ಸುಂಟಿಕೊಪ್ಪ, ನ. 21: ಸರಕಾರ ಕುಶಾಲನಗರ ನೂತನ ತಾಲೂಕನ್ನು ಅಧಿಕೃತಗೊಳಿಸಿ ಅಧಿಸೂಚನೆ ಹೊರಡಿಸಿದ್ದನ್ನು ಸ್ವಾಗತಿಸಿ ಸುಂಟಿಕೊಪ್ಪ ಹೋಬಳಿ ಕಾವೇರಿ ತಾಲೂಕು ಹೋರಾಟ ಸಮಿತಿ ವತಿಯಿಂದ ಕನ್ನಡ ವೃತ್ತದಲ್ಲಿ ಸಿಹಿ ಹಂಚಿ ಸಂಭ್ರಮಿಸಲಾಯಿತು.

ಕುಶಾಲನಗರ ನೂತನ ತಾಲೂಕಿಗೆ ಸುಂಟಿಕೊಪ್ಪ ಹೋಬಳಿಯ ಗ್ರಾಮಗಳು ಸೇರ್ಪಡೆಗೊಂಡಿದ್ದು, ಇದರಿಂದ ದೂರದ ಸೋಮವಾರಪೇಟೆಗೆ ತೆರಳಿ ಸರಕಾರಿ ಕೆಲಸ ಕಾರ್ಯಗಳನ್ನು ನಿರ್ವಹಿಸಿಕೊಳ್ಳುವುದು ಮುಂದಿನ ದಿನಗಳಲ್ಲಿ ತಪ್ಪಲಿದೆ. ರಾಜ್ಯ ಸರಕಾರ ಹಾಗೂ ಜನಪ್ರತಿನಿಧಿಗಳಿಗೆ ತಾಲೂಕು ಹೋರಾಟ ಸಮಿತಿಯವರು ಜೈಕಾರ ಕೂಗಿ ಧನ್ಯವಾದ ಅರ್ಪಿಸಿದರು.

ಕಾವೇರಿ ತಾಲೂಕು ಹೋರಾಟ ಸಮಿತಿಯ ಸುಂಟಿಕೊಪ್ಪ ಹೋಬಳಿ ಅಧ್ಯಕ್ಷ ಪಿ.ಎಫ್. ಸಬಾಸ್ಟೀನ್, ಸಮಿತಿ ಸದಸ್ಯರುಗಳಾದ ಡಿ. ನರಸಿಂಹ, ಇಸಾಕ್‍ಖಾನ್, ಶಭೀರ್, ಗ್ರಾ.ಪಂ. ಮಾಜಿ ಉಪಾಧ್ಯಕ್ಷರುಗಳಾದ ಪಿ.ಆರ್. ಸುಕುಮಾರ್, ಬಿ.ಎಸ್. ಸದಾಶಿವ ರೈ, ಬಿ.ಎಸ್. ಅಶೋಕ್‍ಶೇಟ್, ಕೆ.ಎ. ಉಸ್ಮಾನ್, ವಹೀದ್‍ಜಾನ್, ಉಸ್ಮಾನ್, ಗ್ರಾ.ಪಂ. ಮಾಜಿ ಸದಸ್ಯ ಕೆ.ಇ. ಕರೀಂ, ಅಂಬಚ್ಚು, ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್ ವಾಸು, ರಫೀಕ್‍ಖಾನ್, ಜಿಲ್ಲಾ ಪತ್ರಕರ್ತರ ಸಂಘದ ನಿರ್ದೇಶಕ ಬಿ.ಡಿ. ರಾಜು ರೈ, ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಅಧ್ಯಕ್ಷ ಎಂ.ಎಸ್. ಸುನಿಲ್‍ಕುಮಾರ್ ಹಾಗೂ ನಮ್ಮ ಸುಂಟಿಕೊಪ್ಪ ಬಳಗದ ಡೆನ್ನಿಸ್ ಡಿಸೋಜ, ಜಾಹಿದ್ ಆಹ್ಮದ್, ಕೆ.ಎಸ್. ಅನಿಲ್‍ಕುಮಾರ್ ಹಾಗೂ ಸುಂಟಿಕೊಪ್ಪ ಅಬೇಂಡ್ಕರ್ ಸಂಘದ ಅಧ್ಯಕ್ಷ ಎಂ.ಎಸ್. ರವಿ ಮತ್ತಿತರರು ಇದ್ದರು.