ಮರಗೋಡು, ಜು. 10: ಕಟ್ಟೆಮಾಡು ಗ್ರಾಮದ ಬಿಬಿಎ ಪದವಿ ಓದುತ್ತಿರುವ ಬಿದ್ರುಪಣೆ ನಂದಾ ಅವರ ಪುತ್ರಿ ರಾಧಿಕಾ, ಕೊರೊನಾದಿಂದಾಗಿ ಕಾಲೇಜಿಗೆ ರಜೆ ಇರುವ ಕಾರಣದಿಂದ ತನ್ನ ರಜೆಯ ಸಮಯದಲ್ಲಿ ತನ್ನ ತಂದೆಗೆ ಗದ್ದೆ ಉಳುಮೆ ಮಾಡುವ ಕಾರ್ಯದಲ್ಲಿ ನೆರವಾಗಿದ್ದಾಳೆ. ಟಿಲ್ಲರ್‍ನ ಸಹಾಯದಿಂದ ಕೃಷಿ ಕಾಯಕದಲ್ಲಿ ತೊಡಗಿದ್ದಾಳೆ. ಈಗಿನ ವಿದ್ಯಾರ್ಥಿಗಳು ಯಾವಾಗಲೂ ಮೊಬೈಲ್‍ನಲ್ಲಿ ಮಗ್ನರಾಗಿರುವ ಈ ಕಾಲದಲ್ಲಿ ಈಕೆ ಕೃಷಿ ಕಾಯಕದಲ್ಲಿ ತೊಡಗುವ ಮೂಲಕ ಇತರರಿಗೆ ಮಾದರಿಯಾಗಿದ್ದಾಳೆ. ಈಕೆಯ ಈ ಕಾರ್ಯಕ್ಕೆ ಗ್ರಾಮಸ್ಥರು ಹರ್ಷವ್ಯಕ್ತಪಡಿಸಿದ್ದಾರೆ.