ಅಮ್ಮತ್ತಿ, ಅ. 6: ಕರ್ನಾಟಕ ರಾಜ್ಯ ಸುನ್ನಿ ವಿದ್ಯಾರ್ಥಿಗಳ ಸಂಘಟನೆ ಎಸ್ಸೆಸ್ಸೆಫ್ ವೀರಾಜಪೇಟೆ ಡಿವಿಷನ್ ವತಿಯಿಂದ ಎಸ್ಸೆಸ್ಸೆಫ್ ಕಾರ್ಯಕರ್ತರಿಗೆ ತರಬೇತಿ ಶಿಬಿರ ಹಾಗೂ ಇತ್ತೀಚೆಗೆ ವಿಧಿವಶರಾದ ತಾಜುಲ್ ಶರೀಅ ಬೇಖಲ್ ಇಬ್ರಾಹಿಂ ಮುಸ್ಲಿಯಾರ್ ರವರ ಅನುಸ್ಮರಣೆಯನ್ನು ವೈಟ್ಲ್ಯೆಸ್ ಎಂಬ ಹೆಸರಿನಲ್ಲಿ ಎಸ್ಸೆಸ್ಸೆಫ್ ವೀರಾಜಪೇಟೆ ಡಿವಿಷನ್ ಅಧ್ಯಕ್ಷರಾದ ಯೂಸುಫ್ ಝೈನಿರವರ ಅಧ್ಯಕ್ಷತೆಯಲ್ಲಿ ಹುಂಡಿ ಸುನ್ನೀ ಮದ್ರಸಾದಲ್ಲಿ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ತರಬೇತಿದಾರರಾಗಿ ಆಗಮಿಸಿ ಮಾತನಾಡಿದ ಎಸ್.ವೈ.ಎಸ್ ಕರ್ನಾಟಕ ರಾಜ್ಯ ಇಸಾಬ ಸಂಚಾಲಕ ಉಮರ್ ಸಖಾಫಿ ಎಡಪಾಲ ಅವರು ಕಾರ್ಯಕರ್ತರು ಸಮಾಜದಲ್ಲಿ ಹೇಗೆ ವರ್ತಿಸಬೇಕು, ನಾಯಕನೆನಿಸಿ ಕೊಂಡರೆ ಸಾಲದು ಸಮಾಜಮುಖಿ ನಾಯಕನಾಗಬೇಕು ಎಂದರು. ಮುಂದುವರೆದು ಸರ್ವರಿಗೂ ಮಾದರಿಯಾಗಿ ಗುರುತಿಸಿಕೊಳ್ಳಲು ಸ್ವಭಾವ, ಗುಣ ನಡತೆ ಇತ್ಯಾದಿಗಳನ್ನು ಸರಿಪಡಿಸಬೇಕು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವೀರಾಜಪೇಟೆ ಅನ್ವಾರುಲ್ ಹುದಾ ವಿದ್ಯಾಸಂಸ್ಥೆಯ ಸಾರಥಿ ಅಶ್ರಫ್ ಅಹ್ಸನಿ ಉಸ್ತಾದರು ಇತ್ತೀಚಿಗೆ ನಮ್ಮನ್ನಗಲಿದ ಬೇಖಲ್ ಉಸ್ತಾದ್ರವರನ್ನು ಮಾದರಿಯಾಗಿಸಿಕೊಂಡು ಸತ್ಪಥದತ್ತ ಸಾಗಿರಿ ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ವೀರಾಜಪೇಟೆ ಡಿವಿಷನ್ ನಾಯಕರಾದ ಝುಬೈರ್ ಸಅದಿ, ಹಂಝಾ ರಹ್ಮಾನಿ, ನಿಝಾರ್ ಸಖಾಫಿ, ನಿಝಾಂ, ಉಬೈದ್, ಸಿದ್ದೀಕ್, ಎಸ್ಸೆಸ್ಸೆಫ್ ಜಿಲ್ಲಾ ಕಾರ್ಯದರ್ಶಿ ಮುಸ್ತಫಾ ನೆಲ್ಲಿಹುದಿಕೇರಿ, ಶಕೀರ್ ಮಾಸ್ಟರ್, ರಾಜ್ಯ ಸದಸ್ಯರಾದ ರಫೀಕ್ ನೆಲ್ಲಿಹುದಿಕೇರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.