ಮಡಿಕೇರಿ, ಜ. ೮: ಅಯ್ಯಪ್ಪ ಮಾಲೆ ಧರಿಸಿ ಶಭರಿಮಲೆಗೆ ತೆರಳಲು ಪೂಜೆಯಲ್ಲಿದ್ದ ಸಂದರ್ಭ ಹೃದಯಾಘಾತವಾಗಿ ಕುಸಿದು ಬಿದ್ದು ಅಯ್ಯಪ್ಪ ಭಕ್ತ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೂಲತಃ ಮಡಿಕೇರಿಯ ಕಾನ್ವೆಂಟ್ ಜಂಕ್ಷನ್ ಬಳಿಯ ನಿವಾಸಿ ವಿ.ಜಿ. ಸತ್ಯಕುಮಾರ್ (೪೯) ಮೃತಪಟ್ಟ ದುರ್ದೈವಿ.

ಮೈಸೂರಿನಲ್ಲಿ ಸರಕಾರಿ ಮುದ್ರಣಾಲಯದಲ್ಲಿ ಉದ್ಯೋಗದಲ್ಲಿದ್ದ ಸತ್ಯ ಅವರು ಅಯ್ಯಪ್ಪನ ಮಾಲೆ ಧರಿಸಿದ್ದು, ಇಂದು ಶಭರಿಮಲೆಗೆ ತೆರಳಲು ಕಟ್ಟು ಪೂಜೆ ನಡೆಯುತ್ತಿದ್ದ ವೇಳೆ ಕುಸಿದು ಬಿದ್ದಿದ್ದಾರೆ. ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಹೃದಯಾಘಾತವಾಗಿ ಸಾವನ್ನಪ್ಪಿರುವುದು ದೃಢಪಟ್ಟಿದೆ.

ಸತ್ಯ ಅವರ ತಾಯಿ ಹಾಗೂ ದೇವಿ ಗ್ಯಾಸ್‌ನಲ್ಲಿ ಉದ್ಯೋಗದಲ್ಲಿರುವ ಚಂದ್ರು ಅವರುಗಳು ಕೂಡ ಮಾಲೆ ಧರಿಸಿದ್ದು, ಒಟ್ಟಾಗಿ ಶಭರಿಮಲೆಗೆ ತೆರಳಲು ಮೈಸೂರಿಗೆ ಹೊರಟಿದ್ದರು. ಈ ವೇಳೆಯಲ್ಲಿ ಸಾವಿನ ಸುದ್ದಿ ತಿಳಿದುಬಂದಿದೆ.