ಶನಿವಾರಸಂತೆ, ಆ. 24: ಸಮೀಪದ ಕೊಡ್ಲಿಪೇಟೆ ಉಪ ಪೊಲೀಸ್ ಠಾಣೆ ಪೊಲೀಸರು ಬೆಂಬಳೂರು ಗ್ರಾಮದ ಯಶೋದಮ್ಮ ಎಂಬವರು ಕಳೆದುಕೊಂಡ ಹಣವನ್ನು ಪತ್ತೆಹಚ್ಚಿ ಹಿಂದಿರುಗಿಸಿದ ಘಟನೆ ನಡೆದಿದೆ.

ಅನಾರೋಗ್ಯ ನಿಮಿತ್ತ ಯಶೋದಮ್ಮ ಚಿಕಿತ್ಸೆಗಾಗಿ ಕೊಡ್ಲಿಪೇಟೆಯ ಖಾಸಗಿ ಕ್ಲಿನಿಕ್‍ಗೆ ಬಂದಿದ್ದರು. ನಂತರ ಕೃಷ್ಣ ಮೆಡಿಕಲ್‍ನಲ್ಲಿ ಔಷಧಿ ಖರೀದಿಸಿ ಬಾಕಿ ಉಳಿದ ಹಣ ರೂ. 4 ಸಾವಿರವನ್ನು ತನ್ನಲ್ಲಿದ್ದ ಕೈಚೀಲಕ್ಕೆ ಹಾಕುವ ಸಂದರ್ಭ ಕೆಳಗೆ ಬಿದ್ದಿದೆ. ಸ್ವಲ್ಪ ದೂರ ಹೋಗಿ ಚೀಲ ನೋಡಿದಾಗ ಹಣವಿರಲಿಲ್ಲ. ಔಷಧಿ ಅಂಗಡಿ ಮುಂಭಾಗವೇ ಹಣ ಬಿದ್ದಿರುವ ಬಗ್ಗೆ ಖಾತರಿಪಡಿಸಿಕೊಂಡು ಬಂದು ನೋಡಿದಾಗ ಬಿದ್ದಿರುವ ಹಣ ಕಾಣಲಿಲ್ಲ. ತಕ್ಷಣ ಯಾರಿಗೋ ಸಿಕ್ಕಿದೆ ಎಂದು ಕಣ್ಣೀರಿಡುತ್ತಾ ಮನೆಗೆ ಮರಳಿದರು.

ಮರು ದಿನ ಗ್ರಾಮದ ಮುಖಂಡ ಪ್ರಸಾದ್ ಪಟೇಲ್ ಅವರೊಂದಿಗೆ ಪೊಲೀಸ್ ಠಾಣೆಗೆ ಬಂದು ಹಣ ಕಳೆದುಕೊಂಡಿರುವ ಬಗ್ಗೆ ದೂರು ನೀಡಿದರು. ಕಾರ್ಯಪ್ರವೃತ್ತರಾದ ಪೊಲೀಸರು ಸಿಸಿ ಕ್ಯಾಮರಾ ದೃಶ್ಯಾವಳಿ ಇನ್ನಿತರ ಮಾಹಿತಿ ಕಲೆಹಾಕಿದ ವೇಳೆ ಶನಿವಾರಸಂತೆ ಸಮೀಪದ ನಂದಿಗುಂದ ಗ್ರಾಮದ ಹರ್ಷಿತ್ ಎಂಬಾತನಿಗೆ ಹಣ ಸಿಕ್ಕಿದ್ದನ್ನು ಪತ್ತೆಹಚ್ಚಿ, ಆತನಿಂದ ಹಣ ಪಡೆದು ಯಶೋದಮ್ಮ ಅವರಿಗೆ ಹಿಂದಿರುಗಿಸಿದರು. ಕಾರ್ಯಾಚರಣೆಯಲ್ಲಿ ಉಪಠಾಣೆಯ ಹೆಡ್ ಕಾನ್ಸ್‍ಟೆಬಲ್ ಡಿಂಪಲ್, ಸಿಬ್ಬಂದಿ ಪ್ರಶಾಂತ್, ಪಾಟೀಲ್, ಧನಂಜಯ್ ಪಾಲ್ಗೊಂಡಿದ್ದರು.