ಮಡಿಕೇರಿ, ಮೇ 30: ಜಂಬೂರು ಮತ್ತು ಮದೆ ಗ್ರಾಮದ ಬಳಿ ಸಂತ್ರಸ್ತರಿಗೆ ನಿರ್ಮಿಸಿರುವ ಮನೆ ಹಸ್ತಾಂತರ ಕಾರ್ಯವು ಜೂನ್ 4 ರಂದು ನಡೆಯಲಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ನಿರ್ದೇಶನ ನೀಡಿದ್ದಾರೆ.
ಸಂತ್ರಸ್ತರಿಗೆ ನಿರ್ಮಿಸಿರುವ ಮನೆ ಹಸ್ತಾಂತರ ಸಂಬಂಧ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಂಬೂರು ಮತ್ತು ಮದೆ ಬಳಿ ನಿರ್ಮಿಸಿರುವ ಮನೆಗಳನ್ನು ಜೂನ್ 4 ರಂದು ಜಿಲ್ಲಾ ಉಸ್ತುವಾರಿ ಸಚಿವರು ಹಸ್ತಾಂತರಿಸಲಿದ್ದಾರೆ. ಹಾಗೆಯೇ ಕಂದಾಯ ಮತ್ತು ಗೃಹ ಸಚಿವರು ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಮನೆ ಹಸ್ತಾಂತರ ಸಂದರ್ಭದಲ್ಲಿ ವೇದಿಕೆ ಕಾರ್ಯಕ್ರಮ ಇರುವುದಿಲ್ಲ. ಸಾಂಕೇತಿಕವಾಗಿ ಸಂತ್ರಸ್ತರಿಗೆ ಹಕ್ಕುಪತ್ರ ವಿತರಿಸಲಾಗುತ್ತದೆ. ಜೂನ್ 1 ರಿಂದ ಮುಂಗಾರು ಪ್ರವೇಶವಾಗುವ ಹಿನ್ನೆಲೆ ಮನೆ ಹಸ್ತಾಂತರ ಕಾರ್ಯಕ್ಕೆ ಅಗತ್ಯ ತಯಾರಿ ಮಾಡಿಕೊಳ್ಳುವಂತೆ ನಿರ್ದೇಶನ ನೀಡಿದರು.
ಜಂಬೂರು-ಮಾದಾಪುರ ರಸ್ತೆ ಹಾಗೂ ಮದೆನಾಡು ರಸ್ತೆಯನ್ನು ಸರಿಪಡಿಸಬೇಕು. ಮನೆ ಪಟ್ಟಿಯನ್ನು ಕೂಡಲೇ ಒದಗಿಸಬೇಕು. ಶಿಷ್ಟಾಚಾರ ದಂತೆ ಆಹ್ವಾನ ಪತ್ರ ಮುದ್ರಿಸುವುದು ಮತ್ತಿತರ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಪಿ. ಸುಮನ್ ಅವರು ಮನೆ ಹಸ್ತಾಂತರ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳು ಮತ್ತಿತರ ಬಗ್ಗೆ ಹಲವು ಮಾಹಿತಿ ನೀಡಿದರು.
ರಾಜೀವ್ ಗಾಂಧಿ ವಸತಿ ನಿಗಮದ ಇಂಜಿನಿಯರ್ ಶ್ರೀನಿವಾಸ್ ಜಂಬೂರಿನಲ್ಲಿ 383, ಮದೆ ಗ್ರಾಮದಲ್ಲಿ 80 ಒಟ್ಟು 463 ಮನೆಗಳು ಹಸ್ತಾಂತರಕ್ಕೆ ಸಿದ್ಧವಾಗಿದೆ. ಮನೆ ಹಸ್ತಾಂತರ ಸಂಬಂಧ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹ, ಉಪ ವಿಭಾಗಾಧಿಕಾರಿ ಟಿ. ಜವರೇಗೌಡ, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಮದನ್ ಮೋಹನ್, ಜಿ.ಪಂ. ಇಂಜಿನಿಯರ್ ಶ್ರೀಕಂಠಯ್ಯ, ಪೌರಾಯುಕ್ತ ಎಂ.ಎಲ್. ರಮೇಶ್, ಭೂ ದಾಖಲೆ ಉಪ ನಿರ್ದೇಶಕ ಶ್ರೀನಿವಾಸ್, ಕುಟುಂಬ ಕಲ್ಯಾಣಾಧಿಕಾರಿ ಡಾ. ಆನಂದ್, ಡಾ. ಎಸ್.ಹೆಚ್. ಮಹೇಶ್, ಸಿ. ಜಗನ್ನಾಥ್, ತಾ.ಪಂ. ಇಒ ಲಕ್ಷ್ಮೀ, ಸುನಿಲ್ ಕುಮಾರ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ರೇಷ್ಮ, ಪ್ರಾದೇಶಿಕ ಸಾರಿಗೆ ಅಧಿಕಾರಿ ಮಂಜುನಾಥ್ ಶಿರಾಲಿ, ತಹಶೀಲ್ದಾರ್ ಮಹೇಶ್, ಗೋವಿಂದ ರಾಜು, ಪ.ಪಂ. ಮುಖ್ಯಾಧಿಕಾರಿ ಸುಜಯ್, ಜಿಲ್ಲಾ ಉಸ್ತುವಾರಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಎಂ.ಕೆ. ಸ್ವಾಮಿ ಇತರರು ಇದ್ದರು.