ಮಡಿಕೇರಿ, ಜು. 17: ಕೊಡಗು ಜಿಲ್ಲೆಯಲ್ಲಿ ತಾ. 31 ರವರೆಗೆ ಎಲ್ಲಾ ಶನಿವಾರ ಮತ್ತು ಭಾನುವಾರಗಳಂದು ಪೂರ್ಣದಿನ ಲಾಕ್ಡೌನ್ ಜಾರಿಯಲ್ಲಿದ್ದು, ಅವಶ್ಯ ಚಟುವಟಿಕೆ ಸೇರಿದಂತೆ ತುರ್ತು ಸೇವೆಗಳಿಗೆ ಮಾತ್ರ ಅವಕಾಶವಿರುತ್ತದೆ.ತಾ. 18 ರಿಂದ (ಇಂದಿನಿಂದ) 2 ಶನಿವಾರ ಹಾಗೂ ಭಾನುವಾರಗಳಂದು ಲಾಕ್ಡೌನ್ ಜಾರಿಯಲ್ಲಿರುತ್ತದೆ. ಪಡಿತರ ವಿತರಿಸುವ ಸರ್ಕಾರಿ ನ್ಯಾಯಬೆಲೆ ಅಂಗಡಿಗಳನ್ನು ನಿಗದಿತ ಅವಧಿಯಂತೆ ತೆರೆಯಬಹುದು. ಹಾಲು, ದಿನಪತ್ರಿಕೆಗಳ ವಿತರಣೆಗೆ ಬೆಳಿಗ್ಗೆ 6 ಗಂಟೆಯಿಂದ ಪೂರ್ವಾಹ್ನ 9 ಗಂಟೆಯವರೆಗೆ ಮಾತ್ರ ಅವಕಾಶವಿರುತ್ತದೆ. ಪೆಟ್ರೋಲ್ ಬಂಕ್ಗಳನ್ನು 24 ಗಂಟೆಗಳ ಕಾಲ ತೆರೆಯಬಹುದು. ಜಿಲ್ಲೆಯೊಳಗೆ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇರುವುದಿಲ್ಲ. ತುರ್ತು, ವೈದ್ಯಕೀಯ, ಅತ್ಯವಶ್ಯಕ ಸರಕು ಸಾಗಾಣಿಕೆ ಮತ್ತು ಸರ್ಕಾರಿ / ಕೋವಿಡ್-19 ಕರ್ತವ್ಯ ನಿಮಿತ್ತ ಸಂಚರಿಸುವ ವಾಹನಗಳ ಹೊರತಾಗಿ ಉಳಿದಂತೆ ಯಾವುದೇ ರೀತಿಯ ವಾಹನಗಳ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ತುರ್ತು, ವೈದ್ಯಕೀಯ, ಕೋವಿಡ್ ಹಾಗೂ ಕಚೇರಿ ಕರ್ತವ್ಯ ನಿಮಿತ್ತ ಅಧಿಕಾರಿ / ಸಿಬ್ಬಂದಿಗಳ ಸಂಚಾರ ಹೊರತುಪಡಿಸಿ ಉಳಿದಂತೆ ಎಲ್ಲಾ ರೀತಿಯ (ಮೊದಲ ಪುಟದಿಂದ) ಚಟುವಟಿಕೆಗಳನ್ನು ಮತ್ತು ವ್ಯಕ್ತಿಗಳ ಸಂಚಾರವನ್ನು ಕಡ್ಡಾಯವಾಗಿ ನಿಬರ್ಂಧಿಸಲಾಗಿದೆ.
ಪ್ರಸ್ತುತ ಮಡಿಕೇರಿಯ ಸಂತ ಮೈಕಲರ ಶಾಲೆಯಲ್ಲಿ ನಡೆಯುತ್ತಿರುವ ಎಸ್.ಎಸ್.ಎಲ್.ಸಿ. ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯನಿರತ ಅಧಿಕಾರಿ / ಸಿಬ್ಬಂದಿಗಳು ಸಂಬಂಧಪಟ್ಟ ಕಚೇರಿ / ಇಲಾಖೆಯಿಂದ ನೀಡಿದ ಗುರುತಿನ ಚೀಟಿಯನ್ನು ಹೊಂದಿರುವುದು ಮತ್ತು ತಪಾಸಣೆ ವೇಳೆ ಹಾಜರುಪಡಿಸಬೇಕಾಗಿದೆ. ಕಚೇರಿ ಕಾರ್ಯನಿರತ ಅಧಿಕಾರಿ / ಸಿಬ್ಬಂದಿಗಳು ಸಂಬಂಧಪಟ್ಟ ಕಚೇರಿಯಿಂದ ನೀಡಿದ ಗುರುತಿನ ಚೀಟಿಯನ್ನು ಜೊತೆಯಲ್ಲಿ ಇರಿಸಿಕೊಂಡು, ತಪಾಸಣೆ ವೇಳೆ ಕಡ್ಡಾಯವಾಗಿ ಹಾಜರುಪಡಿಸುವುದು. ಪೂರ್ವ ನಿಗದಿಯಾಗಿದ್ದ ಮದುವೆ ಕಾರ್ಯಕ್ರಮಗಳನ್ನು ನಡೆಸುವುದಿದ್ದಲ್ಲಿ ಸಂಬಂಧಪಟ್ಟ ಗ್ರಾಮ ಪಂಚಾಯಿತಿ/ ನಗರ ಸ್ಥಳೀಯ ಸಂಸ್ಥೆಯಿಂದ ಪಡೆದ ಪೂರ್ವಾನುಮತಿಯ ಮೇರೆಗೆ ಗರಿಷ್ಠ 50 ಮಂದಿ ಮೀರದಂತೆ ಸಾಮಾಜಿಕ ಅಂತರ ಕಾಯ್ದುಕೊಂಡು ನಡೆಸಬಹುದಾಗಿದೆ. ಉಳಿದಂತೆ ಯಾವುದೇ ಚಟುವಟಿಕೆಗಳಿಗೆ ಅವಕಾಶವಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.