ಮಡಿಕೇರಿ ಜೂ. 6 : ಯುವತಿಯೊಬ್ಬಳು ಕಾಂಗ್ರೆಸ್ ಮುಖಂಡರುಗಳಾದ ಸೋನಿಯಾಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರವಾದಿ ಪೈಗಂಬರರ ಬಗ್ಗೆ ಫೇಸ್ ಬುಕ್ ಖಾತೆಯಲ್ಲಿ ಅವಹೇಳನಾಕಾರಿ ಪೋಸ್ಟ್ ಮಾಡಿದ್ದು, ಆಕೆಯನ್ನು ಕೂಡಲೇ ಜಿಲ್ಲೆಯಿಂದ ಗಡೀಪಾರು ಮಾಡುವಂತೆ ಒತ್ತಾಯಿಸಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಕೊಡಗು ಜಿಲ್ಲಾ ಘಟಕ ನಗರದಲ್ಲಿ ಪ್ರತಿಭಟನೆ ನಡೆಸಿತು.
ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ಕಾರ್ಯಕರ್ತರು ಘೋಷಣೆಗಳನ್ನು ಕೂಗಿ ಉಪವಿಭಾಗಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭ ಮಾತನಾಡಿದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನೀರಾ ಮೈನಾ, ದೇಶ ಕಂಡ ಅಪ್ರತಿಮ ನಾಯಕ ರಾಜೀವ್ ಗಾಂಧಿಯವರನ್ನು ಕೊಲೆಗಾರ ಎಂದು ನೇರ ಆರೋಪ ಮಾಡಿದ್ದು, ಇದರಿಂದ ಲಕ್ಷಾಂತರ ಕಾಂಗ್ರೆಸ್ ಕಾರ್ಯಕರ್ತರಿಗೆ, ಅಭಿಮಾನಿಗಳಿಗೆ ನೋವಾಗಿದೆ. ಜಿಲ್ಲೆಯ ಶಾಂತಿ, ಸೌಹಾರ್ದತೆ ಕಾಪಾಡುವ ಸಂದರ್ಭದಲ್ಲಿ ಕೋಮು, ಗಲಭೆಗೆ ಪ್ರಚೋದನೆ ನೀಡುವಂತಾಗಿದ್ದು, ಕೂಡಲೇ ಗಡೀಪಾರು ಮಾಡುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಖಜಾಂಚಿ ಹೆಚ್. ಎಂ. ನಂದಕುಮಾರ್, ಕಾಂಗ್ರೆಸ್ ಮುಖಂಡ ವಿ. ಪಿ. ಶಶಿಧರ್, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸುರಯ್ಯ ಅಬ್ರಾರ್, ಆರ್ಜಿಪಿಆರ್ಎಸ್ ವೀಕ್ಷಕ ಟಿ. ಎಂ. ಅಯ್ಯಪ್ಪ, ಮಾಜಿ ನಗರಸಭಾ ಅಧ್ಯಕ್ಷೆ ಜುಲೇಕಾಬಿ, ಮಾಜಿ ಸದಸ್ಯ ಪ್ರಕಾಶ್ ಆಚಾರ್ಯ, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಾಫಿ ಕೊಟ್ಟಮುಡಿ, ನಗರ ಪ್ರಧಾನ ಕಾರ್ಯದರ್ಶಿ ಪ್ರಭುರೈ, ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಮಿನಾಜ್ ಪ್ರವೀಣ್, ರಾಹುಲ್ ಬ್ರಿಗೇಡ್ ನಗರಾಧ್ಯಕ್ಷ ಯತೀಶ್ ಕುಮಾರ್, ವಲಯಾಧ್ಯಕ್ಷ ಮಂದ್ರಿರ ಮೋಹನ್ದಾಸ್, ನಗರ ಮಹಿಳಾಧ್ಯಕ್ಷೆ ಹೊಟ್ಟೆಯಂಡ ಫ್ಯಾನ್ಸಿ, ಬ್ಲಾಕ್ ಉಪಾಧ್ಯಕ್ಷ ವಿ.ಜಿ. ಮೋಹನ್, ಪ್ರಮುಖರಾದ ಟಿ.ಪಿ. ರಾಜೇಂದ್ರ, ಎಂ.ಎ. ಹನೀಫ್, ರವಿಗೌಡ, ಟಿ. ಪಿ. ನಾಣಯ್ಯ, ಹಫೀಸ್ ಬಾಯ್, ಇಸ್ಮಾಯಿಲ್, ಮುನೀರ್ ಮಾಚರ್, ವಸಂತ ಭಟ್ ಸೇರಿದಂತೆ ಮತ್ತಿತರ ಪ್ರಮುಖರು ಹಾಜರಿದ್ದರು.