ಮಡಿಕೇರಿ, ಅ. 23 : ಕಾವೇರಿ ಕೊಡವರ ಕುಲದೇವತೆಯಾಗಿದ್ದು, ಮಾತೆ ಕಾವೇರಿ ಮತ್ತು ಕೊಡವರ ನಡುವಿನ ಅವಿನಾಭಾವ ಸಂಬಂಧವನ್ನು ಮುರಿಯಲು ತೆರೆಮರೆಯಲ್ಲಿ ಷಡ್ಯಂತ್ರ ನಡೆಯುತ್ತಿದೆ ಎಂದು ಕಾವೇರಿಸೇನೆಯ ಅಧ್ಯಕ್ಷÀ ರವಿಚಂಗಪ್ಪ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾತೆ ಕಾವೇರಿ ಮತ್ತು ಕೊಡವ ಸಮುದಾಯದ ನಡುವಿನ ಸಂಬಂಧಗಳನ್ನು ಮುರಿಯುವ ಯತ್ನದ ಬಗ್ಗೆ ಅಗತ್ಯ ಮಾಹಿತಿಯನ್ನು ಕ್ರೋಢೀಕರಿಸಿ ಕೊಡವ ಸಮುದಾಯಕ್ಕೆ ನ್ಯಾಯ ಒದಗಿಸಲು ಸರ್ವ ಪ್ರಯತ್ನ ಮಾಡಲಾಗುವುದೆಂದು ಹೇಳಿದರು.

ತಲಕಾವೇರಿಯಲ್ಲಿ ತುಲಾ ಸಂಕ್ರಮಣದ ತೀರ್ಥೋದ್ಭವದ ಪವಿತ್ರ ಕ್ಷಣಗಳಲ್ಲಿ ಅಲ್ಪಸಂಖ್ಯಾತ ಕೊಡವ ಸಮುದಾಯವನ್ನು ಗುರಿಯಾಗಿಸಿಕೊಂಡು, ಅವರನ್ನು ಜಾತ್ರೆಗೆ ತೆರಳದಂತೆ ನಿರ್ಬಂಧಿಸುವ ಪ್ರಯತ್ನಗಳು ನಡೆದಿದ್ದು, ಇದರಲ್ಲಿ ಶಾಸಕರೊಬ್ಬರ ಕುತಂತ್ರವೂ ಅಡಗಿದೆ ಎಂದು ರವಿಚಂಗಪ್ಪ ಆರೋಪಿಸಿದರು.ತಲಕಾವೇರಿ ಮತ್ತು ಭಾಗಮಂಡಲ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರÀ ಮೇಲೆ ಗೂಬೆ ಕೂರಿಸುವ ಬದಲು, ತಮ್ಮ ಸ್ಥಾನವನ್ನು ತ್ಯಜಿಸಿ ಹೋರಾಟ ಮಾಡಬೇಕಿತ್ತು. ಇದನ್ನು ಬಿಟ್ಟು ತೀರ್ಥೋದ್ಭವಕ್ಕೂ ಮೊದಲೇ ತಲಕಾವೇರಿಯಿಂದ ಹೊರ ತೆರಳಿರುವ ಕ್ರಮ ಸರಿಯಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಕೊಡÀವರ ಕುಲದೇವಿ ಕಾವೇರಿ ಎನ್ನುವುದು ಕೊಡಗಿನ ಗೆಜೆಟಿಯರ್‍ನಲ್ಲೂ ನಮೂದಾಗಿದೆ.

(ಮೊದಲ ಪುಟದಿಂದ) ಇದೀಗ ಇಂತಹ ವಿಚಾರವನ್ನೇ ಬದಲು ಮಾಡುವ ಪ್ರಯತ್ನಗಳು ನಡೆಯುವುದರೊಂದಿಗೆ, ಕಾವೇರಿಯ ತೀರ್ಥೋದ್ಭವದಲ್ಲಿ ಕೊಡವ ಸಮೂಹ ಪಾಲ್ಗೊಳ್ಳದಂತೆ ತಡೆಯುವ ಪ್ರಯತ್ನಗಳು ಮುಂದುವರೆದಿದೆ. ಕೊಡವ ಸಮುದಾಯವನ್ನು ತುಳಿಯುವ ಪ್ರಯತ್ನಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಅವರ ರಕ್ಷಣೆಗೆ ಸಂಘಟನೆ ಮುಂದಾಗಲಿದೆ. ಕಾನೂನು ಹೋರಾಟವನ್ನು ಕೂಡ ನಡೆಸಲಾಗುವುದೆಂದು ರವಿಚಂಗಪ್ಪ ತಿಳಿಸಿದರು. ಕುಲದೇವತೆ ಕಾವೇರಿಯನ್ನು ಕೊಡವ ಸಮುದಾಯಕ್ಕೆ ಬಿಟ್ಟು ಕೊಡುವಂತೆ ಆಗ್ರಹಿಸಿದರು.

ಕೋವಿಡ್ ಕಾರಣ ನೀಡಿ ತಲಕಾವೇರಿಯಲ್ಲಿ ಭಕ್ತರಿಗೆ ನಿರ್ಬಂಧ ಹೇರಲಾಗಿದೆ. ಆದರೆ, ಕೊರೊನಾ ಹರಡುವುದಕ್ಕೆ ಕಾರಣವಾಗಬಲ್ಲ ಪ್ರವಾಸಿಗರ ವಿರುದ್ಧ ಯಾರು ಮಾತನಾಡಿದ್ದಾರೆ ಎಂದು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿ.ಎ. ಮಾಚಯ್ಯ, ಬಿ.ಎಂ. ಗಣಪತಿ ಉಪಸ್ಥಿತರಿದ್ದರು.