ಮಡಿಕೇರಿ, ನ. 3: ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಸಾಲ ಬಡ್ಡಿ ರಿಯಾಯಿತಿ ವಿತರಿಸುವ ಸಂಬಂಧ ಸರ್ಕಾರ ಹೊರಡಿಸಿರುವ ಸುತ್ತೋಲೆಯ ಮಾರ್ಗಸೂಚಿಗಳು ಸಮಂಜಸವಾಗಿಲ್ಲದ ಕಾರಣ ಡಿಸಿಸಿ ಬ್ಯಾಂಕ್ ಮಹಾಸಭೆಯಲ್ಲಿ ಸಹಕಾರ ಬ್ಯಾಂಕ್‍ಗಳ ಸರ್ವ ಸದಸ್ಯರು ಆಕ್ಷೇಪವ್ಯಕ್ತಪಡಿಸಿ, ಸರ್ಕಾರದ ಆದೇಶವನ್ನು ಮರು ಪರಿಶೀಲಿಸಿ ಸರ್ಕಾರಕ್ಕೆ ಪತ್ರ ಬರೆಯಲು ತೀರ್ಮಾನಿಸಲಾಗಿದೆ.

ನಗರದ ಕೆಳಗಿನ ಕೊಡವ ಸಮಾಜದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೋಡಂದೇರ ಪಿ. ಗಣಪತಿಯವರ ಅಧ್ಯಕ್ಷತೆಯಲ್ಲಿ ನಡೆದ2019-20ನೇ ಸಾಲಿನ 95ನೇ ವಾರ್ಷಿಕ ಮಹಾಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಂಡರು. ಪ್ರಸಕ್ತ ಸಾಲಿನಲ್ಲಿ ರಾಜ್ಯದ ರೈತರಿಗೆ ಕೃಷಿ ಪತ್ತಿನ ಸಹಕಾರಿ ಸಂಸ್ಥೆಗಳು ರಿಯಾಯಿತಿ ದರದಲ್ಲಿ ಬಡ್ಡಿದರ ಅನ್ವಯವಾಗುವಂತೆ ಕೃಷಿ ಸಾಲ ವಿತರಿಸುವ ಸಂಬಂಧ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಸಾಲ ವಿತರಿಸುವುದಕ್ಕೆ ಸರ್ಕಾರ ಹಲವಾರು ನಿಯಮಗಳನ್ನು ತಂದಿದೆ. ಈ ನಿಮಯಗಳು ಕ್ರಮಬದ್ಧವಾಗಿರದ ಕಾರಣ ನಿಯಮದಲ್ಲಿ ಸಡಿಲಿಕೆ ತರಬೇಕಿದೆ. ಈ ಕಾರಣದಿಂದ ಆದೇಶದ ಮರುಪರಿಶೀಲನೆ ಆಗಬೇಕು ಎಂದು ಸಭೆಯಲ್ಲಿ ಹಲವು ಸದಸ್ಯರಿಂದ ಒತ್ತಾಯ ಕೇಳಿಬಂತು.

ದಿನಾಂಕ 15-10-2020ರಂದು ಸಹಕಾರ ಸಂಘಗಳ ನಿಬಂಧಕರ ಕಚೇರಿಯಿಂದ ಹೊರಡಿಸಿರುವ ಸುತ್ತೋಲೆಯಲ್ಲಿ ಕೃಷಿಪತ್ತಿನ ಸಹಕಾರಿ ಸಂಸ್ಥೆಗಳ ಮೂಲಕ ಸರ್ಕಾರದಿಂದ ಕೃಷಿ ಚಟುವಟಿಕೆಗಳಿಗೆ ರೈತರಿಗೆ ಸಾಲ ನೀಡಲು ಹಲವಾರು ನಿಯಮಗಳನ್ನು ತಂದಿದೆ. ಮುಖ್ಯವಾಗಿ ಸಾಲ ಪಡೆಯುವ ರೈತನು ಕೃಷಿ ಜಾಗದ ಜೊತೆಗೆ ಆಧಾರ್ ಕಾರ್ಡ್, ಪಡಿತರ ಚೀಟಿಯನ್ನು ನೀಡಬೇಕಿದೆ. ಇನ್ನು ಪಡಿತರ ಚೀಟಿಯಲ್ಲಿನ ಸದಸ್ಯರು 1-4-2004ರಿಂದ ಸಾಲ ಪಡೆದು ಈಗಾಗಲೆ ರೂ. 4 ಲಕ್ಷ ಬಡ್ಡಿ ಸಹಾಯಧನ ಪಡೆದಿದ್ದಾರೆ. ಅಂತಹ ಕುಟುಂಬದ ಯಾವುದೇ ಸದಸ್ಯನಿಗೆ ರಿಯಾಯಿತಿ ಬಡ್ಡಿ ದರದ ಸಾಲ ಅನ್ವಯವಾಗುವುದಿಲ್ಲ. ಇದಕ್ಕೆ ಬೇಕಾದ ದಾಖಲಾತಿಗಳನ್ನು ಸಂಗ್ರಹಿಸುವುದು ಕೂಡ ಕಷ್ಟಸಾಧ್ಯ. ಹಾಗಾಗಿ ಹೊರಡಿಸಿರುವ ಆದೇಶದ ಬಗ್ಗೆ ಮರು ಪರಿಶೀಲನೆಯನ್ನು ಸರ್ಕಾರದ ಹಂತದಲ್ಲಿ ಕೈಗೊಳ್ಳಬೇಕಿದೆ ಎಂದು ಅಧ್ಯಕ್ಷ ಬಾಂಡ್ ಗಣಪತಿ ಆಗ್ರಹಿಸಿದರು.

