ಮಡಿಕೇರಿ ಜೂ.12 : ಸತ್ತವರಿಗೆ ಪಿಂಡ ಪ್ರದಾನ ಮಾಡುವುದು ಕೊಡವ ಸಂಸ್ಕøತಿಯ ಅವಿಭಾಜ್ಯ ಅಂಗವಾಗಿದ್ದು, ಕೊರೊನಾ ಲಾಕ್ ಡೌನ್ ಸಡಿಲಗೊಂಡಿದ್ದರೂ ಈ ಕ್ರಿಯೆಗೆ ಭಾಗಮಂಡಲದಲ್ಲಿ ಅವಕಾಶ ನೀಡದಿರುವುದು ಕೊಡವರ ಧಾರ್ಮಿಕ ಹಕ್ಕಿಗೆ ಚ್ಯುತಿ ತಂದಂತಾಗಿದೆ ಎಂದು ತಲಕಾವೇರಿ ಮೂಲ ಸ್ವರೂಪ ರಕ್ಷಣಾ ವೇದಿಕೆ ಅಸಮಾಧಾನ ವ್ಯಕ್ತಪಡಿಸಿದೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ವೇದಿಕೆಯ ಪ್ರಧಾನ ಕಾರ್ಯದರ್ಶಿ ಉಳ್ಳಿಯಡ ಎಂ. ಪೂವಯ್ಯ ಅವರು, ಕೊಡವ ಜನಾಂಗದಲ್ಲಿ ಕುಟುಂಬದ ವ್ಯಕ್ತಿಯೊಬ್ಬರು ಮೃತ ಪಟ್ಟಾಗ ಅವರ ತಿಥಿ ಕರ್ಮಾಂತರಗಳು ಮುಗಿದ ಬಳಿಕ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಪಿಂಡ ಪ್ರದಾನ ಮಾಡುವುದು ಪ್ರಮುಖ ಧಾರ್ಮಿಕ ಸಂಪ್ರದಾಯಗಳಲ್ಲಿ ಒಂದಾಗಿದೆ. ಮೃತಪಟ್ಟ ವ್ಯಕ್ತಿಯ ಆತ್ಮಕ್ಕೆ ಮೋಕ್ಷ ದೊರೆತು ಆತ ಕುಟುಂಬದ ಮೂಲ ಪುರುಷರ(ಕಾರೋಣ) ಪಟ್ಟಿಗೆ ಸೇರುತ್ತಾರೆ ಎನ್ನುವ ನಂಬಿಕೆ ಕೊಡವರದ್ದಾಗಿದೆ.

ಯಾವುದೇ ವ್ಯಕ್ತಿ ನಿಧನರಾದ 16 ರಿಂದ 180 ದಿನಗಳ ಒಳಗೆ ಈ ಕಾರ್ಯ ವಿಧಿವತ್ತಾಗಿ ನಡೆಯ ಬೇಕಾಗಿದೆ. ಈ ಕ್ರಿಯೆ ನಡೆಯುವವರೆಗೆ ಕುಟುಂಬದ ಸದಸ್ಯರು ಕಠಿಣ ವ್ರತವನ್ನು ಪಾಲಿಸಬೇಕಾಗಿರುವುದು ಹಿಂದಿನಿಂದಲೂ ಬಂದಿರುವ ಸಂಪ್ರದಾಯವಾಗಿದ್ದು, ಈ ಹಿನ್ನೆಲೆಯಲ್ಲಿ ಪಿಂಡ ಪ್ರದಾನದಂತಹ ಧಾರ್ಮಿಕ ಕ್ರಿಯೆ ಸಮಯ ಸಂದರ್ಭಕ್ಕೆ ಅನುಗುಣವಾಗಿ ಸಹಜವಾಗಿ ನಡೆಯಬೇಕಾಗಿರುವುದು ಅಗತ್ಯವಿದೆ ಎಂದು ಪ್ರತಿಪಾದಿಸಿದರು. ಆದರೆ, ಜೂ.8 ರಿಂದ ಲಾಕ್ ಡೌನ್ ಸಡಿಲಗೊಂಡು ಎಲ್ಲಾ ಚಟುವಟಿಕೆಗಳನ್ನು ಪುನರಾರಂಭಿಸ ಲಾಗಿದ್ದರೂ ಪಿಂಡ ಪ್ರದಾನಕ್ಕೆ ಅವಕಾಶ ನೀಡದಿರುವುದು ಅಚ್ಚರಿ ಮೂಡಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಷರತ್ತಿಗೆ ಒಳಪಟ್ಟು ಧಾರ್ಮಿಕ ಕೇಂದ್ರಗಳು ಹೊಟೇಲ್, ರೆಸಾರ್ಟ್, ಅಂಗಡಿ ಮುಂಗಟ್ಟುಗಳು, ಹೋಂ ಸ್ಟೇಗಳನ್ನು ತೆರೆಯಲು ಅವಕಾಶ ಮಾಡಿಕೊಡಲಾಗಿದ್ದು, ಪಿಂಡ ಪ್ರದಾನಕ್ಕೆ ಮಾತ್ರ ಅವಕಾಶ ನೀಡದಿರುವುದರ ಔಚಿತ್ಯವೇನು ಎಂದು ಪ್ರಶ್ನಿಸಿದ ಪೂವಯ್ಯ, ಈ ಕ್ರಿಯೆಯ ಮಹತ್ವದ ಬಗ್ಗೆ ತಲಕಾವೇರಿ ಭಾಗಮಂಡಲ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯು ಜಿಲ್ಲಾಡಳಿತಕ್ಕೆ ಮನವರಿಕೆ ಮಾಡಿಕೊಡಬೇಕಾಗಿತ್ತು ಎಂದರು.

