ಸಿದ್ದಾಪುರ, ಡಿ. 11: ಸಿದ್ದಾಪುರದಲ್ಲಿ ಸಾರ್ವಜನಿಕ ಮೈದಾನ ಒದಗಿಸಬೇಕು, ಇಲ್ಲವಾದಲ್ಲಿ ಮತದಾನ ಬಹಿಷ್ಕಾರ ಮಾಡುವುದಾಗಿ ಗ್ರಾಮದ ಯುವಕರು ಅಭಿಯಾನ ಆರಂಭಿಸಿದ್ದಾರೆ.

ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯಲ್ಲಿ ಯಾವುದೇ ಸಾರ್ವಜನಿಕ ಮೈದಾನ ಇಲ್ಲವಾಗಿದ್ದು, ಗ್ರಾಮ ಸಭೆಗಳಲ್ಲಿ ಸಾರ್ವಜನಿಕ ಮೈದಾನದ ಬೇಡಿಕೆ ಹಲವಾರು ಬಾರಿ ಇಡಲಾಗಿದೆ. ಕೆಲವು ಯುವಕ ಸಂಘಗಳ ಪದಾಧಿಕಾರಿಗಳು ಜಿಲ್ಲಾಧಿಕಾರಿಗೂ ಈ ಬಗ್ಗೆ ಮನವಿ ಸಲ್ಲಿಸಿದ್ದರು. ಮಾತ್ರವಲ್ಲದೇ ಕಂದಾಯ ಅದಾಲತ್ ಸಂದರ್ಭದಲ್ಲೂ ಗ್ರಾಮಕ್ಕೆ ಮೈದಾನ ಒದಗಿಸಿಕೊಡಲು ಮನವಿ ಸಲ್ಲಿಸಿದ್ದು, ಈವರೆಗೂ ಯಾವುದೇ ಪ್ರಯೋಜನ ಆಗಲಿಲ್ಲ. ಹಾಗಾಗಿ ಮತದಾನ ಬಹಿಷ್ಕಾರ ಅಭಿಯಾನ ಆರಂಭಿಸಿದ್ದೇವೆ ಎಂದು ಯುವಕರು ತಿಳಿಸಿದ್ದಾರೆ. ಮೈದಾನಕ್ಕಾಗಿ ಜಿಲ್ಲಾಧಿಕಾರಿಗಳು ಸೇರಿದಂತೆ ವಿವಿಧ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದೇವೆ. ಯಾರೂ ಕೂಡ ಈವರೆಗೂ ಸ್ಪಂದಿಸಿಲ್ಲ. ಹಾಗಾಗಿ ಈ ಬಾರಿ ಮತದಾನ ಬಹಿಷ್ಕಾರ ಮಾಡಲು ನಿರ್ಧರಿಸಿದ್ದೇವೆ ಎಂದು ಸಿಟಿ ಬಾಯ್ಸ್ ಯುವಕ ಸಂಘದ ಅಫ್ಸಲ್ ತಿಳಿಸಿದ್ದಾರೆ.