*ಗೋಣಿಕೊಪ್ಪಲು, ಸೆ. 25: ತಿತಿಮತಿ ನೊಕ್ಯದ ಅರಣ್ಯದಂಚಿನಲ್ಲಿ ರೈಲ್ವೆ ಕಂಬಿಗಳು ಮುರಿದು ಹೋದ ಜಾಗಕ್ಕೆ ಅರಣ್ಯ ಇಲಾಖೆ ಈಗ ಮರದ ದಿಮ್ಮಿಯಿಂದ ಬೇಲಿಕಟ್ಟುವ ಕೆಲಸಕ್ಕೆ ಮುಂದಾಗಿದೆ.
ತಿತಿಮತಿ, ನೊಕ್ಯದ ಅರಣ್ಯದಂಚಿನಲ್ಲಿ ನಿರ್ಮಿಸಿದ್ದ ಭಾರೀ ಗಾತ್ರದ ರೈಲ್ವೆ ಕಂಬಿಗಳನ್ನು ಮುರಿದು ನಾಗರಹೊಳೆ ಅರಣ್ಯದ ಆನೆಗಳು ತಿತಿಮತಿ, ನೊಕ್ಯದ ಕಾಫಿ ತೋಟಕ್ಕೆ ನುಗ್ಗುತ್ತಿದ್ದವು. ಇದರಿಂದ ಅರಣ್ಯ ಇಲಾಖೆ ಈಗ ರೈಲ್ವೆ ಕಂಬಿಗಳನ್ನು ಮರು ನಿರ್ಮಾಣ ಮಾಡುವುದರ ಬದಲು ಮಳೆಯಲ್ಲಿ ನೆಂದು, ಗೆದ್ದಲು ಹಿಡಿದಿರುವ ಹಳೆಯ ಮರದ ದಿಮ್ಮಿಗಳನ್ನು ಸಾಕಾನೆ ಮೂಲಕ ಎಳೆದು ಬೇಲಿ ಹೆಣೆಯುವ ಕೆಲಸಕ್ಕೆ ಮುಂದಾಗಿದೆ. ಬಲವಾದ ರೈಲ್ವೆ ಕಂಬಿಗಳನ್ನೇ ಬಿಡದ ಕಾಡಾನೆಗಳು ಮರದ ದಿಮ್ಮಿಗಳನ್ನು ನೋಡಿ ಹೆದರುವುದಿಲ್ಲ. ಅರಣ್ಯ ಇಲಾಖೆಯ ಈ ಕೆಲಸ ಕಾಫಿ ಬೆಳೆಗಾರರ ಕಣ್ಣೊರೆ ಸುವ ತಂತ್ರವಾಗಿದೆ ಎಂದು ನೊಕ್ಯದ ಕಾಫಿ ಬೆಳೆಗಾರ ಹಾಗೂ ಜಿಲ್ಲಾ ರೈತ ಸಂಘದ ಪದಾಧಿಕಾರಿ ಚೆಪ್ಪುಡೀರ ಕಾರ್ಯಪ್ಪ ಆರೋಪಿಸಿದ್ದಾರೆ.
2 ವರ್ಷದ ಹಿಂದೆ ಆರಂಭಿಸಿದ್ದ ರೈಲ್ವೆ ಕಂಬಿ ನಿರ್ಮಾಣ ಅತ್ಯಂತ ಕಳಪೆ ಕಾಮಗಾರಿಯಾಗಿತ್ತು. ಇದರ ಬಗ್ಗೆ ಅಂದು ಅರಣ್ಯ ಇಲಾಖೆಯ ಉನ್ನತ ಆಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಆದರೆ ಅಂದಿನ ಅಧಿಕಾರಿಗಳು ಕೇವಲ ತನಿಖೆ ನಡೆಸುವ ನಾಟಕವಾಡಿ ಕೆಲಸವನ್ನು ಹೇಗೋ ಮಾಡಿ ಮುಗಿಸಿದ್ದರು. ಅದರ ಪರಿಣಾಮ ದಿಂದ ಕೇವಲ ಎರಡು ವರ್ಷದಲ್ಲಿ ಕೋಟ್ಯಂತರ ರೂಪಾಯಿ ಅನುದಾನದ ಕಾಮಗಾರಿ ಹಳ್ಳ ಹಿಡಿದಿದೆ. ರೈಲ್ವೆ ಕಂಬಿಗಳು ಮುರಿದು ಬಿದ್ದು ಆನೆಗಳು ಸುಲಭವಾಗಿ ಕಾಡಿನಿಂದ ನಾಡಿಗೆ ಬರುತ್ತಿವೆ ಎಂದು ದೂರಿದರು.
ತಿತಿಮತಿ ಅರಣ್ಯ ಇಲಾಖೆಯ ಅತಿಥಿ ಗೃಹದ ಬಳಿಯೂ ರೈಲ್ವೆ ಕಂಬಿಗಳ ನಿರ್ಮಾಣ ಕಾರ್ಯ ಇದೀಗ ನಡೆಯುತ್ತಿದೆ. ಸ್ಥಳೀಯ ಕಾರ್ಮಿಕರನ್ನು ಕಡಿಮೆ ಕೂಲಿಗೆ ಬಳಸಿಕೊಂಡು ನಾಮಕಾವಸ್ತೆಗೆ ಕಾಮಗಾರಿ ನಡೆಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
- ಎನ್.ಎನ್.ದಿನೇಶ್