ಸೋಮವಾರಪೇಟೆ, ಮೇ 16: ತಾಲೂಕಿನ ಆಲೂರುಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಲಂಬಿ ಗ್ರಾಮದಲ್ಲಿ ಪತಿಯಿಂದಲೇ ಪತ್ನಿಯ ಹತ್ಯೆ ನಡೆದಿರುವ ಸಂಶಯ ವ್ಯಕ್ತವಾಗಿದ್ದು, ಎರಡು ದಿನಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.ಅರಣ್ಯ ಹಕ್ಕು ಕಾಯ್ದೆಯ ಮೂಲಕ ಜಮೀನು ಮಂಜೂರು ಮಾಡಿ ಸರ್ಕಾರದಿಂದಲೇ ಮನೆ ನಿರ್ಮಿಸಿಕೊಟ್ಟಿರುವ ಮಾಲಂಬಿ ಗ್ರಾಮದ ಜೇನುಕುರುಬರ ಕುಮಾರ ಎಂಬಾತನ ಪತ್ನಿ, ನಾಗಿ (45) ಎಂಬಾಕೆಯ ಮೃತದೇಹ ಇಂದು ಬೆಳಗ್ಗೆ ಕಂಡುಬಂದಿದ್ದು, ಘಟನೆಗೆ ಸಂಬಂಧಿಸಿದಂತೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕುಮಾರ ಮತ್ತು ನಾಗಿ ಈರ್ವರು ಮಾಲಂಬಿ ಗ್ರಾಮದ ಮನೆಯಲ್ಲಿ ಕಳೆದ ಅನೇಕ ವರ್ಷಗಳಿಂದ ವಾಸವಿದ್ದು, ತಾ. 14ರಂದು ಈರ್ವರ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದೆ. ಮದ್ಯಪಾನ ಮಾಡಿದ್ದ ದಂಪತಿಯ ನಡುವೆ ಕಲಹ ವಿಕೋಪಕ್ಕೆ ತಿರುಗಿದ್ದು, ಪತಿ ಕುಮಾರ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ ಎಂದು ಸಂಶಯಿಸಲಾಗಿದೆ. ಮನೆಯಲ್ಲಿ ಈರ್ವರ ಹೊರತು ಬೇರಿನ್ಯಾರೂ ಇರಲಿಲ್ಲ. ಇವರ ಈರ್ವರು ಪುತ್ರಿಯರನ್ನು ವಿವಾಹ ಮಾಡಲಾಗಿದ್ದು, ಬೇರೆಡೆ ನೆಲೆಸಿದ್ದಾರೆ. ತಾ. 14ರ ನಂತರ ನಾಗಿ ಕಾಣದೇ ಇದ್ದ ಸಂದರ್ಭ ಗ್ರಾಮಸ್ಥರಿಗೆ ಸಂಶಯ ಬಂದಿದ್ದು, ಇಂದು ಮನೆಯ ಬಳಿ ತೆರಳಿದ ಸಂದರ್ಭ ಮೃತದೇಹ ಪತ್ತೆಯಾಗಿದೆ.ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಇಂದು ವಿಷಯ ಬೆಳಕಿಗೆ ಬರುತ್ತಿದ್ದಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ, ಶನಿವಾರಸಂತೆ ಠಾಣಾಧಿಕಾರಿ ಕೃಷ್ಣನಾಯಕ್ ಸೇರಿದಂತೆ ಸಿಬ್ಬಂದಿಗಳು ಸ್ಥಳ ಪರಿಶೀಲನೆಗೆ ತೆರಳಿದ ಸಂದರ್ಭ ಮನೆಯೊಳಗೆ ನಾಗಿಯ ಮೃತದೇಹ ಕಂಡುಬಂದಿದೆ. ತಲೆಯ ಹಿಂಭಾಗ ತೀವ್ರ ಪೆಟ್ಟಾಗಿದ್ದು, ಸ್ಥಳದಲ್ಲೇ ಸಾವನ್ನಪ್ಪಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.

ನಂತರ ಶನಿವಾರಸಂತೆ ಆಸ್ಪತ್ರೆಗೆ ಸಾಗಿಸಿ, ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಕಳೆದ ತಾ. 14ರಂದೇ ಘಟನೆ ನಡೆದಿದೆ ಎಂದು ಸಂಶಯಿಸಲಾಗಿದ್ದು, ಈ ಎರಡು ದಿನಗಳ ಕಾಲ ಪತಿ ಕುಮಾರ ಮನೆಯ ಸುತ್ತಮುತ್ತಲಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಓಡಾಡಿದ್ದಾನೆ. ಇಂದು ಮಧ್ಯಾಹ್ನ 12 ಗಂಟೆಯವರೆಗೂ ಗ್ರಾಮದಲ್ಲಿದ್ದ ಕುಮಾರ, ಪೊಲೀಸ್ ವಾಹನಗಳು ಆಗಮಿಸಿದ ನಂತರ ತಲೆಮರೆಸಿಕೊಂಡಿದ್ದಾನೆ.

ಪತ್ನಿಯನ್ನು ಕುಮಾರನೇ ಹತ್ಯೆ ಮಾಡಿರಬಹುದು ಎಂಬ ಸಂಶಯ ಬಲವಾಗಿದ್ದು, ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ ಅವರ ಮಾರ್ಗದರ್ಶನದಂತೆ ಆರೋಪಿ ಕುಮಾರನ ಬಂಧನಕ್ಕೆ ಪೊಲೀಸರು ಬಲೆಬೀಸಿದ್ದಾರೆ.