ವೀರಾಜಪೇಟೆ, ಮೇ 19: ಸತತವಾಗಿ ಕಳೆದ 40 ತಿಂಗಳು ಗಳಿಂದ ಮಳೆಗಾಲದಲ್ಲಿ ಹಾನಿಗೊಳ ಗಾಗಿ ಸಂಪರ್ಕ ಕಡಿತಗೊಳ್ಳುತ್ತಿದ್ದ, ಕೊಡಗು-ಕೇರಳ ರಾಜ್ಯ ಹೆದ್ದಾರಿಯ ನಡುವೆ ಸಂಪರ್ಕ ಕಲ್ಪಿಸುವ ಕೊಣನೂರು-ಮಾಕುಟ್ಟ ಅಂತರ ರಾಜ್ಯ ಹೆದ್ದಾರಿಯ ಕಾಮಗಾರಿಯು ತ್ವರಿತಗತಿಯಿಂದ ಸಾಗುತ್ತಿದ್ದು ಮೇ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದು ವೀರಾಜಪೇಟೆ ವಿಭಾಗದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಅತಿಯಾದ ಬೆಟ್ಟಗುಡ್ಡಗಳಿಂದ ಕೂಡಿದ ದಟ್ಟ ಅರಣ್ಯದ ಮೂಲಕ ನೆರೆಯ ಕೇರಳ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಕೊಣನೂರು-ಮಾಕುಟ್ಟ ರಾಜ್ಯ ಹೆದ್ದಾರಿಯು ಕಳೆದ 40 ತಿಂಗಳುಗಳಲ್ಲಿ ಹಾನಿಗೊಳಗಾಗಿ ಬಂದ್ ಆಗಿ ಎರಡು ರಾಜ್ಯಗಳÀ ಜನರು ಸಾಕಷ್ಟು ಸಮಸ್ಯೆ ಅನುಭವಿಸಿದ್ದರು.

ಕಳೆದ 2017 ರ ಜುಲೈನಲ್ಲಿ ಮಳೆಯಿಂದಾಗಿ ಸಮೀಪದ ಪೆರುಂಬಾಡಿಯಲ್ಲಿನ ಕೆರೆ ಜಖಂಗೊಂಡು ಹೆದ್ದಾರಿ ಕೊಚ್ಚಿಹೋಗಿ ಕೆಲವು ತಿಂಗಳುಗಳ ಕಾಲ ಸಂಚಾರ ಬಂದ್ ಆಗಿತ್ತು. 2018 ರಲ್ಲಿ ಜೂನ್ ತಿಂಗಳಲ್ಲಿ ಸುರಿದ ಭಾರೀ ಮಳೆಗೆ ಮಾಕುಟ್ಟ ಹೆದ್ದಾರಿಯುದ್ದಕ್ಕೂ ಹಲವೆಡೆ ಗುಡ್ಡ ಹಾಗೂ ಗುಡ್ಡ ಮೇಲಿನ ಮರಗಳು ರಸ್ತೆಯ ಮೇಲೆ ಬಿದ್ದರೆ, ಕೆಲವೆಡೆ ನೀರಿನ ಹರಿವಿಗೆ ಸಿಲುಕಿ ರಸ್ತೆಗಳೇ ಕೊಚ್ಚಿಹೋಗಿ ತಿಂಗಳುಗಟ್ಟಲೆ ರಸ್ತೆ ಬಂದ್ ಆಗಿತ್ತು. ಬಳಿಕ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಅಲ್ಲಲ್ಲಿ ಕಾಂಕ್ರೀಟ್ ಹಾಗೂ ಗ್ರೇಬಿಯನ್ ಮೆಸ್ ಬಳಸಿ ತಡೆಗೋಡೆ ನಿರ್ಮಿಸಿ ಹಲವು ತಿಂಗಳುಗಳ ಬಳಿಕ ಹೆದ್ದಾರಿಯಲ್ಲಿ ಸಂಚಾರ ಆರಂಭಗೊಂಡಿತ್ತು. 2019 ರ ಆಗಸ್ಟ್‍ನಲ್ಲಿ ದಕ್ಷಿಣ ಕೊಡಗಿನಾದ್ಯಂತ ಸುರಿದ ಭಾರೀ ಮಳೆಗೆ ಮಾಕುಟ್ಟ ಹೆದ್ದಾರಿಗೆ ನೂತನವಾಗಿ ನಿರ್ಮಿಸಿದ್ದ ಕಾಂಕ್ರೀಟ್ ತಡೆಗೋಡೆ ಕೆಲವೆಡೆ ಕೊಚ್ಚಿಹೋಗಿ ಮತ್ತೆ ರಸ್ತೆ ಬಂದ್ ಆಗಿತ್ತು. ಕೆಲವು ದಿನಗಳ ಬಳಿಕ ತಾತ್ಕಾಲಿಕ ಕಾಮಗಾರಿ ಕೈಗೊಂಡು ಕೆಲವು ನಿರ್ಬಂಧಗಳ ನಡುವೆ ಹೆದ್ದಾರಿಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತಾದರೂ ಕಾಮಗಾರಿ ಅಪೂರ್ಣಗೊಂಡಿತ್ತು.

