ಸೋಮವಾರಪೇಟೆ, ಆ.30: ಅತೀವೃಷ್ಟಿಯಿಂದಾಗಿ ಬೆಳೆ ನಷ್ಟ ಸಂಭವಿಸಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಈವರೆಗೆ 10 ಸಾವಿರಕ್ಕೂ ಅಧಿಕ ಅರ್ಜಿಗಳು ಸ್ವೀಕಾರ ಗೊಂಡಿವೆ ಎಂದು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಶೋಭ ತಿಳಿಸಿದರು.

ಇಲ್ಲಿನ ಕೃಷಿ ಇಲಾಖೆಯ ಆವರಣದಲ್ಲಿ ನಡೆದ ತಾಲೂಕು ಕೃಷಿಕ ಸಮಾಜದ ಸಭೆಯಲ್ಲಿ ಭಾಗವಹಿಸಿ ಅವರು ಮಾಹಿತಿ ನೀಡಿದರು.

ಈ ಬಾರಿ ಸುರಿದ ಮಳೆಯಿಂದ ಬೆಳೆಹಾನಿಗೆ ಸಂಬಂಧಪಟ್ಟಂತೆ 7500 ಅರ್ಜಿಗಳು ಬಂದಿವೆ. ಬೆಳೆಹಾನಿ ಸಮೀಕ್ಷೆಯೂ ನಡೆಯುತ್ತಿದೆ. ಲಾಕ್‍ಡೌನ್ ಸಂದರ್ಭ ತರಕಾರಿ, ಹೂ ಬೆಳೆಗಾರರಿಗೆ ನಷ್ಟವಾಗಿದ್ದು, 2500ರಷ್ಟು ಅರ್ಜಿಗಳು ಬಂದಿದ್ದು, ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದ ಅನುಮೋದನೆ ನಂತರ ಹಣ ಬಿಡುಗಡೆ ಯಾಗಲಿದೆ ಎಂದು ಹೇಳಿದರು.

ಕಾಫಿ ಮಂಡಳಿಯ ಅಧಿಕಾರಿ ಲಕ್ಷ್ಮೀಕಾಂತ್ ಮಾತನಾಡಿ, ಆಶ್ಲೇಷ ಮಳೆಯು ಹತ್ತು ದಿನಗಳ ಕಾಲ ಧಾರಾಕಾರವಾಗಿ ಸುರಿದಿದ್ದು, ತೋಟಗಳ ವೈಜ್ಞಾನಿಕ ನಿರ್ವಹಣೆ ಯಾಗಬೇಕಿದೆ. ನಿಗದಿತ ಸಮಯದಲ್ಲಿ ಮಳೆಯಾಗುತ್ತಿಲ್ಲ. ಈ ಕಾರಣದಿಂದ ರಾಸಾಯನಿಕ ಗೊಬ್ಬರ ಕೊಡವದು, ಶಿಲೀಂದ್ರ ನಾಶಕ ಹಾಗೂ ಕೀಟನಾಶಕಗಳನ್ನು ಸಿಂಪಡಿಸುವ ಸಮಯವನ್ನು ಬದಲಾಯಿಸಿಕೊಳ್ಳ ಬೇಕಾಗಿದೆ. ಕಾಫಿ ಮಂಡಳಿಯಿಂದ ಶಿಫಾರಸ್ಸಾದ ತಳಿಗಳನ್ನೇ ಬೆಳೆದಾಗ ಮಾತ್ರ, ಉತ್ತಮ ಇಳುವರಿಯ ನಿರೀಕ್ಷೆ ಮಾಡಬಹುದು ಎಂದು ಬೆಳೆಗಾರರಿಗೆ ಸಲಹೆ ನೀಡಿದರು.

ಪಶುವೈದ್ಯ ಇಲಾಖೆ ಉಪ ನಿರ್ದೇಶಕ ಡಾ. ಬದಾಮಿ ಮಾತನಾಡಿ, ಸಾಕು ಹಂದಿಗಳನ್ನು ಬಾಧಿಸುವ ಮಾರಣಾಂತಿಕ ಎಚ್1ಎನ್1 ರೋಗಕ್ಕೆ ಲಸಿಕೆ ಲಭ್ಯವಿದ್ದು, ಸ್ಥಳೀಯ ಪಶುವೈದ್ಯರನ್ನು ಭೇಟಿ ಮಾಡಬಹುದು. ಜಾನುವಾರುಗಳ ಕಾಲುಬಾಯಿ ರೋಗಕ್ಕೂ ಲಸಿಕೆ ಲಭ್ಯವಿದೆ. ಸೆಪ್ಟೆಂಬರ್ ತಿಂಗಳಲ್ಲಿ ಸಾಮೂಹಿಕ ಲಸಿಕೆ ಹಾಕುವ ಕಾರ್ಯಕ್ರಮ ನಡೆಯಲಿದೆ ಎಂದರು.

ರೈತರ ಬೆಳೆ ಸಮೀಕ್ಷೆ ಆ್ಯಪ್ ಬಗ್ಗೆ ಕೃಷಿ ಸಹಾಯಕ ನಿರ್ದೆಶಕ ಡಾ.ರಾಜಶೇಖರ್ ಮಾಹಿತಿ ನೀಡಿದರು.

ಶಾಂತಳ್ಳಿ ಹೋಬಳಿ ಹಾಗೂ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕಳೆದ ಮೂರು ವರ್ಷಗಳಿಂದ ಸತತವಾಗಿ ಬೆಳೆಹಾನಿಯಾಗುತ್ತಿದ್ದು ಅಧಿಕಾರಿಗಳು ಬೆಳೆಹಾನಿ ಸಮೀಕ್ಷೆ ಮಾಡುವಾಗ ರೈತರಿಗೆ ಅನ್ಯಾಯವಾಗದಂತೆ ಎಚ್ಚರ ವಹಿಸಬೇಕು ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಕೃಷಿಕ ಸಮಾಜದ ಅಧ್ಯಕ್ಷ ಎಸ್.ಪಿ.ಪೊನ್ನಪ್ಪ ಹೇಳಿದರು.

ಲೋಕೋಪಯೋಗಿ ಇಲಾಖೆ, ಸಾಮಾಜಿಕ ಅರಣ್ಯ, ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ತಮ್ಮ ಇಲಾಖೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಕೃಷಿಕ ಸಮಾಜದ ಉಪಾಧ್ಯಕ್ಷ ಗೋವಿಂದರಾಜ್, ಕಾರ್ಯದರ್ಶಿ ಎಂ.ಪಿ.ರವಿ, ಖಜಾಂಚಿ ಯಡವನಾಡು ರಮೇಶ್, ಪದಾಧಿಕಾರಿಗಳಾದ ಮನುಮೇದಪ್ಪ, ಎಚ್.ಕೆ.ರಘು, ಪರಮೇಶ್, ಜೋಯಪ್ಪ, ಕಾಳಪ್ಪ, ಕೃಷಿ ಅಧಿಕಾರಿ ಡಾ.ಮುಕುಂದ ಉಪಸ್ಥಿತರಿದ್ದರು.

ಸನ್ಮಾನ: ಸೋಮವಾರಪೇಟೆ ತಾಲೂಕು ಕೃಷಿ ಇಲಾಖಾ ಸಹಾಯಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದುತ್ತಿರುವ ಡಾ.ಎಚ್.ಎಸ್.ರಾಜಶೇಖರ್ ಅವರನ್ನು ಸಮಾಜದ ವತಿಯಿಂದ ಇದೇ ಸಂದರ್ಭ ಸನ್ಮಾನಿಸಲಾಯಿತು.