ಮಡಿಕೇರಿ, ಫೆ. ೧೨; ಜೀವನದಲ್ಲಿ ಜಿಗುಪ್ಸೆಗೊಂಡಿದ್ದ ವ್ಯಕ್ತಿಯೋರ್ವರು ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿಗೆ ಸಮೀಪದ ಕಗ್ಗೋಡ್ಲುವಿನಲ್ಲಿ ಸಂಭವಿಸಿದೆ. ಕಗ್ಗೋಡ್ಲುವಿನ ಬೀಚನ ಈರಪ್ಪ (೬೮)ಎಂಬವರೇ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.

ಈರಪ್ಪ ಅವರು ತನ್ನ ಮಗ ಕುಮಾರ್, ಸೊಸೆ ಹಾಗೂ ಮೊಮ್ಮಕ್ಕಳೊಂದಿಗೆ ವಾಸವಿದ್ದರು. ನಿನ್ನೆ ಮಗ ಹಾಗೂ ಸೊಸೆ ತೋಟಕ್ಕೆ ಕೆಲಸಕ್ಕೆ ಹೋಗಿದ್ದ ಸಂದರ್ಭ ಮನೆಯಲ್ಲಿದ್ದ ಸ್ವಲ್ಪ ಕಾಫಿಯನ್ನು ಕೊಂಡೊಯ್ದು ಮಾರಾಟ ಮಾಡಿ ಮನೆಗೆ ಬಂದಿದ್ದಾರೆ. ಬರುವಾಗ ಮದ್ಯ ಸೇವನೆ ಮಾಡಿದ್ದು, ಮೊಮ್ಮಕ್ಕಳಿಗೆ ಚಾಕಲೇಟ್ ತಂದು ಕೊಟ್ಟಿದ್ದಾರೆ. ಅಲ್ಲದೆ, ಮಗ ಹಾಗೂ ಸೊಸೆ ಸಂಜೆ ಕೆಲಸದಿಂದ ಬರುವ ವೇಳೆಗೆ ಅವರುಗಳಿಗೆ ಕುಡಿಯಲು ಕಾಫಿ ಮಾಡಿ ಇಟ್ಟಿದ್ದರು. ಕಾಫಿ ಕುಡಿದ ಮಗ ತರಕಾರಿ ತೋಟಕ್ಕೆ ತೆರಳಿದ್ದಾರೆ ಸೊಸೆ ಬಟ್ಟೆ ಒಗೆಯಲೆಂದು ಸನಿಹದ ಹೊಳೆಗೆ ತೆರಳಿದ ಸಂದರ್ಭ ಮನೆಯಲ್ಲಿದ್ದ ಒಂಟಿ ನಳಿಕೆ ಕೋವಿಯಿಂದ ಮನೆಯ ಎದುರಿನ ಮೆಟ್ಟಿಲಿನಲ್ಲಿ ಕುತ್ತಿಗೆಗೆ ಕೋವಿಯನ್ನಿರಿಸಿಕೊಂಡು ಕಾಲಿನಿಂದ ಟ್ರಿಗ್ಗರ್ ಅದುಮಿಕೊಂಡು ಗುಂಡು ಹಾರಿಸಿಕೊಂಡಿದ್ದಾರೆ. ಕುತ್ತಿಗೆಯ ಮೇಲ್ಭಾಗ ಚಿದ್ರಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇಂದು ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದ್ದು, ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.