ನಾಪೋಕ್ಲು, ಮೇ 2: ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಮಾಡಲು ಮುಂದಾಗಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ಪಾಲೂರು ನಲ್ಲಿ ನಡೆದಿದೆ.
ಕೊರೊನಾ ಸೋಂಕಿನ ವಿರುದ್ಧ ಹಗಲಿರುಳು ಶ್ರಮಿಸುತ್ತಿರುವ ವೈದ್ಯರು ಪೊಲೀಸರು ಹಾಗೂ ಆಶಾ ಕಾರ್ಯಕರ್ತೆಯರ ಮೇಲೆ ರಾಜ್ಯದ ವಿವಿಧೆಡೆ ಹಲ್ಲೆ ನಡೆಯುತ್ತಿರುವ ಘಟನೆಗಳು ವರದಿಯಾಗುತ್ತಿರುವ ಸಂದರ್ಭದಲ್ಲಿ ನಾಪೋಕ್ಲುವಿನಲ್ಲೂ ಆಶಾ ಕಾರ್ಯಕರ್ತೆಯೊಬ್ಬರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪಾಲೂರು ಆಶಾ ಕಾರ್ಯಕರ್ತೆ ಹೆಚ್.ಆರ್. ಲತಾ ಮತ್ತು ಕಿರಿಯ ಆರೋಗ್ಯ ಸಹಾಯಕಿ ಸಿ.ಕೆ. ಜಲಜಾಕ್ಷಿ ಪಾಲೂರು ಗ್ರಾಮದ ನಿವೃತ್ತ ಯೋಧ ಪಿ.ಬಿ. ಬೋಪಯ್ಯ ಅವರ ಮನೆಗೆ ತೆರಳಿದ್ದ ಸಂದರ್ಭ ವಿಚಾರಣೆಗೆ ತೆರಳಿದ್ದವರನ್ನು ಗದರಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆಗೆ ಮುಂದಾಗಿದ್ದಾರೆ.
ಮೇಲಾಧಿಕಾರಿಗಳ ಸೂಚನೆಯಂತೆ ಆಶಾ ಕಾರ್ಯಕರ್ತೆ ಹೆಚ್.ಆರ್. ಲತಾ, ಕಿರಿಯ ಆರೋಗ್ಯ ಸಹಾಯಕಿ ಸಿ.ಕೆ. ಜಲಜಾಕ್ಷಿ ಹಾಗೂ ಚೇರಂಬಾಣೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ನಿಖಿಲ್ ನಾಪೋಕ್ಲು ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದಾರೆ.
ಠಾಣಾಧಿಕಾರಿ ಕಿರಣ್ ಕೇಸು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.
ಕೊರೊನಾ ಸೋಂಕಿನ ಮಾಹಿತಿ ಪಡೆಯುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಆಶಾಕಾರ್ಯಕರ್ತೆ ಮತ್ತು ಕಿರಿಯ ಆರೋಗ್ಯ ಸಹಾಯಕಿ ಮೇಲೆ ಹಲ್ಲೆಗೆ ಮುಂದಾದ ಆರೋಪಿಯ ವಿರುದ್ಧ ಕಠಿಣ ಕಾನೂನುಕ್ರಮ ಕೈಗೊಳ್ಳಬೇಕು ಎಂದು ಕೊಡಗು ಜಿಲ್ಲಾ ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಪೂರ್ಣಿಮಾ ಬಸಪ್ಪ ಒತ್ತಾಯಿಸಿದ್ದಾರೆ. -ದುಗ್ಗಳ