ಮಡಿಕೇರಿ, ಫೆ. ೨೫: ಮಡಿಕೇರಿಯಿಂದ ಮೇಕೇರಿವರೆಗಿನ ರಸ್ತೆಯಲ್ಲಿ ತಾ. ೨೫ ರಿಂದ ಮಾ. ೨೫ರ ವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಿರುವುದು ಸರಿಯಾದ ಕ್ರಮವಲ್ಲವೆಂದು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ನ ಪ್ರಧಾನ ಕಾರ್ಯದರ್ಶಿ ಅಂಬೆಕಲ್ಲು ನವೀನ್ ಕುಶಾಲಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾಂಕ್ರಿಟ್ ರಸ್ತೆ ನಿರ್ಮಾಣದ ಕಾರಣ ನೀಡಿ ಮುಖ್ಯ ರಸ್ತೆಯನ್ನು ಒಂದು ತಿಂಗಳ ಕಾಲ ಬಂದ್ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿರುವ ಅವರು, ಕಾಂಕ್ರಿಟ್ ಹಾಕುವ ಬದಲು ಡಾಂಬರೀಕರಣ ಮಾಡಿ ಶೀಘ್ರ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಒತ್ತಾಯಿಸಿ ದ್ದಾರೆ.

ಮೊದಲ ಹಂತದ ಕಾಮಗಾರಿಯ ಸಂದರ್ಭ ಸುಮಾರು ಎರಡು ತಿಂಗಳ ಕಾಲ ಇದೇ ರಸ್ತೆಯನ್ನು ಬಂದ್ ಮಾಡಲಾಗಿತ್ತು. ಇದೀಗ ಮುಂದುವರಿದ ಕಾಮಗಾರಿಗಾಗಿ ಮತ್ತೆ ಒಂದು ತಿಂಗಳ ಕಾಲ ರಸ್ತೆ ಬಂದ್ ಎಂದು ಹೇಳಲಾಗುತ್ತಿದೆ. ಆದರೆ ೩೦ ದಿನಗಳಲ್ಲಿ ಕಾಮಗಾರಿ ಪೂರ್ಣ ಗೊಳಿಸುವ ಹೇಳಿಕೆ ಅನುಮಾನದಿಂದ ಕೂಡಿದೆ, ಅಲ್ಲದೆ ಕೇವಲ ಅರ್ಧ ಕಿ.ಮೀ. ದೂರದ ರಸ್ತೆಯನ್ನು ಕಾಂಕ್ರಿಟಿಕರಣಗೊಳಿಸಲು ಒಂದು ತಿಂಗಳು ಬೇಕೆ ಎನ್ನುವ ಪ್ರಶ್ನೆ ಮೂಡುತ್ತಿದೆ. ನಿರಂತರವಾಗಿ ರಸ್ತೆ ಬಂದ್ ಮಾಡುವುದರಿಂದ ಈ ಭಾಗದ ವ್ಯಾಪಾರಸ್ಥರಿಗೆ, ನಿವಾಸಿಗಳಿಗೆ, ಖಾಸಗಿ ಬಸ್, ಆಟೋರಿಕ್ಷಾಗಳು ಮತ್ತು ಇತರ ವಾಹನಗಳಿಗೆ ತೊಂದರೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ಕೈಗೊಂಡಿರುವ ಕಾಮಗಾರಿ ಅತ್ಯಂತ ಕಳಪೆ ಗುಣಮಟ್ಟದಿಂದ ಕೂಡಿದ್ದು, ಹಳೆಯ ರಸ್ತೆಯ ಕಲ್ಲುಗಳನ್ನು ವೈಜ್ಞಾನಿಕವಾಗಿ ತೆರವುಗೊಳಿಸಿ ಗುಣಮಟ್ಟದಿಂದ ಕಾಂಕ್ರಿಟಿಕರಣಗೊಳಿಸದೆ ಹೊಸ ಕಾಮಗಾರಿಗೆ ಬಳಕೆ ಮಾಡಿ ಕೊಳ್ಳಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.