ಈಗ ಸುಮಾರು ರೂ. 5 ಕೋಟಿ ವೆಚ್ಚದಲ್ಲಿ ಹೆದ್ದಾರಿಯಲ್ಲಿ ಕಾಮಗಾರಿ ನಡೆಯುತ್ತಿದ್ದು, ಈ ತಿಂಗಳಾಂತ್ಯಕ್ಕೆ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ. ಕಳೆದ ಸಾಲಿನ ಮಳೆಗೆ ರಸ್ತೆ ಕೊಚ್ಚಿಹೋಗಿರುವ ಎರಡು ತಿರುವುಗಳಲ್ಲಿ ಬೃಹತ್ ತಡೆಗೋಡೆಗಳನ್ನು ನಿರ್ಮಿಸಲಾಗಿದೆ. ಒಂದು ತಿರುವಿನಲ್ಲಿ ಗುಜರಾತ್ ಮಾದರಿಯ ಗ್ರೆÉೀಬಿಯನ್ ಮೆಸ್ ಬಳಸಿ ಸುಮಾರು 10 ಮೀ. ಎತ್ತರದ ತಡೆಗೋಡೆಯನ್ನು ನಿರ್ಮಿಸಲಾಗಿದೆ. ಮತ್ತೊಂದು ತಿರುವಿನಲ್ಲಿ ರಸ್ತೆ ಬದಿಯ ಕಂದಕಕ್ಕೆ ಕಾಂಕ್ರೀಟ್ ತಡೆಗೋಡೆ ನಿರ್ಮಿಸಿ, ಸುಮಾರು 2 ಸಾವಿರ ಲೋಡ್‍ಗಳಷ್ಟು ಮಣ್ಣು ಸುರಿದು ರಸ್ತೆಯನ್ನು ವಿಸ್ತರಿಸಲಾಗಿದೆ. ಇದಲ್ಲದೆ 5 ತಿರುವುಗಳಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಚಿಕ್ಕ ಗಾತ್ರದ ಸೇತುವೆ ಹಾಗೂ ಅದಕ್ಕೆ ಹೊಂದಿಕೊಂಡಂತೆ ತಡೆಗೋಡೆ ಕಾಮಗಾರಿ ಕೈಗೊಳ್ಳಲಾಗಿದೆ. ಜತೆಗೆ ನೀರು ಹರಿಯಲು ಅಲ್ಲಲ್ಲಿ ಕಾಂಕ್ರೀಟ್ ಚರಂಡಿಯ ಕಾಮಗಾರಿ ಕೈಗೊಳ್ಳಲಾಗಿದೆ. ಜತೆಗೆ ರಸ್ತೆ ಹಾನಿಗೊಳಗಾಗಿರುವ ಕೆಲವೆಡೆ ರಸ್ತೆ ಕಾಮಗಾರಿಯು ನಡೆಯಲಿದೆ. ಪೆರುಂಬಾಡಿ ಕೆರೆಯ ಹೆಚ್ಚುವರಿ ನೀರು ಸರಾಗವಾಗಿ ಹರಿದು ಹೋಗಲು ಮಾಡಲಾಗಿರುವ ಕಿರು ಸೇತುವೆ ಕಾಮಗಾರಿ ಪೂರ್ಣಗೊಂಡಿದೆ.

ನೀರು ಅಲ್ಲಲ್ಲಿ ರಸ್ತೆಯ ಮೇಲಿನಿಂದ ಕಂದಕದ ಕಡೆ ಹರಿದರೆ ರಸ್ತೆ ಕೊಚ್ಚಿ ಹೋಗುವ ಅಪಾಯವಿರುವುದರಿಂದ ರಸ್ತೆಯ ಒಂದು ಬದಿಗೆ ಅಂದರೆ ಗುಡ್ಡದ ಕಡೆಗೆ ರಸ್ತೆಯನ್ನು ಇಳಿಜಾರುಗೊಳಿ ಸಲಾಗುತ್ತಿದೆ. ಗುಡ್ಡದ ಕಡೆಗೆ ಹರಿದ ನೀರನ್ನು ಸೂಕ್ತವಾದ ಜಾಗದಲ್ಲಿ ಕಂದಕದ ಕಡೆಗೆ ಹರಿಯುವಂತೆ ಸೂಕ್ತ ಕಾಮಗಾರಿ ಕೈಗೊಂಡಿರುವುದ ರಿಂದ ಕೊಡಗು-ಕೇರಳ ರಾಜ್ಯ ಹೆದ್ದಾರಿ ಸಂಪರ್ಕ ಸುಗಮವಾ ಗಲಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.