ಮಡಿಕೇರಿ, ಜ. ೨೧: ಮಡಿಕೇರಿ ತಾಲೂಕು ಅಕ್ರಮ-ಸಕ್ರಮ ಸಮಿತಿಯ ಸಭೆ ಸಮಿತಿ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ ಅವರ ಅಧ್ಯಕ್ಷತೆಯಲ್ಲಿ ಮಡಿಕೇರಿಯ ತಹಶೀಲ್ದಾರರ ಕಚೇರಿ ಸಭಾಂಗಣದಲ್ಲಿ ನಡೆಯಿತು. ಭಾಗಮಂಡಲ ಹೋಬಳಿ ಹಾಗೂ ಸಂಪಾಜೆ ಹೋಬಳಿಗಳಿಂದ ಸಕ್ರಮಕ್ಕಾಗಿ ಸಲ್ಲಿಕೆಯಾಗಿದ್ದ ಅರ್ಜಿಗಳಲ್ಲಿ ೧೪ ಅರ್ಜಿಗಳ ವಿಲೇವಾರಿ ಮಾಡಲಾಗಿ ಹಕ್ಕುಪತ್ರ ನೀಡಲು ಮುಂದಿನ ಕ್ರಮಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಉಳಿದ ಅರ್ಜಿಗಳ ವಿಲೇವಾರಿಯನ್ನು ಫೆಬ್ರವರಿ ೧೧ರ ಸಭೆಯಲ್ಲಿ ಮಾಡುವಂತೆ ತೀರ್ಮಾನಿಸಲಾಯಿತು. ಭಾಗಮಂಡಲ ಹೋಬಳಿಯಲ್ಲಿನ ಸಿ ಅಂಡ್ ಡಿ ಜಾಗ ಮತ್ತು ಅರಣ್ಯ ಇಲಾಖೆಯ ಜಾಗ ಹಾಗೂ ಪೈಸಾರಿ ಜಾಗಗಳ ನಿಖರ ಮಾಹಿತಿಗಾಗಿ ಜಂಟಿ ಸರ್ವೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದ್ದು ಸರ್ವೆಯ ಬಳಿಕ ಹಕ್ಕುಪತ್ರ ನೀಡುವ ಕುರಿತು ಕ್ರಮಕೈಗೊಳ್ಳುವಂತೆ ಸಭೆ ತೀರ್ಮಾನಿಸಿತು. ಅಕ್ರಮ-ಸಕ್ರಮ ಸಮಿತಿ ಸಭೆಯಲ್ಲಿ ತಹಶೀಲ್ದಾರ್ ಮಹೇಶ್ ಎ.ಸಿ.ಎಫ್. ದಯಾನಂದ್ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಅಕ್ರಮ ಸಕ್ರಮ ಸಮಿತಿಯ ಸದಸ್ಯರುಗಳು ಪಾಲ್ಗೊಂಡಿದ್ದರು.