*ಸಿದ್ದಾಪುರ ಆ.21 : ಅಭ್ಯತ್ ಮಂಗಲ ಗ್ರಾಮಕ್ಕೆ ಮತ್ತೆ ಕಾಡಾನೆಗಳು ಲಗ್ಗೆ ಇಟ್ಟಿದ್ದು, ಅಂಚೆಮನೆ ಕುಟುಂಬಕ್ಕೆ ಸೇರಿದ ಗದ್ದೆಗಳು ಸಂಪೂರ್ಣ ಹಾನಿಗೀಡಾಗಿವೆ. ಕೆಲವು ದಿನಗಳ ಹಿಂದೆಯಷ್ಟೇ ಕಾರ್ಯಾಚರಣೆ ನಡೆಸಿ ಕಾಡಾನೆಗಳನ್ನು ಕಾಡಿಗಟ್ಟಲಾಗಿದೆ ಎಂದು ಅರಣ್ಯ ಇಲಾಖೆ ಹೇಳಿಕೊಂಡಿತ್ತು.

ಆದರೆ ಇಂದು ಸುಮಾರು ಎಂಟು ಕಾಡಾನೆಗಳ ಹಿಂಡು ನಾಟಿ ಕಾರ್ಯ ಮುಗಿಸಿದ ಗದ್ದೆಗೆ ದಾಳಿ ಇಟ್ಟು ಸಂಪೂರ್ಣ ನಾಶಪಡಿಸಿದೆ. ಎರಡು ವಾರಗಳ ಹಿಂದೆ ಇದೇ ಗದ್ದೆಗಳಿಗೆ ಆನೆಗಳು ಹಾನಿ ಮಾಡಿದ ಕಾರಣ ಮರು ನಾಟಿ ಕಾರ್ಯ ಮಾಡಲಾಗಿತ್ತು. ಆದರ್ಶ್, ಅಶ್ವಥ್ ಕುಮಾರ್, ಸುಧಿ, ಬೆಟ್ಟದ ಕಾಡು ರಮೇಶ್, ಗಣಪತಿ ಸೇರಿದಂತೆ ಇನ್ನೂ ಕೆಲವು ಕೃಷಿಕರ ಗದ್ದೆಗಳಿಗೆ ಹಾನಿಯಾಗಿದೆ. ಕೃಷಿ ಕಾರ್ಯವನ್ನೇ ಕೈಬಿಡುವುದಾಗಿ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.