ಈ ಸಂದರ್ಭವನ್ನು ಬಳಸಿಕೊಂಡು ಕೆಲವರು ಅರ್ಚಕರ ಮನೆಯಲ್ಲಿ ಪಿಂಡ ಪ್ರದಾನದ ಕ್ರಿಯೆಗಳನ್ನು ಮುಗಿಸಿ ಕಾವೇರಿಯಲ್ಲಿ ಪಿಂಡವನ್ನು ಬಿಡುವ ಪ್ರಕ್ರಿಯೆಗಳು ನಡೆಯುತ್ತಿದೆ. ಕದ್ದು ಮುಚ್ಚಿ ಇಂತಹ ಕ್ರಿಯೆಗಳನ್ನು ನಡೆಸುವುದರ ಬದಲು ಜಿಲ್ಲಾಡಳಿತ ಕೆಲವು ನಿರ್ಬಂಧ ಗಳೊಂದಿಗೆ ಮುಕ್ತವಾಗಿ ಅವಕಾಶ ನೀಡಬೇಕೆಂದು ಒತ್ತಾಯಿಸಿದರು.

ವೇದಿಕೆಯ ಅಧ್ಯಕ್ಷ ಕೊಕ್ಕಲೇರ ಎ.ಕಾರ್ಯಪ್ಪ ಮಾತನಾಡಿ, ಪಿಂಡ ಪ್ರದಾನ ಕೊಡವ ಸಂಸ್ಕøತಿಯಲ್ಲಿ ಮಹತ್ವದ ಕ್ರಿಯೆಯಾಗಿದೆ. ವಿವಾಹಕ್ಕಿರುವ ಮಹತ್ವಕ್ಕಿಂತಲೂ ಈ ಕ್ರಿಯೆಗೆ ಹೆಚ್ಚಿನ ಪ್ರಾಧಾನ್ಯತೆ ಇದೆ. ಕುಟುಂಬದ ಸದಸ್ಯರು ಕಟ್ಟುನಿಟ್ಟಿನ ವ್ರತಾಚರಣೆಯ ಮೂಲಕ ನಡೆಸಲಾಗುವ ಈ ಕ್ರಿಯೆಗೆ ನಿರ್ಬಂಧ ವಿಧಿಸುವುದು ಸರಿಯಲ್ಲವೆಂದರು. ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಪ್ರಮುಖರಾದ ಮಣವಟ್ಟೀರ ದೊರೆ ಸೋಮಣ್ಣ ಹಾಗೂ ಮಣವಟ್ಟೀರ ಪಾಪು ಚಂಗಪ್ಪ ಉಪಸ್ಥಿತರಿದ್ದರು.

