ಮಡಿಕೇರಿ, ಜೂ. ೭: ಸೋಮವಾರಪೇಟೆ ತಾಲೂಕಿನ ಗರ್ವಾಲೆ, ಮಾದಾಪುರ, ತಾಕೇರಿ, ಸೂರ್ಲಬ್ಬಿ, ತೊರೆನೂರು, ಹೆಬ್ಬಾಲೆ, ಶಿರಂಗಾಲ, ಹುಲುಸೆ, ಕೆದಕಲ್, ಹೊರೂರು, ಗ್ರಾಮದಲ್ಲಿ ಜಾನುವಾರುಗಳಿಗೆ ಕಾಲುಬಾಯಿ ಜ್ವರ ಕಾಣಿಸಿಕೊಂಡಿರುವ ಬಗ್ಗೆ ಈ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸ ಲಾಗಿದ್ದು, ಇದರ ಬಗ್ಗೆ ತಾಲೂಕಿನ ಸಹಾಯಕ ನಿರ್ದೇಶಕರು ಹಾಗೂ ಆ ವ್ಯಾಪ್ತಿಗೆ ಬರುವ ಪಶು ವೈದ್ಯರುಗಳು ಮುಂಜಾಗೃತಾ ಕ್ರಮ ವಹಿಸಿರುತ್ತಾರೆ. ಈ ಗ್ರಾಮದ ಜಾನುವಾರುಗಳಿಗೆ ಈಗಾಗಲೇ ೧ ನೇ ಸುತ್ತಿನ ಕಾಲುಬಾಯಿ ಜ್ವರದ ರೋಗ ನಿರೋಧಕ ಲಸಿಕೆಯನ್ನು ೨೦೨೦ರ ಅಕ್ಟೋಬರ್ ಮಾಹೆಯಲ್ಲಿ ಹಾಕಲಾಗಿದೆ. ಗ್ರಾಮಗಳ ಜಾನುವಾರುಗಳ ರಕ್ತದ ಮಾದರಿಗಳನ್ನು ಈಗಾಗಲೇ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು ವರದಿಯನ್ನಾಧರಿಸಿ ಕ್ರಮಕೈಗೊಳ್ಳಲಾಗುವುದು ಎಂದು ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಸುರೇಶ ಭಟ್ ತಿಳಿಸಿದ್ದಾರೆ.