ಮಡಿಕೇರಿ, ಜ. ೪ : ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಇತ್ತೀಚೆಗೆ ಜಾರಿಗೆ ತಂದಿರುವ ಕಠಿಣ ನಿಯಮಗಳನ್ನು ಕೈಬಿಡಬೇಕು ಮತ್ತು ಕಮಿಷನ್ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಕೊಡಗು ಜಿಲ್ಲಾ ಪಿಗ್ಮಿ ಸಂಗ್ರಹಗಾರರ ಸಂಘದಿAದ ಪ್ರತಿಭಟನೆ ನಡೆಯಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಎಂ.ಡಿ.ನಾಣಯ್ಯ, ನಿತ್ಯ ಪಿಗ್ಮಿ ಸಂಗ್ರಹಿಸುವ ಮೂಲಕ ಡಿಸಿಸಿ ಬ್ಯಾಂಕ್ನ ಆರ್ಥಿಕ ಅಭ್ಯುದಯಕ್ಕೆ ಸಹಕಾರಿಯಾಗಿರುವ ಪಿಗ್ಮಿ ಸಂಗ್ರಹಗಾರರಿಗೆ ಅಗತ್ಯ ಅನುಕೂಲತೆಗಳನ್ನು ಕಲ್ಪಿಸಿಕೊಡುವ ಬದಲು ಆಡಳಿತ ಮಂಡಳಿ ಮತ್ತಷ್ಟು ಕಠಿಣ ನಿಯಮಗಳನ್ನು ಹೇರಿಕೆ ಮಾಡಿ ಮಾನಸಿಕ ಹಿಂಸೆ ನೀಡುತ್ತಿದೆ ಎಂದು ಆರೋಪಿಸಿದರು.
ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಪಿಗ್ಮಿ ಸಂಗ್ರಹಗಾರರ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶದಿಂದ ಜಿಲ್ಲಾ ಮಟ್ಟದ ಸಂಘವನ್ನು ರಚಿಸಲಾಯಿತು. ಆದರೆ ಇದನ್ನೇ ನೆಪ ಮಾಡಿಕೊಂಡು ಬ್ಯಾಂಕ್ ಆಡಳಿತ ಮಂಡಳಿ ಕಿರುಕುಳ ನೀಡುತ್ತಿದೆ. ನನ್ನನ್ನು ಪಿಗ್ಮಿ ಸಂಗ್ರಹಗಾರ ಹುದ್ದೆಯಿಂದ ತೆಗೆದು ಹಾಕಿರುವುದಲ್ಲದೆ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಸಂಗ್ರಹಗಾರರಿಗೂ ಕರಾರು ಪತ್ರಕ್ಕೆ ಸಹಿ ಹಾಕುವಂತೆ ಒತ್ತಡ ಹೇರುತ್ತಿದ್ದಾರೆ.
ಈ ಪತ್ರದಲ್ಲಿ ಬ್ಯಾಂಕ್ನ ಶಾಖೆಗಳ ಮೂಲಕ ನೀಡಲಾಗಿರುವ ಸಾಲ ಮತ್ತು ಮುದ್ರಾ ಸಾಲಗಳ ವಸೂಲಾತಿ ಜವಾಬ್ದಾರಿಯನ್ನು ಪಿಗ್ಮಿ ಸಂಗ್ರಹಗಾರರೇ ವಹಿಸಿಕೊಳ್ಳಬೇಕು, ಬ್ಯಾಂಕಿನ ವಿರುದ್ಧ ಯಾವುದೇ ತಕರಾರು ಎತ್ತಬಾರದು, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡಲ್ಲಿ ಬ್ಯಾಂಕ್ ನಿಯಮಾವಳಿಗೆ ಒಳಪಟ್ಟು ಕ್ರಮ ಜರುಗಿಸಲಾಗುವುದು ಎಂದು ತಿಳಿಸಲಾಗಿದ್ದು, ಇದಕ್ಕೆ ಸಹಿ ಹಾಕಲು ಒತ್ತಡ ಹೇರಲಾಗುತ್ತಿದೆ. ಸಹಿ ಹಾಕದಿದ್ದರೆ ಹೊಸ ಪಿಗ್ಮಿ ಸಂಗ್ರಹಗಾರರನ್ನು ನೇಮಿಸಿಕೊಳ್ಳುವ ಬಗ್ಗೆ ಚರ್ಚೆ ನಡೆಯುತ್ತಿದೆ. ನಮಗೆ ಕಳೆದ ಎರಡು ವರ್ಷಗಳಿಂದ ಬರಬೇಕಾದ ಕಮಿಷನ್ ಹಣವನ್ನು ನೀಡದೆ ಸತಾಯಿಸಲಾಗುತ್ತಿದೆ. ಇದು ಕಳೆದ ಅನೇಕ ವರ್ಷಗಳಿಂದ ಪ್ರಾಮಾಣಿಕವಾಗಿ ಪಿಗ್ಮಿ ಸಂಗ್ರಹಿಸುತ್ತಿರುವವರಿಗೆ ಮಾಡುತ್ತಿರುವ ಅನ್ಯಾಯವಾಗಿದೆ ಎಂದು ನಾಣಯ್ಯ ಆರೋಪಿಸಿದ್ದಾರೆ.
ಉದ್ಯೋಗದ ಅಭದ್ರತೆ ಮತ್ತು ಆರ್ಥಿಕ ಬಿಕ್ಕಟ್ಟಿನಿಂದ ಕುಟುಂಬಗಳು ಆತಂಕವನ್ನು ಎದುರಿಸುತ್ತಿವೆ. ಮುಂದಿನ ದಿನಗಳಲ್ಲಿ ಪಿಗ್ಮಿ ಸಂಗ್ರಹಗಾರರಿಗೆ ಯಾವುದೇ ರೀತಿಯ ತೊಂದರೆಗಳು ಎದುರಾದರೂ ಅದಕ್ಕೆ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಹೊಣೆಯಾಗಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಯಲ್ಲಿ ಕಾರ್ಯದರ್ಶಿ ಮಂಜುನಾಥ್, ಸಹ ಕಾರ್ಯದರ್ಶಿ ವಿಜಯಲಕ್ಷ್ಮಿ, ನಿರ್ದೇಶಕರಾದ ಗಿರೀಶ್ ರೈ, ಜಯಂತ್ ಕುಮಾರು ಹಾಗೂ ಸದಸ್ಯರು ಹಾಜರಿದ್ದರು.