ಮಡಿಕೇರಿ, ಸೆ. 18: ಕೊಡಗು ಸೇರಿದಂತೆ ಕರ್ನಾಟಕದಲ್ಲಿ ಆನೆ ಹಾಗೂ ಮಾನವನ ನಡುವಿನ ಸಂಘರ್ಷ ತಡೆಗಟ್ಟುವ ದಿಸೆಯಲ್ಲಿ ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿಲ್ಲ ವಾದರೆ; ಅದು ನ್ಯಾಯಾಂಗ ನಿಂದನೆಯಾಗಲಿದೆ ಎಂದು ಕರ್ನಾಟಕ ಕಾಂಗ್ರೆಸ್ ಕಾನೂನು ಘಟಕದ ರಾಜ್ಯಾಧ್ಯಕ್ಷ ಎ.ಎಸ್. ಪೊನ್ನಣ್ಣ ಎಚ್ಚರಿಸಿದ್ದಾರೆ. ಉಚ್ಚ ನ್ಯಾಯಾಲಯದ ಹಿರಿಯ ವಕೀಲರೂ ಆಗಿರುವ ಅವರು, ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಈ ಹಿಂದೆ ಬೆಳೆಗಾರ ಚೇರಂಡ ನಂದಾ ಸುಬ್ಬಯ್ಯ ಅವರು ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂದರ್ಭ ಸರಕಾರಕ್ಕೆ ನ್ಯಾಯಾಲಯ ಸ್ಪಷ್ಟ ನಿರ್ದೇಶನ ನೀಡಿದೆ ಎಂದು ನೆನಪಿಸಿದರು. ಅಲ್ಲದೆ, ಕಾಡಾನೆ ಹಾವಳಿ ತಡೆಗಟ್ಟುವುದು ಸೇರಿದಂತೆ ಕೊಡಗಿನ ಕಾಫಿ ತೋಟಗಳಲ್ಲಿ ಬೀಡುಬಿಟ್ಟು ಕೃಷಿ ಫಸಲು ನಷ್ಟಪಡಿಸಿ, ಮಾನವನ ಪ್ರಾಣಕ್ಕೆ ಹಾನಿ ಉಂಟುಮಾಡುವ ಪುಂಡಾನೆಗಳನ್ನು ಸೆರೆಹಿಡಿದು ಪುನರ್ವಸತಿ ಕಲ್ಪಿಸಲು ಸೂಚಿಸಿದೆ ಎಂದು ಬೊಟ್ಟು ಮಾಡಿದರು. ನ್ಯಾಯಾಲಯದ ಆದೇಶ ಪಾಲಿಸದ ಅರಣ್ಯ ಇಲಾಖೆ ಕೊಡಗು ಜಿಲ್ಲೆಯಲ್ಲಿ 2013 ರಿಂದಲೇ ಕಾಡಾನೆಗಳ ಹಾವಳಿ ತೀವ್ರತೆಯನ್ನು ಪಡೆದುಕೊಂಡಿದ್ದರೂ, ಅರಣ್ಯ ಇಲಾಖೆ ನಿರ್ಲಕ್ಷಿಸುತ್ತಲೇ ಬಂದಿದೆ ಎಂದು ಎ.ಎಸ್. ಪೊನ್ನಣ್ಣ ಇದೇ ಸಂದರ್ಭ ಆರೋಪಿಸಿದರು.
ಅಂದು ಕೊಡಗಿನಲ್ಲಿ 120 ಕಾಡಾನೆಗಳಿದ್ದವು, ಇಂದು ಅವುಗಳ ಸಂಖ್ಯೆ 168ಕ್ಕೆ ಏರಿಕೆಯಾಗಿರುವ ಬಗ್ಗೆ ಮಾಹಿತಿ ಇದೆ. ಕಾಡಾನೆ ಉಪಟಳದ ಕುರಿತು ನಂದಾಸುಬ್ಬಯ್ಯ ಪ್ರಕರಣ ದಾಖಲಿಸಿದ ಹಿನ್ನೆಲೆ 2013ರಲ್ಲಿ ಕೊಡಗು ಜಿಲ್ಲೆಗೆ ಸಿಮೀತವಾಗಿ 13 ನಿರ್ದೇಶನಗಳನ್ನು ನ್ಯಾಯಾಲಯ ನೀಡಿದೆ.
(ಮೊದಲ ಪುಟದಿಂದ) ಆದರೆ ಇವುಗಳಲ್ಲಿ ಒಂದೇ ಒಂದು ಆದೇಶವನ್ನು ಅರಣ್ಯ ಇಲಾಖೆ ಪಾಲಿಸಲಿಲ್ಲ ಎಂದು ಪೊನ್ನಣ್ಣ ಟೀಕಿಸಿದರು.
ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಎಷ್ಟು ಕಾಡಾನೆಗಳಿವೆ ಎನ್ನುವ ಬಗ್ಗೆ ಸರ್ಕಾರ ಮತ್ತು ಖುದ್ದು ಅರಣ್ಯ ಇಲಾಖೆಗೇ ಮಾಹಿತಿ ಇಲ್ಲ. ನ್ಯಾಯಾಲಯದ ಆದೇಶದಂತೆ ಕಾಫಿ ತೋಟಗಳಲ್ಲಿ ನೆಲೆ ನಿಂತಿರುವ ಕಾಡಾನೆಗಳನ್ನು ಟಾಸ್ಕ್ ಫೋರ್ಸ್ ಮೂಲಕ ಸೆರೆ ಹಿಡಿದು ಪಳಗಿಸಲು ಕ್ರಮ ಕೈಗೊಳ್ಳಬೇಕು. ಕಾಡಾನೆಗಳು ಹೆಚ್ಚಾಗಿ ಕಂಡು ಬರುವ ಸಾರ್ವಜನಿಕ ಪ್ರದೇಶದಲ್ಲಿ ಸೋಲಾರ್ ಬೇಲಿ ಮತ್ತು ಕಂದಕವನ್ನು ನಿರ್ಮಿಸಬೇಕು. ಆದರೆ ಆದೇಶ ನೀಡಿ ಏಳು ವರ್ಷಗಳೇ ಕಳೆದರೂ ಅದು ಪಾಲನೆಯಾಗಿಲ್ಲ. ಕಾಡಾನೆ ಉಪಟಳದ ತೀವ್ರತೆಯನ್ನು ನಿಯಂತ್ರಿಸಲು ನ್ಯಾಯಾಲಯದ ಸಲಹೆಗಳಲ್ಲಿ ಪರಿಹಾರಗಳಿವೆ. ಆದರೆ ಅರಣ್ಯ ಇಲಾಖೆ ಯಾವುದನ್ನು ಕೂಡ ಪಾಲಿಸದೆ ನ್ಯಾಯಾಂಗ ನಿಂದನೆ ಮಾಡುತ್ತಲೇ ಬಂದಿದೆ ಎಂದು ಆರೋಪಿಸಿದ ಪೊನ್ನಣ್ಣ ಅವರು, ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದರು.
ಕೊಡಗು ಕರ್ನಾಟಕದಲ್ಲಿಲ್ಲವೇ ?
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ಈ ವೇಳೆ ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್ ಸೋಂಕು ವ್ಯಾಪಿಸುತ್ತಿದ್ದು, ಈಗಾಗಲೇ 30 ಮಂದಿ ಮೃತಪಟ್ಟಿದ್ದಾರೆ. ಜಿಲ್ಲೆಯನ್ನು ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷ್ಯಿಸಿದ್ದು, ಕೊಡಗು ಕರ್ನಾಟಕದಲ್ಲಿಲ್ಲವೇ ಎಂದು ಪ್ರಶ್ನಿಸಿದರಲ್ಲದೆ, ರೈತರು, ಕಾರ್ಮಿಕರು, ಚಾಲಕರು, ಬಡವರು, ಉದ್ಯಮಿಗಳು ಸೇರಿದಂತೆ ಎಲ್ಲಾ ವರ್ಗದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅತಿವೃಷ್ಟಿಯಿಂದ ಭೂ ಕುಸಿತ ಮತ್ತಿತರ ಅನಾಹುತಗಳು ಸಂಭವಿಸಿ ಗದ್ದೆ, ತೋಟ, ಮನೆಗಳು ಹಾನಿಗೀಡಾಗಿವೆ. ಆದರೆ ಸರ್ಕಾರ ಸೂಕ್ತ ಪರಿಹಾರವನ್ನು ನೀಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಟೀಕಿಸಿದರು.
ಕೊಡಗಿನ ಜನರ ಕಣ್ಣೀರು ಬಿಜೆಪಿ ಸರ್ಕಾರಕ್ಕೆ ಶಾಪವಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಉಸ್ತುವಾರಿ ಸಚಿವರು ಆಗೊಮ್ಮೆ ಈಗೊಮ್ಮೆ ಸಭೆ ನಡೆಸುವುದು ಮತ್ತು ಶಾಸಕರುಗಳೊಂದಿಗೆ ಭೂಮಿ ಪೂಜೆ ನೆರವೇರಿಸುವುದನ್ನು ಬಿಟ್ಟು ಜನರ ನೈಜ ಸಮಸ್ಯೆಗಳಿಗೆ ಸ್ಪಂದಿಸಲಿ ಎಂದು ಒತ್ತಾಯಿಸಿದರು.
ಸದಸ್ಯತ್ವ ರದ್ದುಗೊಳಿಸಲು ಒತ್ತಾಯ
ಬಹುಕೋಟಿ ಹಗರಣದ ಆರೋಪ ಎದುರಿಸುತ್ತಿರುವ ಸಿ.ಪಿ.ಯೋಗೇಶ್ವರ್ ಅವರ ವಿಧಾನ ಪರಿಷತ್ ಸದಸ್ಯತ್ವವನ್ನು ರದ್ದು ಪಡಿಸಬೇಕೆಂದು ಪೊನ್ನಣ್ಣ ಒತ್ತಾಯಿಸಿದರು.
