ ನಿರ್ಮಾಣಕ್ಕಾಗಿ ಕಟ್ಟಡ ನಿರ್ಮಾಣ ಕಾಮಗಾರಿ ಶೇ. ೮೦ರಷ್ಟು ಪೂರ್ಣಗೊಂಡಿದೆ.
ಮೂರನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ಅಗತ್ಯವಿರುವ ರೂ.೧ಕೋಟಿ ವೆಚ್ಚದ ಆಮ್ಲಜನಕ ಉತ್ಪಾದನಾ ಘಟಕದ ನಿರ್ಮಾಣ ಕಾಮಗಾರಿ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ತ್ವರಿತಗತಿಯಲ್ಲಿ ನಡೆಯುತ್ತಿದೆ. ೨ ತಿಂಗಳಿನಲ್ಲಿ ಕಾಮಗಾರಿ ಪೂರ್ಣಗೊಂಡು ರೋಗಿಗಳ ಸೇವೆಗೆ ಸಿದ್ಧವಾಗಲಿದೆ.
ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಈಗಾಗಲೇ ಕೋವಿಡ್ ಸೋಂಕಿತ ಮತ್ತು ನಾನ್ಕೋವಿಡ್ ರೋಗಿಗಳಿಗೆ ಅನುಕೂಲವಾಗಲು ೫೦ ಬೆಡ್ಗಳಿಗೆ ಆಕ್ಸಿಜನ್ ಸೇವೆಯನ್ನು ಒದಗಿಸಲಾಗಿದೆ. ಆದರೆ ಆಕ್ಸಿಜನ್ ಖಾಲಿಯಾದರೆ ಮೈಸೂರಿನಿಂದ ತುಂಬಿಸಿ ತರಬೇಕು. ಇಲ್ಲೇ ಘಟಕ ಆರಂಭವಾದರೆ ಸ್ಥಳೀಯವಾಗಿ ಆಸ್ಪತ್ರೆ ಆವರಣದಲ್ಲಿಯೇ ನಿಮಿಷಕ್ಕೆ ೩೯೦ ಲೀಟರ್ ಆಕ್ಸಿಜನ್ ಉತ್ಪಾದನೆಯಾಗು ವುದರಿಂದ ಮೈಸೂರಿಗೆ ಹೋಗುವ ಅಗತ್ಯವಿರುವುದಿಲ್ಲ.
(ಮೊದಲ ಪುಟದಿಂದ) ಇದರೊಂದಿಗೆ ೧೦೦ ರೋಗಿಗಳಿಗೆ ಏಕಕಾಲದಲ್ಲಿ ಆಮ್ಲಜನಕ ಸೇವೆಯನ್ನು ನೀಡಲು ಸಾಧ್ಯವಾಗುತ್ತದೆ ಎಂದು ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ರವೀಂದ್ರನ್ ಆಭಿಪ್ರಾಯಿಸಿದ್ದಾರೆ.
ಆಕ್ಸಿಜನ್ ಘಟಕಕ್ಕೆ ಅಗತ್ಯವಿರುವ ಕಂಪ್ರೆಸರ್, ವೆಂಟಿಲೇಟರ್ ಮತ್ತು ಆಕ್ಸಿಜನ್ಕಾನ್ಸನ್ಟ್ರೇಟರ್ ಸೇರಿದಂತೆ ಇನ್ನಿತರ ಯಂತ್ರದ ಸಾಮಗ್ರಿಗಳನ್ನು ಘಾಜಿಯಾಬಾದ್ನಿಂದ ತರಿಸಲು ವ್ಯವಸ್ಥೆ ಮಾಡಲಾಗಿದೆ. ಕೊಠಡಿಯ ಸಿವಿಲ್ ಕಾಮಗಾರಿಗಳು ಹದಿನೈದು ದಿನಗಳಲ್ಲಿ ಪೂರ್ಣಗೊಳ್ಳಲಿವೆ. ಆಕ್ಸಿಜನ್ ಉತ್ಪಾದಿಸುವ ಯಂತ್ರವು ಗಾಳಿಯಿಂದ ಆಮ್ಲಜನಕ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ನಂತರ ನೇರವಾಗಿ ರೋಗಿಗಳಿಗೆ ನೀಡಲು ಸಾಧ್ಯವಾಗುತ್ತದೆ ಎಂದು ಅಭಿಯಂತರ ಪುಷ್ಪಕ್ ಮಂದಣ್ಣ ತಿಳಿಸಿದ್ದಾರೆ.
ಕೊರೊನಾ ಪ್ರಥಮ ಅಲೆ ಗಿಂತಲೂ ಎರಡನೇ ಅಲೆಯಲ್ಲಿ ದೇಶದಲ್ಲಿ ಅತೀ ಹೆಚ್ಚು ಸಾವುಗಳು ಸಂಭವಿಸಿದ್ದು, ಇದೀಗ ಮೂರನೇ ಅಲೆಯ ಬಗ್ಗೆ ತಜ್ಞರು ಎಚ್ಚರಿಕೆ ನೀಡುತ್ತಿದ್ದಾರೆ. ಇದರೊಂದಿಗೆ ಮಕ್ಕಳ ಆರೋಗ್ಯದ ಬಗ್ಗೆಯೂ ಹೆಚ್ಚಿನ ಕಳವಳ ಉಂಟಾಗಿದ್ದು, ಮೂರನೆ ಅಲೆಯಲ್ಲಿ ಯಾವುದೇ ರೀತಿಯ ತೊಂದರೆ ಯಾಗದಂತೆ ಎಚ್ಚರ ವಹಿಸಲು ಕೇಂದ್ರ ಸರ್ಕಾರ ಈಗಾಗಲೇ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.
