ಕಣಿವೆ, ಅ. 21: ಕುಶಾಲನಗರ ಸರ್ಕಾರಿ ಆಸ್ಪತ್ರೆಗೆ ಸೇರಿದ ಮುಳ್ಳುಸೋಗೆ ಗ್ರಾಮದ ಸರ್ವೆ ನಂಬರ್ 68ರ ಒಂದು ಎಕರೆ ಜಾಗವನ್ನು ಕುಶಾಲನಗರದ ಲಯನ್ಸ್ ಸಂಸ್ಥೆಯಿಂದ ಹಿಂಪಡೆದು ಆಸ್ಪತ್ರೆಯ ಸದುದ್ದೇಶಗಳಿಗೆ ಬಳಸುವ ಬಗ್ಗೆ ಬುಧವಾರ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ನಡೆದ ಆಸ್ಪತ್ರೆಯ ರಕ್ಷಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಶಾಸಕ ಅಪ್ಪಚ್ಚು ರಂಜನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಿ ಸರ್ವಾನುಮತದ ತೀರ್ಮಾನ ಕೈಗೊಳ್ಳಲಾಯಿತು. 1991 ರಲ್ಲಿ ಆಸ್ಪತ್ರೆಯ ಜಾಗವನ್ನು ಅಂತರರಾಷ್ಟ್ರೀಯ ಕಣ್ಣಾಸ್ಪತ್ರೆ ತೆರೆಯುವ ಉದ್ದೇಶಕ್ಕೆ ಲಯನ್ಸ್ ಸಂಸ್ಥೆಗೆ ನೀಡಲಾಗಿತ್ತು. ಆದರೆ ಸಕಾಲದಲ್ಲಿ ಲಯನ್ಸ್ ಸಂಸ್ಥೆಯವರು ಈ ಜಾಗವನ್ನು ಬಳಕೆ ಮಾಡಿಕೊಳ್ಳಲು ವಿಫಲರಾದ ಕಾರಣ 1999 ರಲ್ಲಿ ಕೊಡಗು ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಈ ವಿಚಾರ ಚರ್ಚೆಗೆ ಬಂದು ಲಯನ್ಸ್‍ನಿಂದ ಜಾಗವನ್ನು ವಾಪಸ್ ಪಡೆಯಲು ಅಂಗೀಕಾರ ಮಾಡಲಾಗಿತ್ತು ಎಂದು ಶಾಸಕ ರಂಜನ್ ತಿಳಿಸಿದರು. ಲಯನ್ಸ್‍ಗೆ ನೀಡಿದ ಜಾಗದ ಸರ್ವೆ ಮಾಡುವಂತೆ ತಹಶೀಲ್ದಾರ್ ಅವರಿಗೆ ಶಾಸಕರು ದೂರವಾಣಿಯಲ್ಲಿ ನಿರ್ದೇಶನ ನೀಡಿದರು. ಆಸ್ಪತ್ರೆಗೆ ಅಗತ್ಯವಿರುವ ವೈದ್ಯ ಸಿಬ್ಬಂದಿಗಳ ಖಾಲಿ ಹುದ್ದೆಗಳನ್ನು ನೇಮಕ ಮಾಡಿಕೊಡುವ ಕುರಿತು ಸಭೆಯಲ್ಲಿ ವೈದ್ಯಾಧಿಕಾರಿಗಳು ಇಟ್ಟ ಕೋರಿಕೆಯನ್ನು ಮನ್ನಿಸಿದ ಶಾಸಕರು ಈ ಬಗ್ಗೆ ಆರೋಗ್ಯ ಸಚಿವಾಲಯ ದೊಂದಿಗೆ ಚರ್ಚಿಸುವುದಾಗಿ ಹೇಳಿದರು.

ಸೋಮವಾರಪೇಟೆ ತಾ.ಪಂ. ಅಧ್ಯಕ್ಷೆ ಪುಷ್ಪರಾಜೇಶ್, ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಪಿ. ಚಂದ್ರಕಲಾ, ಕೆ.ಆರ್. ಮಂಜುಳಾ, ರಕ್ಷಾ ಸಮಿತಿ ಸದಸ್ಯ ಚಂದ್ರು, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮೋಹನ್, ಸೋಮವಾರಪೇಟೆ ತಾಲೂಕು ವೈದ್ಯಾಧಿಕಾರಿ ಡಾ. ಶ್ರೀನಿವಾಸ್, ಕುಶಾಲನಗರದ ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಮಧುಸೂದನ್, ಆಸ್ಪತ್ರೆಯ ಅಧೀಕ್ಷಕಿ ಅನಿತಾ ಸೋಮಾರಾಧ್ಯ, ಔಷಧಾಲಯದ ಹಿರಿಯ ಅಧಿಕಾರಿ ಬಿ. ನಟರಾಜು ಇದ್ದರು.