ಮಡಿಕೇರಿ, ಜು. 16: ಸಂಕಷ್ಟದಲ್ಲಿರುವ ಜಿಲ್ಲೆಯ ಸುಮಾರು ಎಪ್ಪತ್ತು ಜಾನಪದ ಕಲಾವಿದರಿಗೆ ಕರ್ನಾಟಕ ಜಾನಪದ ಪರಿಷತ್, ಕೊಡಗು ಜಿಲ್ಲಾ ಘಟಕದ ವತಿಯಿಂದ ಧನ ಸಹಾಯ ಮಾಡಲಾಗಿದೆ ಎಂದು ಅಧ್ಯಕ್ಷ ಬಿ.ಜಿ. ಅನಂತಶಯನ ತಿಳಿಸಿದ್ದಾರೆ.

ಈ ಹಿಂದೆ ಕೆಲವು ಕಲಾವಿದರಿಗೆ ಶ್ರೀ ರಾಮಕೃಷ್ಣ ಶಾರದಾ ಆಶ್ರಮದ ಸಹಕಾರದೊಂದಿಗೆ ದಿನಸಿ ವಿತರಿಸಲಾಗಿತ್ತು. ಇದೀಗ ರಾಜ್ಯ ಪರಿಷತ್, ಡಾ. ನಿರ್ಮಲಾನಂದ ನಾಥರ ಸಹಯೋಗದೊಂದಿಗೆ ಐವತ್ತು ಸಾವಿರ ರೂಪಾಯಿಗಳನ್ನು ಜಿಲ್ಲಾ ಘಟಕದ ಮನವಿ ಮೇರೆ ನೀಡಿದ್ದು, ಇದನ್ನು ವಿತರಿಸಲಾಗಿದೆ.

ಇತ್ತೀಚೆಗೆ ಮಡಿಕೇರಿಯಲ್ಲಿ ‘ಶಕ್ತಿ’ಯ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಅವರ ಮೂಲಕ ಸಾಂಕೇತಿಕವಾಗಿ ಇಬ್ಬರು ಕಲಾವಿದರಿಗೆ ವಿತರಣೆ ಮಾಡಿದ್ದು, ಇತರರಿಗೆ ಆನ್‍ಲೈನ್ ಮೂಲಕ ಕಳುಹಿಸಲಾಗಿದೆ. ಈ ಸಂದರ್ಭ ಪರಿಷತ್ ಖಜಾಂಚಿ ಸಂಪತ್‍ಕುಮಾರ್, ಪ್ರಧಾನ ಕಾರ್ಯದರ್ಶಿ ಮುನೀರ್ ಅಹ್ಮದ್, ಕಾರ್ಯದರ್ಶಿ ರಂಜಿತ್, ‘ಶಕ್ತಿ’ಯ ಕಾರ್ಯನಿರ್ವಾಹಕ ವ್ಯವಸ್ಥಾಪಕ ಜಿ. ಪ್ರಜ್ವಲ್ ಹಾಜರಿದ್ದರು.