ಮಡಿಕೇರಿ, ಜೂ. ೭: ಕತ್ತಲೆಕಾಡು -ಕ್ಲೋಸ್ಬರ್ನ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣವನ್ನು ಇಂದು ಸ್ವಚ್ಛಗೊಳಿಸಲಾಯಿತು. ಕೋವಿಡ್ ಕಾರಣದಿಂದ ಲಾಕ್ಡೌನ್ ಇರುವುದರಿಂದ ಹಲವು ತಿಂಗಳಿನಿAದ ಶಾಲೆ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ಶಾಲೆ ಆವರಣದಲ್ಲಿ ಕಾಡು ಗಿಡಗಳು ಬೆಳೆದಿದ್ದು, ಆವರಣದ ಮೂಲ ಸ್ವರೂಪಕ್ಕೆ ದಕ್ಕೆಯಾಗಿತ್ತು. ಹೀಗಾಗಿ ಇಂದು ಹಳೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸೇರಿ ಶಾಲೆ ಸುತ್ತಲಿನ ಬೇಲಿ, ಕುರುಚಲು ಗಿಡಗಳನ್ನು ಕಡಿದು ಸ್ವಚ್ಛಗೊಳಿಸಿದರು. ಮುಂದೆ ಶಾಲೆ ಆರಂಭ ಆಗುವವರೆಗೆ ಶಾಲೆ ಆವರಣದ ನಿರ್ವಹಣೆ ಬಗ್ಗೆ ಗಮನಹರಿಸುವುದಾಗಿ ಶ್ರಮದಾನದಲ್ಲಿ ತೊಡಗಿಸಿಕೊಂಡ ಯುವಕರು ತಿಳಿಸಿದರು. ಗ್ರಾಮದ ವಾಸು, ನೂರುದ್ದೀನ್, ಉಮೇಶ್ ರೈ, ಶಿಹಾಬ್, ಕಿಶೋರ್ ರೈ, ಫಯಾಸ್, ನಿತಿನ್ ಪಾಲ್ಗೊಂಡಿದ್ದರು.