೩ನೇ ಅಲೆಯಲ್ಲಿ ಮಕ್ಕಳಿಗೆ ತೊಂದರೆಯಾಗದAತೆ ಅಗತ್ಯವಿರುವ ಆಕ್ಸಿಜನ್ ಉತ್ಪಾದನೆಗಾಗಿ ಕೇಂದ್ರ ಸರ್ಕಾರ ‘ಪ್ರಾಜೆಕ್ಟ್ ಒ೨’ ಯೋಜನೆಗೆ ಚಾಲನೆ ನೀಡಿರುವುದರಿಂದ, ಆರೋಗ್ಯ ಇಲಾಖೆ ವಿಶೇಷ ಆದ್ಯತೆಯನ್ನು ಆಮ್ಲಜನಕ ಉತ್ಪಾದನಾ ವಲಯಕ್ಕೆ ನೀಡಲು ಮುಂದಾಗಿರುವ ಪರಿಣಾಮ ಸೋಮವಾರಪೇಟೆಯಲ್ಲಿ ಆಕ್ಸಿಜನ್ ಉತ್ಪಾದನಾ ಘಟಕ ನಿರ್ಮಾಣ ವಾಗುತ್ತಿದೆ. ಆಕ್ಸಿಜನ್ ಉತ್ಪಾದನಾ ಘಟಕ ಸೆಪ್ಟೆಂಬರ್ ತಿಂಗಳೊಳಗೆ ರೋಗಿಗಳ ಸೇವೆಗೆ ದೊರಕುವ ನಿರೀಕ್ಷೆಯಿದೆ. ಈಗಾಗಲೇ ಘಟಕದ ಕಾಮಗಾರಿಯನ್ನು ಸಂಸದ ಪ್ರತಾಪ್ಸಿಂಹ ಮತ್ತು ಶಾಸಕ ಅಪ್ಪಚ್ಚುರಂಜನ್ ಅವರುಗಳು ಪರಿಶೀಲಿಸಿದ್ದು, ಅಗತ್ಯ ಸಲಹೆಗಳನ್ನು ನೀಡಿದ್ದಾರೆ. ಕೊರೊನಾ ಮೂರನೇ ಅಲೆಯಲ್ಲಿ ಮಕ್ಕಳಿಗೆ ತೊಂದರೆ ಯಾಗುವ ವರದಿಯಿರುವುದರಿಂದ ಅದನ್ನು ಸಮರ್ಥವಾಗಿ ನಿಭಾಯಿಸಲು ೧೦೦ ಬೆಡ್ ಸಾಮರ್ಥ್ಯವುಳ್ಳ ಸೋಮವಾರ ಪೇಟೆ ಸರ್ಕಾರಿ ಆಸ್ಪತ್ರೆಯ ಕೋವಿಡ್ ಕೇರ್ ಸೆಂಟರ್ಗೆ ಅಗತ್ಯವಿರುವ ಆಮ್ಲಜನಕವನ್ನು ಒದಗಿಸಲು ಎಲ್ಲಾ ವ್ಯವಸ್ಥೆ ಮಾಡಿಕೊಳ್ಳ ಲಾಗುತ್ತಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಗ್ರಾಮೀಣ ಪ್ರದೇಶದಿಂದಲೇ ಆವೃತ್ತವಾಗಿರುವ ಸೋಮವಾರಪೇಟೆ ತಾಲೂಕು ವ್ಯಾಪ್ತಿಗೆ ಇಂತಹ ಯೋಜನೆ ಅತೀ ಅಗತ್ಯವಿದ್ದು, ಇದೀಗ ಕಾರ್ಯರೂಪಕ್ಕೆ ಬರುತ್ತಿದೆ. ಗ್ರಾಮೀಣ ಪ್ರದೇಶದ ಮಂದಿ ಹೆಚ್ಚಾಗಿ ಸರ್ಕಾರಿ ಆಸ್ಪತ್ರೆಯನ್ನೇ ಅವಲಂಬಿಸಿದ್ದು, ಆಕ್ಸಿಜನ್ ಬೇಕಾಗುವಂತಹ ತುರ್ತು ಸಂದರ್ಭದಲ್ಲಿ ಮಡಿಕೇರಿ, ಮೈಸೂರು, ಹಾಸನಕ್ಕೆ ತೆರಳಬೇಕಾಗಿತ್ತು. ಇದೀಗ ಸ್ಥಳೀಯವಾಗಿಯೇ ಆಕ್ಸಿಜನ್ ಸಹಿತ ಬೆಡ್ಗಳ ವ್ಯವಸ್ಥೆಯಾದರೆ ರೋಗಿಗಳ ಪಾಲಿಗೆ ಹೆಚ್ಚಿನ ಉಪಯೋಗ ವಾಗಲಿದೆ.