ಮಡಿಕೇರಿ, ಫೆ. ೯: ಜೋಡುಪಾಲದಲ್ಲಿ ೨೦೧೮ ರ ಮಹಾಮಳೆಗೆ ಹಾನಿಗೀಡಾದ ಕಿರುಕಿಲು ಸೇತುವೆಯನ್ನು ದುರಸ್ತಿ ಪಡಿಸಬೇಕು ಮತ್ತು ದೇವರಕೊಲ್ಲಿಯ ಬುಡಕಟ್ಟು ಜನಾಂಗದ ಕುಟುಂಬಗಳಿಗೆ ರಸ್ತೆ ಹಾಗೂ ವಿದ್ಯುತ್ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಮದೆ ಗ್ರಾ.ಪಂ. ಸದಸ್ಯರಾದ ಈ.ಕೆ. ಸೈದಲವಿ ಹಾಗೂ ಬಿ.ಎಸ್. ವಿಮಲಾಕ್ಷಿ ಮನವಿ ಮಾಡಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮಡಿಕೇರಿ ತಾಲೂಕು ಮದೆ ಗ್ರಾಮದ ದೇವರಕೊಲ್ಲಿ ಶಾಲೆ ಹಿಂಭಾಗದ ರಸ್ತೆಯನ್ನು ವಿಧಾನ ಪರಿಷತ್ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ ಅವರ ಅನುದಾನ ರೂ. ೫ ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಇದೇ ರೀತಿ ಗ್ರಾಮಸ್ಥರ ಸಂಚಾರಕ್ಕೆ ಅಡ್ಡಿಯಾಗಿರುವ ಮತ್ತು ಅಪಾಯದ ಸ್ಥಿತಿಯಲ್ಲಿರುವ ಕಿರುಕಿಲು ಸೇತುವೆಯನ್ನು ಕೂಡ ಅಭಿವೃದ್ಧಿ ಪಡಿಸಬೇಕು ಎಂದು ಒತ್ತಾಯಿಸಿದ್ದಾರೆ. ದೇವರಕೊಲ್ಲಿ ಭಾಗದಲ್ಲಿ ಸುಮಾರು ೨೫ಕ್ಕೂ ಹೆಚ್ಚು ಬುಡಕಟ್ಟು ಕುಟುಂಬಗಳಿದ್ದು, ರಸ್ತೆ ಮತ್ತು ವಿದ್ಯುತ್ ಕೊರತೆಯನ್ನು ಎದುರಿಸುತ್ತಿದ್ದಾರೆ. ಇಲ್ಲಿಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ.