ಚೆಟ್ಟಳ್ಳಿ, ಆ. 6: ಕೊಡಗಿನ ಹಲವೆಡೆ ಕಾಡಾನೆಗಳ ನಿರಂತರ ದಾಳಿ ಬಗ್ಗೆ ನಿತ್ಯವೂ ಕೇಳುತಿದ್ದೇವೆ ಆದರೆ ಕಾಡಾನೆ ತೆಂಗಿನ ಮರದಿಂದ ಕಾಯಿಯನ್ನು ಕುಯ್ದು ಗುಡ್ಡೆ ಹಾಕಿ ಕೆಲವನ್ನು ಸುಲಿದು ಮಾಲೀಕನಿಗೆ ತೆಂಗಿನಕಾಯಿಯನ್ನು ಬಿಟ್ಟು ಹೋದ ಘಟನೆ ಕೂಡ್ಲೂರು ಚೆಟ್ಟಳ್ಳಿಯ ಐಚೆಟ್ಟಿರ ಪ್ರಮೋದ್ ಪೂಣಚ್ಚನವರ ತೋಟದಲ್ಲಿ ನಡೆದಿದೆ.

ಕಳೆದೆರೆಡು ದಿನಗಳ ಹಿಂದೆ ಮುಂಜಾನೆ ಕಾಡಾನೆ ಪ್ರಮೋದ್‍ರವರ ಮನೆಯ ಮುಂದಿನ ತೆಂಗಿನ ಮರದಿಂದ ಕಾಯಿಯನ್ನು ಕಿತ್ತು ಹಾಕಿತ್ತು. ಅದರಲ್ಲಿ ಕೆಲವು ಕಾಯಿಯನ್ನು ಸುಲಿದು ಅದರ ಸುತ್ತಲಿನ ನಾರನ್ನು ಮಾತ್ರ ತಿಂದು ತೆರಳಿತು.

ಕಾಡಾನೆಗಳು ನಿತ್ಯವೂ ತೋಟದೊಳಗೆ ಓಡಾಡುತ್ತಿದ್ದು, ಕಾಡಾನೆಗಳು ತೆರಳಲೆಂದೇ ನಿತ್ಯವೂ ತೋಟದ ಗೇಟನ್ನು ತೆರದಿಡುತ್ತೇನೆ. ಮೊನ್ನೆ ರಾತ್ರಿ ಕಾಡಾನೆ ಬಂದು ತೆಂಗಿನಕಾಯಿಗಳನೆಲ್ಲ ಕಿತ್ತು ಕೆಲವೊಂದು ಕಾಯಿಗಳನ್ನು ಸುಲಿದು ಹಾಕಿದೆ. ಮತ್ತೊಮ್ಮೆ ಕಾಡಾನೆಗಳು ಬಂದರೆ ತೆಂಗಿನ ಮರದ ಕಾಯಿಯನ್ನು ನಷ್ಟಪಡಿಸಬಹುದೆಂದು ಉಳಿದ ಕಾಯಿಯನ್ನು ತಿಂದು ತೆರಳಲೆಂದು ಮರದ ಕೆಳಗೆಯೇ ಕಾಯಿಯನ್ನು ಬಿಟ್ಟಿದ್ದೇನೆಂದು ತೋಟದ ಮಾಲೀಕÀ ಐಚೆಟ್ಟಿರ ಪ್ರಮೋದ್ ಹೇಳುತ್ತಾರೆ. -ಪುತ್ತರಿರ ಕರುಣ್ ಕಾಳಯ್ಯ