ಇನ್ನು ಕುಟುಂಬದ ಸದಸ್ಯನಾದವನೂ, ಒಂದೇ ರೇಷನ್ ಕಾರ್ಡ್‍ನಲ್ಲಿದ್ದಾರೆ. ಆತ ಹೊಸ ರೇಷನ್‍ಕಾರ್ಡ್ ಪಡೆಯುವವರೆಗೂ ಸಾಲದ ಹಕ್ಕನ್ನು ಪಡೆಯಲು ಸಾಧ್ಯವಾಗಲ್ಲ. ಸಾಲ ನೀಡುವು ದಾದರೂ, ಒಂದೇ ಕುಟುಂಬ ಎಂದು ಪರಿಗಣಿಸಿ ಸಾಲನೀಡ ಲಾಗುತ್ತಿದೆ. ಈ ಕಾರಣಗಳಿಂದ ಮುಂದಿನ ದಿನಗಳಲ್ಲಿ ಸಾಕಷ್ಟು ರೈತರು ರಿಯಾಯಿತಿ ಬಡ್ಡಿದರದಲ್ಲಿ ಸಾಲ ಪಡೆಯಲು ಸಾಧ್ಯವಾಗುವುದಿಲ್ಲ. ಈ ಸಂಬಂಧ ರೈತರು ಈಗಾಗಲೇ ಆಕ್ಷೇಪ ವ್ಯಕ್ತಪಡಿಸಿರುವ ಕಾರಣ ಸರ್ಕಾರದ ಗಮನ ಸೆಳೆಯಬೇಕಿದೆ ಎಂದು ಸಭೆಯ ಗಮನಕ್ಕೆ ತಂದರು.

ಶೇ.11 ರಂತೆ ಡಿವಿಡೆಂಡ್ : 2019-20ನೇ ಸಾಲಿನ ಡಿಸಿಸಿ ಬ್ಯಾಂಕ್ ಒಟ್ಟು ಬ್ಯಾಂಕು ಗಳಿಸಿದ ಲಾಭಾಂಶದಿಂದ ಸದಸ್ಯರ ಸಹಕಾರ ಸಂಘಗಳಿಗೆ ಶೇ.11 ರಂತೆ ಡಿವಿಡೆಂಡ್ ನೀಡಲು ಬ್ಯಾಂಕಿನ ಮಹಾಸಭೆಯಲ್ಲಿ ಸರ್ವಸದಸ್ಯರು ಒಪ್ಪಿಗೆ ನೀಡಿದರು.

ಬ್ಯಾಂಕಿನ 100ನೇ ಸಂವತ್ಸರದ ಸಂಬಂಧ ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಸುಸಜ್ಜಿತ ಶತಮಾನೋತ್ಸವ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಈ ಸಂಬಂಧ ಕಟ್ಟಡದ ಮಾದರಿಯ ಬಗ್ಗೆ ಪುರಾತತ್ವ ಇಲಾಖೆಗೆ ಕಳುಹಿಸ ಲಾಗಿದ್ದು, ಆಡಳಿತ ಅನುಮೋದನೆಗೆ ಪಡೆದು ಅಂದಾಜು 10 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗುವುದು ಎಂದು ಬಾಂಡ್ ಗಣಪತಿ ತಿಳಿಸಿದರು.

ವೇದಿಕೆಯಲ್ಲಿ ಬ್ಯಾಂಕ್ ಉಪಾಧ್ಯಕ್ಷ ಕೇಟೋಳಿರ ಎಸ್. ಹರೀಶ್‍ಪೂವಯ್ಯ, ನಿದೇಶಕರಾದ ಬಿ.ಕೆ. ಚಿಣ್ಣಪ್ಪ, ಬಿ.ಡಿ. ಮಂಜುನಾಥ್, ಪಟ್ರಪಂಡ ಬಿ. ರಘು ನಾಣಯ್ಯ, ಹೊಟ್ಟೇಂಗಡ ಎಂ. ರಮೇಶ್, ಹೊಸೂರು ಜೆ. ಸತೀಶ್‍ಕುಮಾರ್, ಎಸ್.ಬಿ. ಭರತ್ ಕುಮಾರ್, ಕನ್ನಂಡ ಎ. ಸಂಪತ್, ಕೋಲತಂಡ ಎ.ಸುಬ್ರಮಣಿ, ಕೆ. ಮನು ಮುತ್ತಪ್ಪ, ಕಿಮ್ಮುಡೀರ ಎ. ಜಗದೀಶ್, ಉಷಾ ತೇಜಸ್ವಿ, ಕೆ.ಅರುಣ್ ಭೀಮಯ್ಯ, ಎ. ಗೋಪಾಲಕೃಷ್ಣ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಕೆ. ಸಲೀಂ ವ್ಯವಸ್ಥಾಪಕರು ಹರೀಶ್ ಪೂವಯ್ಯ, ಕೋಡಿ ಪೂವಯ್ಯ, ಜಗದೀಶ್ ಹಾಜರಿದ್ದರು.