ರಾಜೀವ್‍ಬೋಪಯ್ಯ ಒತ್ತಾಯ

ಶ್ರೀಮಂಗಲ: ತಲಕಾವೇರಿ - ಭಾಗಮಂಡಲ ಕ್ಷೇತ್ರ ಕೊಡಗಿನ ಮೂಲ ನಿವಾಸಿಗಳ ಧಾರ್ಮಿಕ ಪುಣ್ಯ ಕ್ಷೇತ್ರವಾಗಿದ್ದು, ಕೋವಿಡ್-19 ಹಿನ್ನಲೆ ಲಾಕ್‍ಡೌನ್‍ನಿಂದ ಮುಚ್ಚಲ್ಪಟ್ಟಿದ್ದ ಎಲ್ಲಾ ಧಾರ್ಮಿಕ ಕ್ಷೇತ್ರ, ಇದೀಗ ಮಾರ್ಗಸೂಚಿಯಂತೆ ತೆರೆಯಲು ಆದೇಶವಿದೆ, ಆದರೂ ಕೊಡಗಿನ ಭಾಗಮಂಡಲ - ತಲಕಾವೇರಿ ಕ್ಷೇತ್ರದಲ್ಲಿ ಧಾರ್ಮಿಕ ಆಚರಣೆಯ ಮುಖ್ಯ ಭಾಗವಾದ ಪಿಂಡ ಪ್ರದಾನಕ್ಕೆ ಅವಕಾಶ ಕಲ್ಪಿಸದೇ ಇರುವುದು ಸರಿಯಲ್ಲ. ಈ ಪದ್ಧತಿ ಮಾಡಲು ಕೂಡಲೇ ಅವಕಾಶ ಕಲ್ಪಿಸಬೇಕೆಂದು ಪೆÇನ್ನಂಪೇಟೆ ಕೊಡವ ಸಮಾಜ ಅಧ್ಯಕ್ಷ ಚೊಟ್ಟೆಕ್‍ಮಾಡ ರಾಜೀವ್ ಬೋಪಯ್ಯ ಆಗ್ರಹಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ಈ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತಾದಿಗಳಿಗೆ ಪಿಂಡ ಪ್ರದಾನ ಮಾಡದೇ, ಧಾರ್ಮಿಕ ಪದ್ಧತಿ ಮತ್ತು ಭೇಟಿಯ ಉದ್ದೇಶ ಪರಿಪೂರ್ಣವಾಗುವುದಿಲ್ಲ. ಕೊಡಗಿನ ಸಂಸ್ಕøತಿಯಲ್ಲಿ ಪಿಂಡ ಪ್ರದಾನ ಮಾಡುವುದು ಅತ್ಯಂತ ಮುಖ್ಯ ಪದ್ಧತಿಯಾಗಿದೆ. ಇದಕ್ಕೆ ಅವಕಾಶ ಕಲ್ಪಿಸದೇ ಇರುವುದು ಕೊಡಗಿನ ಸಂಸ್ಕøತಿ ಬಗ್ಗೆ ಅರಿವು ಇಲ್ಲದೇ ಮಾಡುವ ನಿಯಮವಾಗಿದೆ. ಈ ಬಗ್ಗೆ ಸರಕಾರ ಮನವರಿಕೆ ಮಾಡಿಕೊಂಡು ಜಿಲ್ಲೆಯ ಜನರ ಧಾರ್ಮಿಕ ಭಾವನೆಯನ್ನು ಗೌರವಿಸಬೇಕು ಎಂದು ರಾಜೀವ್‍ಬೋಪಯ್ಯ ಒತ್ತಾಯಿಸಿದ್ದಾರೆ.

ಕೊಡÀವ ಸಮಾಜಗಳ ಒಕ್ಕೂಟ ಒತ್ತಾಯ

ಮಡಿಕೇರಿ : ಭಾಗಮಂಡಲ ಕ್ಷೇತ್ರದಲ್ಲಿ ಪಿಂಡಪ್ರದಾನಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ಕೊಡವ ಸಮಾಜಗಳ ಒಕ್ಕೂಟದ ಮಾಸಿಕ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಅಧ್ಯಕ್ಷತೆಯಲ್ಲಿ ಬಾಳುಗೋಡುವಿನಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಧಾರಕೈಗೊಳ್ಳಲಾಯಿತು.

ಕೊಡವರ ಕುಲ ದೇವತೆಯ ಉಗಮ ಸ್ಥಾನ ತಲಕಾವೇರಿಯಲ್ಲಿ ಪೂಜೆ ಹಾಗೂ ಸಾವನ್ನಪ್ಪಿದ್ದವರಿಗೆ ಭಾಗಮಂಡಲದಲ್ಲಿ ಪಿಂಡ ಪ್ರದಾನ ಮಾಡಲು ಅವಕಾಶ ನೀಡಬೇಕು, ಜಿಲ್ಲೆಯಲ್ಲಿ ಹೋಂಸ್ಟೇ ತೆರೆಯಲು ಅವಕಾಶ ನೀಡಿದ್ದು, ಅದನ್ನು ಒಕ್ಕೂಟ ವಿರೋಧಿಸಿ ಸಹಜ ಸ್ಥಿತಿಗೆ ಮರಳುವವರೆಗೂ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ನಿರಾಕರಿಸಬೇಕು ಎಂದು ಒತ್ತಾಯಿಸಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಬೆಂಗಳೂರು ಕೊಡÀವ ಸಮಾಜದ ಮಾಜಿ ಅಧ್ಯಕ್ಷ ಮುಲ್ಲೇಂಗಡ ದಾದಾ ಬೆಳ್ಯಪ್ಪ, ಒಕ್ಕೂಟದ ಖಜಾಂಜಿ ಚಿಯಕಪೂವಂಡ ಕಾಶಿಯಪ್ಪ, ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ, ಅಮ್ಮತ್ತಿ, ಕುಶಾಲನಗರ, ಚೆಯ್ಯಂಡಾಣೆ, ಸುಂಟಿಕೊಪ್ಪ, ವೀರಾಜಪೇಟೆ, ಮಕ್ಕಂದೂರು ಕೊಡವ ಸಮಾಜದ ಅಧ್ಯಕ್ಷರುಗಳು ಭಾಗವಹಿಸಿದ್ದರು.