ಸೋಮವಾರಪೇಟೆ, ಜು. 10: ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕು ತಹಶೀಲ್ದಾರ್ ಬಿ.ಕೆ.ಚಂದ್ರಮೌಳೇಶ್ವರ ಅವರ ಕೊಲೆಯನ್ನು ಖಂಡಿಸಿ, ಸರ್ಕಾರಿ ನೌಕರರಿಗೆ ಸರ್ಕಾರ ಸೂಕ್ತ ಭದ್ರತೆಯನ್ನು ಕಲ್ಪಿಸಬೇಕೆಂದು ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆಯ ವತಿಯಿಂದ ಶುಕ್ರವಾರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಸರ್ಕಾರಿ ನೌಕರರಿಗೆ ಸೂಕ್ತ ಭದ್ರತೆ ನೀಡುವುದು ಸರ್ಕಾರದ ಕರ್ತವ್ಯವಾಗಿದೆ. ರಾಜ್ಯದಲ್ಲಿ ಇಂತಹ ಘಟನೆಗಳು ನಡೆಯುತ್ತಿರುತ್ತವೆ. ಅಪರಾಧಿಗಳ ವಿರುದ್ಧ ಕಠಿಣ ಕಾನೂನು ರೂಪಿಸಬೇಕು ಮೃತರ ಕುಟುಂಬದವರೊಬ್ಬರಿಗೆ ಅನುಕಂಪ ಆಧಾರದಲ್ಲಿ ಸರ್ಕಾರಿ ಹುದ್ದೆ ಕಲ್ಪಿಸಬೇಕು. ಹೆಚ್ಚಿನ ಪರಿಹಾರ ನೀಡಬೇಕು. ಸಿಗಬೇಕಾದ ಸೌಲಭ್ಯಗಳನ್ನು ಶೀಘ್ರ ಕೊಡಬೇಕು ಎಂದು ಸಂಘದ ಅಧ್ಯಕ್ಷ ಪ್ರದೀಪ್ ಆಗ್ರಹಿಸಿದರು. ಮನವಿ ಪತ್ರವನ್ನು ಶಿರಸ್ತೇದಾರ್ ಮಹೇಶ್ ಅವರಿಗೆ ನೀಡಲಾಯಿತು. ಕಾರ್ಯದರ್ಶಿ ಎನ್.ಎಂ.ನಾಗೇಶ್, ಖಜಾಂಚಿ ವಿ.ಜಿ.ದಿನೇಶ್, ಪ್ರಾಥಮಿಕ ಶಿಕ್ಷಕರ ಸಂಘದ ಮೈಸೂರು ವಿಭಾಗೀಯ ಉಪಾಧ್ಯಕ್ಷ ಸಿ.ಕೆ.ಶಿವಕುಮಾರ್ ಮತ್ತಿತರು ಇದ್ದರು.
ವೀರಾಜಪೇಟೆ
ವೀರಾಜಪೇಟೆ ತಾಲೂಕು ನೌಕರರ ಸಂಘದ ವತಿಯಿಂದಲೂ ತಾಲೂಕು ಕಚೇರಿ ಮುಂದೆ ಪ್ರತಿಭಟಿಸಿ ರಾಜ್ಯ ಸರಕಾರಿ ನೌಕರರಿಗೆ ಸರಕಾರ ಎಲ್ಲ ರೀತಿಯ ರಕ್ಷಣೆ ಒದಗಿಸಬೇಕೆಂದು ಒತ್ತಾಯಿಸಿ ಶಿರಸ್ತೆದಾರರ ಮೂಲಕ ಕೊಡಗು ಜಿಲ್ಲಾಧಿಕಾರಿಗೆ ಸಂಘದ ಅಧ್ಯಕ್ಷ ಗುರುರಾಜ್ ಮನವಿ ಸಲ್ಲಿಸಿದರು.
ಜಿಲ್ಲಾ ಕಂದಾಯ ನೌಕರರ ಸಂಘದ ಅಧ್ಯಕ್ಷ . ಸಿ.ಪ್ರಕಾಶ್ ಪಳಂಗಪ್ಪ ಇಂದಿನ ಪರಿಸ್ಥಿತಿಯಲ್ಲಿ ಸರಕಾರಿ ನೌಕರರಿಗೆ ಸೂಕ್ತ ರಕ್ಷಣೆ ಅಗತ್ಯ ಎಂದು ಹೇಳಿದರು. ಸಂಘದ ಮಾಜಿ ಅಧ್ಯಕ್ಷ ಅರುಣ್ ಕುಮಾರ್, ಸಂಘದ ಎ.ವಿ.ಮಂಜುನಾಥ್, ಕಾರ್ಯದರ್ಶಿ ಬಿ.ಟಿ.ದೇವರಾಜ್, ಮತ್ತಿತರರು ಮಾತನಾಡಿದರು. ಪ್ರತಿಭಟನೆ ಹಾಗೂ ಖಂಡನಾ ಸಭೆಯಲ್ಲಿ ತಾಲೂಕಿನ ಸಂಘದ ಪದಾಧಿಕಾರಿಗಳಾದ ಎ.ಬಿ.ಲಲಿತ, ಭಾಗ್ಯಲಕ್ಷ್ಮಿ, ವಿಶ್ವನಾಥ್ ಇಲ್ಲಿನ ತಾಲೂಕು ಕಚೇರಿಯ ವಿವಿಧ ಇಲಾಖೆಗಳ ನೌಕರರು ಪಾಲ್ಗೊಂಡಿದ್ದರು.