ಮೆಗಾಸಿಟಿ ಯೋಜನೆಯ ಹಗರಣದಲ್ಲಿ ಸಿಲುಕಿರುವ ಯೋಗೇಶ್ವರ್ ಅವರಿಗೆ ಮೇಲ್ಮನೆ ಸದಸ್ಯರಾಗಲು ಯಾವುದೇ ಅರ್ಹತೆಗಳಲಿಲ್ಲದಿದ್ದರೂ ಸಂವಿಧಾನಕ್ಕೆ ವಿರುದ್ಧವಾಗಿ ಅವರನ್ನು ರಾಜ್ಯಪಾಲರು ನಾಮನಿರ್ದೇಶನ ಮಾಡಿದ್ದಾರೆ ಎಂದು ಆರೋಪಿಸಿದರು.
ಈ ಬಗ್ಗೆ ರಾಜ್ಯಪಾಲರಿಗೆ ದೂರು ನೀಡಲು ಸೆ.25 ರಂದು ಕಾಲಾವಕಾಶ ಕೋರಿದ್ದರೂ ನಮಗೆ ಯಾವುದೇ ಉತ್ತರ ಬಂದಿಲ್ಲ. ಮಾಹಿತಿ ಹಕ್ಕು ಮೂಲಕ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿ ನಾಮ ನಿರ್ದೇಶನವಾದ ಬಗ್ಗೆ ವಿವರಣೆ ಕೇಳಲಾಗಿತ್ತು. ಆದರೆ ಇದಕ್ಕೂ ಯಾವುದೇ ಸ್ಪಂದನೆ ದೊರೆತ್ತಿಲ್ಲ ಎಂದು ಟೀಕಿಸಿದರು.
ಈ ಹಿಂದೆ ಇದ್ದ ಮೈತ್ರಿ ಸರ್ಕಾರವನ್ನು ಬೀಳಿಸಿದಕ್ಕಾಗಿ ವಿಧಾನ ಪರಿಷತ್ ಸ್ಥಾನವನ್ನು ಕೊಡುಗೆ ನೀಡಲಾಗಿದೆ ಎಂದು ಟೀಕಿಸಿದರು.
ಖಜಾನೆ ಖಾಲಿ
ರಾಜ್ಯ ಸರ್ಕಾರದ ಖಜಾನೆಯಲ್ಲಿ ಸರ್ಕಾರಿ ನೌಕರರಿಗೆ ಸಂಬಳ ನೀಡಲು ಹಣವೇ ಇಲ್ಲದಾಗಿದೆ. ವೇತನಕ್ಕಾಗಿ 1800 ಕೋಟಿ ರೂ. ಗಳ ಅಗತ್ಯತೆ ಇದೆ. ತೆರಿಗೆ ಪಾವತಿಯಲ್ಲಿ ರಾಜ್ಯ ಏಳನೇ ಸ್ಥಾನದಲ್ಲಿದೆ, ಆದರೆ ಕೇಂದ್ರ ಸರ್ಕಾರ ನೀಡುತ್ತಿರುವ ಅನುದಾನದ ಪ್ರಮಾಣದಲ್ಲಿ 25ನೇ ಸ್ಥಾನದಲ್ಲಿದೆ ಎಂದು ಪೊನ್ನಣ್ಣ ತಿಳಿಸಿದರು. ಪೊಲೀಸ್ ಅಧಿಕಾರಿಗಳ ಕೃಪೆ ಇಲ್ಲದೆ ಡ್ರಗ್ಸ್ ದಂಧೆ ನಡೆಯಲು ಸಾಧ್ಯವಿಲ್ಲ, ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ನಡೆಯುತ್ತಿರುವುದು ತನಿಖೆಯಲ್ಲ, ಕೇವಲ ಪ್ರದರ್ಶನವಷ್ಟೇ ಎಂದು ಟೀಕಿಸಿದರು.
ಸತ್ತವರು ಯಾರೆಂದೇ ತಿಳಿಯದೆ ಸಾವಿನ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಿದಂತೆ ಡ್ರಗ್ಸ್ ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ವ್ಯಂಗ್ಯವಾಡಿದ ಅವರು, ದೊಡ್ಡ ದೊಡ್ಡ ವ್ಯಕ್ತಿಗಳು ಪ್ರಕರಣದಲ್ಲಿ ಶಾಮೀಲಾಗಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದರು.
ಸುದ್ದಿಗೋಷ್ಟಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ವೀಣಾಅಚ್ಚಯ್ಯ, ಕೆಪಿಸಿಸಿ ಪ್ರಮುಖರಾದ ಟಿ.ಪಿ.ರಮೇಶ್, ಕೆ.ಪಿ.ಚಂದ್ರಕಲಾ ಹಾಗೂ ಹೆಚ್.ಎಂ.ನಂದಕುಮಾರ್ ಉಪಸ್ಥಿತರಿದ್ದರು.