ಸೋಮವಾರಪೇಟೆ,ಡಿ.16: ಕಾಂಕ್ರೀಟ್ ಮಿಶ್ರಣ ಮಾಡುವ ಯಂತ್ರ ಉರುಳಿ ಬಿದ್ದ ಪರಿಣಾಮ ವಾಸದ ಮನೆಗೆ ಸಣ್ಣಪುಟ್ಟ ಹಾನಿಯಾಗಿದ್ದು, ಮನೆ ಮಂದಿ ಅಪಾಯದಿಂದ ಪಾರಾಗಿರುವ ಘಟನೆ ಸಮೀಪದ ಚೌಡ್ಲು ಗ್ರಾಮದಲ್ಲಿ ನಡೆದಿದೆ.

ಚೌಡ್ಲು ಗ್ರಾಮದ ಗೌಡಸಮಾಜ ರಸ್ತೆಯ ಗಾಂಧಿನಗರ ನಿವಾಸಿ ಬಾಲರಾಜ್ ಎಂಬವರ ಮನೆಯ ಮೇಲ್ಭಾಗದ ರಸ್ತೆಯಲ್ಲಿ ಕಾಂಕ್ರೀಟ್ ಮಿಶ್ರಣದ ಯಂತ್ರವನ್ನು ಪಿಕ್‍ಅಪ್ ವಾಹನಕ್ಕೆ ಕಟ್ಟಿಕೊಂಡು ಸಾಗಿಸಲಾಗುತ್ತಿತ್ತು.

ಈ ಸಂದರ್ಭ ಹಗ್ಗ ತುಂಡಾಗಿ ಕಾಂಕ್ರೀಟ್ ಮಿಶ್ರಣದ ಯಂತ್ರ ಬಾಲರಾಜ್ ಅವರ ಮನೆಯ ಹಿಂಭಾಗಕ್ಕೆ ಉರುಳಿಬಿದ್ದಿದೆ. ಪಿಕ್‍ಅಪ್ ಚಾಲಕನ ಅಜಾಗರೂಕತೆಯೇ ಘಟನೆಗೆ ಕಾರಣ ಎನ್ನಲಾಗಿದ್ದು, ಅದೃಷ್ಟವಶಾತ್ ಮನೆ ಮಂದಿ ಸ್ಥಳದಲ್ಲಿ ಇಲ್ಲದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ.